ಬದುಕು ಸಾರ್ಥಕಗೊಳಿಸುವುದೇ ನಮ್ಮ ಗುರಿಯಾಗಲಿ: ನಾರಾಯಣ ಯಾಜಿ

KannadaprabhaNewsNetwork |  
Published : Feb 21, 2025, 12:48 AM IST
ಕೃತಿ ಬಿಡುಗಡೆಗೊಳಿಸಲಾಯಿತು  | Kannada Prabha

ಸಾರಾಂಶ

ಡಾ. ಜಿ.ಎಸ್. ಹೆಗಡೆ ಅವರ ಎರಡು ಭಾಗೀರತಿ ಹಾಗೂ ಯಕ್ಷರಂಗದ ದಕ್ಷ ಈ ಎರಡು ಕೃತಿಗಳನ್ನು ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಬಿಡುಗಡೆ ಮಾಡಲಾಯಿತು. ಅರ್ಥಧಾರಿ ನಾರಾಯಣ ಯಾಜಿ ಸಾಲೆಬೈಲ್ ಕೃತಿ ಪರಿಚಯಿಸಿದರು.

ಹೊನ್ನಾವರ: ಈ ಲೋಕಕ್ಕೆ ಬಂದ ಮೇಲೆ ಇಲ್ಲಿಂದ ಹೋಗುವ ತನಕವೂ ಇಡಿಯ ಬದುಕು ವರ್ತಮಾನವೇ ಆಗಿರುತ್ತದೆ. ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು ನಮ್ಮ ಗುರಿಯಾಗಬೇಕು. ಭಾಗೀರತಿ ಕೃತಿ ಅಂಥ ಒಬ್ಬ ಸಾರ್ಥಕ ಗೃಹಿಣಿಯ ಚಿತ್ರಣವನ್ನು ಕಟ್ಟಿಕೊಟ್ಟಿದೆ ಎಂದು ಅಂಕಣಕಾರ ಮತ್ತು ಅರ್ಥಧಾರಿ ನಾರಾಯಣ ಯಾಜಿ, ಸಾಲೆಬೈಲು ನುಡಿದರು.

ಹಡಿನಬಾಳದಲ್ಲಿ ನಡೆದ ಡಾ. ಜಿ.ಎಸ್. ಹೆಗಡೆ ಅವರ ಎರಡು ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗೀರತಿ ಕೃತಿ ಪರಿಚಯಿಸುತ್ತಾ, ಯಕ್ಷಗಾನ ಕಲಾವಿದರಾಗಿದ್ದ ಸತ್ಯ ಹೆಗಡೆ ಅವರ ಮಡದಿಯಾಗಿ ಆಕೆ ಅವರ ಸಾಧನೆಗೆ ಸಹಭಾಗಿಯಾದ ಹಲವು ನಿದರ್ಶನಗಳನ್ನು ಕೃತಿಯೊಳಗಿಂದ ಉದಾಹರಿಸಿದರು.

ನಿವೃತ್ತ ಪ್ರಾಧ್ಯಾಪಕ, ಅರ್ಥಧಾರಿ ಎನ್.ಎಂ. ಹೆಗಡೆ ಹಿಂಡ್ಮನೆ ಬಿಡುಗಡೆಯಾದ ಇನ್ನೊಂದು ಕೃತಿ ಯಕ್ಷರಂಗದ ದಕ್ಷ ಪರಿಚಯಿಸಿದರು. ಶ್ರೀಪಾದ ಹೆಗಡೆ ಅವರ ಬದುಕಿನ ಕುರಿತು ಬರೆದ ಜೀವನಯಾನವು ಉತ್ತಮ ಶೈಲಿಯಲ್ಲಿ ಮೂಡಿ ಬಂದಿದೆ. ಜತೆಗೆ ಹಲವರ ಲೇಖನದಲ್ಲಿ ಅವರ ಕಲಾ ಬದುಕು ಅನಾವರಣಗೊಂಡಿದೆ ಎಂದರು.

ಯಕ್ಷಗಾನ ಕಲಾವಿದ ಗಣೇಶ್ ನಾಯ್ಕ, ಮುಗ್ವಾ ಮಾತನಾಡಿ, ಶ್ರೀಪಾದ ಹೆಗಡೆ ಅವರು ಯಕ್ಷರಂಗದ ಸತ್ವ, ತತ್ವಗಳನ್ನು ಉಳಿಸಿದ ಯಕ್ಷಶಿಲ್ಪ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಹಾಗೂ ಅರ್ಥಧಾರಿ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಬುದುಕಿನಲ್ಲಿ ಆದರ್ಶಗಳನ್ನು ರೂಢಿಸಿಕೊಂಡ ಕಲಾವಿದ ಶ್ರೀಪಾದ ಹೆಗಡೆ ಅವರ ಹಲವು ಪಾತ್ರ ಹಾಗೂ ಜೀವನದ ಘಟನೆಗಳನ್ನು ಕೃತಿಯ ಮೂಲಕ ಅಮರವಾಗಿರಿಸಿದ್ದಾರೆ. ನಾವು ದಾಖಲೆಗಳಲ್ಲಿ ಹಿಂದುಳಿದಿದ್ದೇವೆ. ಇಂತಹ ಹಲವು ಕಲಾವಿದರ ಬದುಕನ್ನು ದಾಖಲಿಸಿ ಮುಂದಿನ ಪೀಳಿಗೆಗೆ ನೀಡುವ ಕೆಲಸ ಆಗಬೇಕಿದೆ ಎಂದರು.

ಮಯೂರ ಮತ್ತು ಅಕ್ಷಯ ಹೆಗಡೆ ಚಂಡೆ, ಮೃದಂಗ ಹಾಗೂ ತಬಲಾಗಳ ವಾದನ ಪ್ರೇಕ್ಷಕರನ್ನು ರಂಜಿಸಿತು. ಮಂಜುನಾಥ ಭಟ್ ಪ್ರಾರ್ಥಿಸಿದರು. ರಾಮ ಭಟ್ ಮತ್ತು ಹರ್ಷ ಭಟ್ ಶಾಂತಿಮಂತ್ರ ಪಠಿಸಿದರು. ಡಾ. ಜಿ.ಎಸ್. ಹೆಗಡೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಬಾಲ ಪ್ರತಿಭೆಗಳಾದ ಮಯೂರ ಹಾಗೂ ಅಕ್ಷಯ ಮತ್ತು ಹಿರಿಯರಾದ ಮಹಾಲಕ್ಷ್ಮಿ ಮತ್ತು ಭಾಗೀರತಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌