ಮಾಗಡಿ: ಬಾಟಲ್ ನೀರಿನ ಖರೀದಿ ಕಡಿಮೆ ಮಾಡಿ, ಮನೆಯಿಂದಲೇ ನೀರು ತೆಗೆದುಕೊಂಡು ಹೋಗೋಣ, ಸ್ಟೀಲ್ ಡಬ್ಬ ಮತ್ತು ಸ್ಟೀಲ್ ನೀರಿನ ಬಾಟಲ್ ಉಪಯೋಗಿಸೋಣ, ಪ್ಲಾಸ್ಟಿಕ್ ಕವರ್ಗಳ ಬದಲಾಗಿ ಬಟ್ಟೆ ಚೀಲ ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಹಾಗೂ ಎಲ್ಲೆಂದರಲ್ಲೇ ತ್ಯಾಜ್ಯಗಳ ಎಸೆಯುವಿಕೆಯನ್ನು ತಡೆಗಟ್ಟುವುದರ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡೋಣ ಎಂದು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಲತಾ ಆರ್. ಕುಲಕರ್ಣಿ ಹೇಳಿದರು.
ತೋಟಗಾರಿಕಾ ವಿಜ್ಞಾನಿ ಡಾ. ದೀಪಾ ಪೂಜಾರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯನ್ನು ನಮ್ಮ ಭೂಮಿ ನಮ್ಮ ಭವಿಷ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು ಪರಿಸರದ ಸಮತೋಲನವಾಗಿ ಇಡಲು ಗಿಡಗಳನ್ನು ಹೆಚ್ಚು ಬೆಳೆಸುವ ಕೆಲಸ ಮಾಡಬೇಕು. ದೀರ್ಘ ಅವಧಿವರೆಗೂ ಬಾಳುವಂತ ಗಿಡಗಳನ್ನು ಬೆಳೆಸುವ ಕೆಲಸ ಮಾಡಬೇಕು. ಅತಿ ಹೆಚ್ಚು ಆಮ್ಲಜನಕ ನೀಡುವ ಮರಗಳನ್ನು ಬೆಳೆಸಿದರೆ ಸುತ್ತ-ಮುತ್ತಲಿನ ಪರಿಸವನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ಈ ಬಾರಿ ಒಂದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಧಾನ್ ಫೌಂಡೇಶನ್ ಕಾರ್ಯ ವ್ಯವಸ್ಥಾಪಕ ಸತೀಶ್ ಮಾತನಾಡಿ, ಕೇವಲ ಆಚರಣೆಗಷ್ಟೆ ಪರಿಸರ ದಿನಾಚರಣೆಯಾಗದೇ ನಾವು ಪ್ರತಿನಿತ್ಯ ಪ್ರಕೃತಿಯ ಉಳಿವಿಗಾಗಿ ಕಾರ್ಯನಿರತರಾಗೋಣ ಎಂದು ತಿಳಿಸಿದರು.ಅಟಲ್ ಭೂ ಜಲ್ ಯೋಜನೆ ಭಾಗ್ಯವತಿ ಮಾತನಾಡಿ, ಅಂತರ್ಜಲ ಹೆಚ್ಚಿಸಲು ಅರಣ್ಯೀಕರಣವೊಂದೇ ಮಾರ್ಗವಾಗಿದ್ದು ರೈತರು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವತ್ತ ಕಾಯರ್ೋನ್ಮುಖರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಕೆ. ಆವರಣದ ಮುಂಭಾಗದಲ್ಲಿ ಸಸಿಗಳನ್ನು ನೆಡಲಾಯಿತು. ಭಾಗವಹಿಸಿದ್ದ ಎಲ್ಲರಿಗೂ ಅರಣ್ಯ ಮತ್ತು ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಿ.ಸಿ.ಪ್ರೀತು, ಡಾ. ಎಸ್.ಸೌಜನ್ಯ, ವಿಸ್ತರಣಾ ವಿಜ್ಞಾನಿ ಕ್ಷೇತ್ರ ವ್ಯವಸ್ಥಾಪಕರಾದ ಕೆ.ಉಮಾರಾಣಿ, ತಾಂತ್ರಿಕ ಅಧಿಕಾರಿಗಳಾದ ಸಿ.ಹೆಚ್.ರೂಪ, ಸಹಾಯಕರಾದ ನರಸಿಂಹಾಚಾರ್, ಲೋಕೇಶ, ಹರಿಪ್ರಸಾದ್, ವೆಂಕಟೇಶ, ಸಿದ್ದಪ್ಪ ಹಾಗೂ ಜಿಲ್ಲೆಯ 50ಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಿದ್ದರು.ಪೋಟೊ 6ಮಾಗಡಿ1 : ಮಾಗಡಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರದ ವಿಜ್ಞಾನಿಗಳು ಚಾಲನೆ ನೀಡಿದರು.