ಭಟ್ಕಳ: ಸಮಾಜದಲ್ಲಿ ಕರುಣೆ, ಪ್ರೀತಿ ಮತ್ತು ಮನುಷ್ಯತ್ವ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಅವರ ಜೀವನ ಮತ್ತು ಸಂದೇಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಇ ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಕ್ರಾಂತಿಯ ಜ್ಯೋತಿ ಬೆಳಗಿಸಿದ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕ ಆಯೋಜಿಸಿದ್ದ ‘ಸೀರತ್ ಗೆಟ್ ಟು ಗೆದರ್’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಹಮ್ಮದ್ ರಝಾ ಮಾನ್ವಿ, ಪರಸ್ಪರ ತಿಳಿದುಕೊಳ್ಳುವ ಮತ್ತು ಅರಿತುಕೊಳ್ಳುವ ಇಂತಹ ಕಾರ್ಯಕ್ರಮಗಳು ಹೆಚ್ಚಾದಾಗ ಸಮಾಜದಲ್ಲಿನ ಅಂತರ ಕಡಿಮೆಯಾಗುತ್ತದೆ. ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಇವು ಸಹಕಾರಿ ಎಂದರು.
ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಮೌಲಾನಾ ಸಯ್ಯದ್ ಝುಬೈರ್ ಎಸ್.ಎಂ., ಕಾರ್ಯದರ್ಶಿ ರವೂಫ್ ಅಹ್ಮದ್ ಸವಣೂರು, ಸೀರತ್ ಅಭಿಯಾನದ ಸಂಚಾಲಕ ಮುಜಾಹಿದ್ ಮುಸ್ತಫಾ, ಮಾಜಿ ಶಾಸಕ ಜೆ.ಡಿ. ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಕಾರ್ಮಿಕ ಮುಖಂಡ ಜೆ.ಎನ್. ರೇವಣಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸೀರತ್ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು.