ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಅಂದು ಎಲ್ಲ ಮನೆಗಳಲ್ಲಿ ದೀಪಾವಳಿ ಹಬ್ಬದಂತೆ ಸಡಗರ, ಸಂಭ್ರಮದಿಂದ ಆಚರಿಸಬೇಕು ಎಂದು ಅಧ್ಯಾತ್ಮ ಮತ್ತು ಯೋಗಗುರು ಡಾ. ಎ. ಮಹೇಶ್ ಶರ್ಮ ತಿಳಿಸಿದರು.
ಬಳ್ಳಾರಿ: ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಅಂದು ಎಲ್ಲ ಮನೆಗಳಲ್ಲಿ ದೀಪಾವಳಿ ಹಬ್ಬದಂತೆ ಸಡಗರ, ಸಂಭ್ರಮದಿಂದ ಆಚರಿಸಬೇಕು ಎಂದು ಅಧ್ಯಾತ್ಮ ಮತ್ತು ಯೋಗಗುರು ಡಾ. ಎ. ಮಹೇಶ್ ಶರ್ಮ ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಗಣಪಾಲ ಐನಾಥ ರೆಡ್ಡಿ ಅವರ ನಿವಾಸದ ಅಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಕೋಟ್ಯಂತರ ಹಿಂದೂಗಳ ಆಶಯದಂತೆ ಅಯೋಧ್ಯೆಯಲ್ಲಿ ಅತ್ಯಂತ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡಿದ್ದು, ಜ. 22ರಂದು ಲೋಕಾರ್ಪಣೆಗೊಳ್ಳುತ್ತಿದೆ. ಇದು ಪ್ರತಿಯೊಬ್ಬರ ಪಾಲಿಗೆ ಅತ್ಯಂತ ಸುದೈವದ ದಿನವಾಗಿದೆ. ಇಡೀ ದೇಶವೇ ಅಯೋಧ್ಯೆಯ ಕಡೆಗೆ ದೃಷ್ಟಿ ನೆಟ್ಟಿದೆ. ರಾಮಮಂದಿರ ಉದ್ಘಾಟನೆ ಭಾರತವಷ್ಟೇ ಅಲ್ಲ; ಇಡೀ ವಿಶ್ವದಲ್ಲಿರುವ ಎಲ್ಲ ಭಾರತೀಯರು ಸಂಭ್ರಮಿಸುವ ಕ್ಷಣವಾಗಿದೆ. ಸುಮಾರು 500 ವರ್ಷಗಳ ಕನಸು ನನಸಾಗುತ್ತಿದ್ದು, ಅಂದು ಎಲ್ಲ ರಾಮಭಕ್ತರು ದೀಪಾವಳಿ ಹಬ್ಬದಂತೆ ಸಂಭ್ರಮಿಸಬೇಕು. ಮನೆಮನೆಗಳಲ್ಲಿ ವಿಶೇಷ ಪೂಜೆಗಳನ್ನು ಕೈಗೊಳ್ಳಬೇಕು. ಶ್ರೀರಾಮನ ಕುರಿತು ಪ್ರವಚನ ಏರ್ಪಡಿಸಬೇಕು. ಮನೆಯಲ್ಲಿ ದೀಪಲಂಕಾರ ಮಾಡಬೇಕು ಎಂದರು.ಬಿಜೆಪಿ ಹಿರಿಯ ಮುಖಂಡ ಗಣಪಾಲ ಐನಾಥ ರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆ ಕ್ಷಣವನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ. ಕರ್ನಾಟಕದ ಶಿಲ್ಪಿಯೊಬ್ಬರು ಶ್ರೀರಾಮಚಂದ್ರನ ಮೂರ್ತಿಯನ್ನು ನಿರ್ಮಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಅಶೋಕ, ಹಿಂದೂ ಜಾಗರಣ ವೇದಿಕೆ ಶ್ರೀರಾಮುಲು, ಯೋಗಗುರು ರಾಮಕೃಷ್ಣ, ಯೋಗ ಶಿಬಿರಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.