ಅಡವಿ ಸಿದ್ಧೇಶ್ವರ ಮಠದ ಅಭಿವೃದ್ಧಿಗೆ ಶ್ರಮಿಸೋಣ: ಶಾಸಕ ಬಾಲಚಂದ್ರ ಜಾರಕಿಹೊಳಿ

KannadaprabhaNewsNetwork | Published : Sep 11, 2024 1:01 AM

ಸಾರಾಂಶ

ಇತಿಹಾಸ ಪ್ರಸಿದ್ಧ ಅಂಕಲಗಿ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳು ಇಲ್ಲಿ ಬಂದು ನೆಲೆಸಿರುವ ಇತಿಹಾಸವಿದ್ದು, ಈ ಮಠಕ್ಕೆ ಭವ್ಯ ಪರಂಪರೆ ಇದೆ. ನಮ್ಮ ಕ್ಷೇತ್ರದ ಭಕ್ತಾಧಿಗಳು ಸೇರಿಕೊಂಡು ಶ್ರೀಮಠದ ಅಭಿವೃದ್ಧಿಗೆ ಪಣ ತೊಡೋಣ. ಮಠದ ವಿಷಯದಲ್ಲಿ ಎಲ್ಲರೂ ಒಂದಾಗಿ ಪ್ರಗತಿ ಮಾಡೋಣ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಇತಿಹಾಸ ಪ್ರಸಿದ್ಧ ಅಂಕಲಗಿ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳು ಇಲ್ಲಿ ಬಂದು ನೆಲೆಸಿರುವ ಇತಿಹಾಸವಿದ್ದು, ಈ ಮಠಕ್ಕೆ ಭವ್ಯ ಪರಂಪರೆ ಇದೆ. ನಮ್ಮ ಕ್ಷೇತ್ರದ ಭಕ್ತಾಧಿಗಳು ಸೇರಿಕೊಂಡು ಶ್ರೀಮಠದ ಅಭಿವೃದ್ಧಿಗೆ ಪಣ ತೊಡೋಣ. ಮಠದ ವಿಷಯದಲ್ಲಿ ಎಲ್ಲರೂ ಒಂದಾಗಿ ಪ್ರಗತಿ ಮಾಡೋಣ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಕಳೆದ ಶನಿವಾರ ಅಡವಿ ಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಾಪೂರ (ಹ) ಗ್ರಾಮದಲ್ಲಿರುವ ಅಡವಿ ಸಿದ್ಧೇಶ್ವರ ಮಠದ ಪ್ರಗತಿಯೇ ನಮ್ಮ ಧ್ಯೇಯವಾಗಿದೆ. ಸಮಾಜದ ಸುಧಾರಣೆಯಲ್ಲಿ ಮಠಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಮಾಜಕ್ಕೆ ಶಾಂತಿ ಸಂದೇಶ ಸಾರಲು ಸಹ ಮಠಗಳ ಪಾತ್ರ ಮುಖ್ಯವಾಗಿವೆ. ಪವಾಡ ಪುರುಷ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳ ಬದುಕು ಆದರ್ಶಪ್ರಾಯವಾಗಿದೆ. ಇಂತಹ ಪೂಜ್ಯನೀಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ತಿಳಿಸಿದರು.

ಸಾನ್ನಿಧ್ಯವನ್ನು ಸ್ಥಳೀಯ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿ ಅಡವಿ ಸಿದ್ಧರಾಮ ಸ್ವಾಮೀಜಿ, ಹೊಸೂರಿನ ಗಂಗಾಧರ ಸ್ವಾಮೀಜಿ, ಬೈಲಹೊಂಗಲ ಮೂರು ಸಾವಿರ ಮಠದ ನೀಲಕಂಠ ಸ್ವಾಮೀಜಿ, ದೇವರ ಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು ವಹಿಸಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿವಿಧ ಮಠಗಳ ಪೂಜ್ಯರು ಪುಷ್ಪಾರ್ಪಣೆ ಮಾಡಿ ಸತ್ಕರಿಸಿದರು.

ಮುಖಂಡರಾದ ಹಣಮಂತ ತೇರದಾಳ, ಸಂತೋಷ ಸೋನವಾಲಕರ, ಶಿವಬಸು ಜುಂಜರವಾಡ, ಕೆಂಪಣ್ಣ ಮುಧೋಳ, ಲಕ್ಷ್ಮಣ ಕತ್ತಿ, ಸತೀಶ ಜುಂಜರವಾಡ, ಮಲ್ಲಪ್ಪ ಜುಂಜರವಾಡ, ಮಹಾಂತೇಶ ಕುಡಚಿ ಸೇರಿದಂತೆ ಹಲವರು ಇದ್ದರು.ಶ್ರೀಮಠದ ಭಕ್ತರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದ್ದು, ಶ್ರೀಮಠದ ಪೀಠಾಧಿಪತಿಗಳೊಂದಿಗೆ ಮಾತನಾಡಿ ಇಷ್ಟರಲ್ಲೇ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡುತ್ತೇನೆ. ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಆಗಬಾರದು. ಇದನ್ನು ಯಾರೂ ಸಹಿಸಲ್ಲ. ಮಠದ ಅಭಿವೃದ್ಧಿಯೊಂದೇ ನಮ್ಮ ಗುರಿಯಾಗಿರಬೇಕು. ಶ್ರೀಮಠದ ಅಭಿವೃದ್ಧಿಗೆ ನನ್ನಿಂದಾಗುವ ಎಲ್ಲ ಸಹಾಯ, ಸಹಕಾರ, ನೆರವನ್ನು ನೀಡಲಿಕ್ಕೆ ಸದಾ ಸಿದ್ಧನಾಗಿರುವೆ.

- ಬಾಲಚಂದ್ರ ಜಾರಕಿಹೊಳಿ ಶಾಸಕರು ಮತ್ತು ಬೆಮುಲ್ ಅಧ್ಯಕ್ಷರು

Share this article