ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ವಿನೋಬನಗರದ ಶಿವಾಲಯದಲ್ಲಿ ಅತಿರುದ್ರ ಮಹಾಯಾಗ ಸಂಚಾಲನ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅತಿರುದ್ರ ಮಹಾಯಾಗದ ಪೂರ್ಣಾಹುತಿ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಈ ಹಿಂದೆ ಕಾಶಿಗೆ ಆಗಮಿಸಿದ್ದ ಮೋದಿಯವರು ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಲು ಮುಂದಾದಾಗ ‘ನನ್ನ ಹೆಸರು ಬೇಡ, ಭಾರತೀಯರ ಹೆಸರಿನಲ್ಲಿ ಪೂಜೆ ನಡೆಯಲಿ’ ಎಂದು ಹೇಳಿದ್ದು, ಅವರ ದೇಶ ಪ್ರೇಮ ಹಾಗೂ ಜನರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ನಾಯಕ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಈ ಯಾಗವನ್ನು ನಡೆಸಲಾಯಿತು ಎಂದರು.ಅತಿರುದ್ರ ಮಹಾಯಾಗವನ್ನು ಮಾಡುವ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು. ಶಿವ ಕೇವಲ ಜಲ ಮತ್ತು ಬಿಲ್ವಪತ್ರೆ ಇಷ್ಟ ಪಡುತ್ತಾನೆ. ಅಷ್ಟಕ್ಕೆ ಸಂತುಷ್ಟನಾಗಿ ನಮ್ಮ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ. ಲೋಕ ಕಲ್ಯಾಣಕ್ಕಾಗಿ ಹಾಗೂ ಲೋಕದ ರಾಜನಿಗಾಗಿ ಅತಿ ರುದ್ರ ಮಹಾಯಾಗ ನಡೆಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರರಂತಹವರು ಸಂಸದರಾಗುವ ಮೂಲಕ ಕೇಂದ್ರ ಮಂತ್ರಿಯಾಗಬೇಕು ಎಂದು ಹೇಳಿದರು.
ಶ್ರೀ ಉಜ್ಜಯನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಕವಲೆದುರ್ಗ ಮಠದ ಶ್ರೀ ರಾಜಗುರು ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
‘ಭಾರತೀಯರು ದೇವರನ್ನು ಪ್ರೀತಿಸುತ್ತಾರೆ’
ವಿಶ್ವದ ಬೇರೆ ರಾಷ್ಟ್ರಗಳನ್ನು ಅಣ್ಣ-ತಮ್ಮಂದಿರಿಗೆ ಹೋಲಿಸಿದರೆ ಭಾರತವನ್ನು ತಾಯಿಗೆ ಹೋಲಿಸಲಾಗಿದೆ. ಪ್ರಪಂಚದ ಇತರೆ ದೇಶಗಳಲ್ಲಿ ಇರುವ ಜನರು ತಮ್ಮ ದೇಹವನ್ನು ಪ್ರೀತಿಸುತ್ತಾರೆ, ದೇವರನ್ನು ಪ್ರೀತಿಸುವುದಿಲ್ಲ, ಆದರೆ ಭಾರತೀಯರು ದೇಹವನ್ನು ಪ್ರೀತಿಸಿ, ದೇವರನ್ನೂ ಪ್ರೀತಿಸುತ್ತಾರೆ. ಭಾರತ ಮಂದಿರಗಳ ದೇಶ, ನಮ್ಮಲ್ಲಿ ಇರುವಷ್ಟು ಮಂದಿರಗಳು ಪ್ರಪಂಚದಲ್ಲೆಲ್ಲೂ ಕಾಣಸಿಗದು ಎಂದರು.