ಕನ್ನಡಪ್ರಭ ವಾರ್ತೆ ಹಾಸನ
ಅಶ್ಲೀಲ ವಿಡಿಯೋ ಇರುವ ಪೆನ್ಡ್ರೈವ್ ಅನ್ನು ದೇವರಾಜೇಗೌಡರು ಹಂಚಿಕೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಅಸಲಿಯಾಗಿ ಬಿಜೆಪಿ ಪಕ್ಷದ ಮಾಜಿ ಶಾಸಕ ಪ್ರೀತಂಗೌಡ ಇದನ್ನು ಸಾರ್ವಜನಿಕವಾಗಿ ಹರಿಬಿಟ್ಟಿದ್ದಾರೆ. ಅವರನ್ನು ಮೊದಲಿಗೆ ವಿಚಾರಣೆ ನಡೆಸಿ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್ ಒತ್ತಾಯಿಸಿದರು.ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅಶೋಕ ಹೋಟೆಲ್ನಲ್ಲಿ ಅಶ್ಲೀಲ ವಿಡಿಯೋವನ್ನು ಬಿಜೆಪಿಯ ನಾಯಕರು ನೋಡಿದ್ದಾರೆ. ಮಾಹಿತಿ ಇರುವುದರಿಂದ ಬಿಜೆಪಿಯ ಮಾಜಿ ಶಾಸಕರನ್ನು ತಕ್ಷಣವೇ ವಿಚಾರಣೆಗೆ ಒಳಪಡಿಸಬೇಕು ಎಂದು ಹೆಸರು ಹೇಳದೇ ಪರೋಕ್ಷವಾಗಿ ಆಗ್ರಹಿಸಿದರು.
‘ಕುಮಾರಸ್ವಾಮಿ ಅವರು ಎರಡು ಬಾರಿ ಹಾಸನದಲ್ಲೇ ಪೆನ್ಡ್ರೈವ್ ಉತ್ಪಾದನೆ ಆಗಿದ್ದು, ಮಾಜಿ ಶಾಸಕರ ಆಪ್ತರಿಂದಲೇ ಹಂಚಿಕೆ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ ಅವರು ಪೆನ್ಡ್ರೈವ್ ಪ್ರಕರಣದಲ್ಲಿ ವಿನಾಕಾರಣ ನಮ್ಮ ನಾಯಕರನ್ನು ಎಳೆದು ತಂದು ತನಿಖೆಯ ದಿಕ್ಕನ್ನು ತಪ್ಪಿ ಸುವುದು ಪ್ರಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೂ ಕೂಡ ಎಲ್ಲ ಸತ್ಯ ತಿಳಿದಿದೆ. ಪೆನ್ಡ್ರೈವ್ ಉತ್ಪಾದನೆ ಆಗಿರುವುದು ಹಾಸನದಿಂದ ಎಂದು ಅವರಿಗೆ ತಿಳಿದಿದ್ದರೂ ಕೂಡ ಮೌನ ವಹಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ದೇವರಾಜಗೌಡನನ್ನು ಮುಂದಿಟ್ಟುಕೊಂಡು ಬಿಜೆಪಿಯ ನಾಯಕರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಆತ ವಿನಾಕಾರಣ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದ್ದು, ಇದಕ್ಕೆಲ್ಲಾ ಕುಮಾರಸ್ವಾಮಿಯವರೇ ಕುಮಕ್ಕು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಮಂಡ್ಯ ಶಾಸಕ ಪೆನ್ಡ್ರೈವ್ ಹಂಚಿದ್ದು ಯಾರೆಂದು ಹೇಳಿದ್ದಾರೆ. ಶಕ್ತಿ, ನೈತಿಕತೆ ಇದ್ದರೆ ಅವರ ಮೇಲೂ ದೂರು ಕೊಟ್ಟು ಹಿಡಿಸಿ. ಈಗಾಗಲೇ ಹಾಸನದ ಬಿಜೆಪಿಯ ಮಾಜಿ ಶಾಸಕರ ಆಪ್ತರ ಮನೆ ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಕಚೇರಿಗಳ ಮೇಲೆ ಎಸ್ಐಟಿ ದಾಳಿ ನಡೆಸಿದೆ. ಈ ಹಿಂದೆ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದ ಕಿರಣ್ ಗೌಡ ಹಾಗೂ ಮಧ್ಯದ ಸಾಹುಕಾರ ಶರತ್ ಅವರು ಮಾಜಿ ಶಾಸಕರ ಪರಮಾಪ್ತರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದರಿಂದಾಗಿ ಪೆನ್ಡ್ರೈವ್ ಹಂಚಿಕೆಯ ಕೈವಾಡ ಬಿಜೆಪಿ ಅವರದ್ದು’ ಎಂದು ದೂರಿದರು.