ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಅಂಗೈಯಲ್ಲಿ ಜಗತ್ತನ್ನು ವೀಕ್ಷಿಸುವಷ್ಟು ತಂತ್ರಜ್ಞಾನ ಬೆಳೆದು ನಿಂತಿದ್ದು, ನೂತನ ಆವಿಷ್ಕಾರದ ಚಿಂತನೆಯ ಮೂಲಕ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಇಲ್ಲಿಯ ತೆಗ್ಗಿನ ಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ ತಿಳಿಸಿದರು.ಹರಪನಹಳ್ಳಿ ಪಟ್ಟಣದ ಟಿಎಂಎಇ ಸಂಸ್ಥೆಯ ಕಟ್ಟಿ ಸೆತುರಾಮಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಬಿಇಡಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಸೋಮವಾರ ಮಾತನಾಡಿದರು.
ಮಕ್ಕಳ ಭವಿಷ್ಯ ಬದಲಾಯಿಸುವ ಶಕ್ತಿಯನ್ನು ಗುರುಗಳು ಹೊಂದಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಪವಿತ್ರ ಪದವೆಂದರೆ ಅದು ಗುರುವಾಗಿದೆ ಎಂದರು.ಭವಿಷ್ಯದಲ್ಲಿ ಶಿಕ್ಷಕರಾಗುವವರು ಸಮಾಜದ ಹಿತ ಬಯಸುವ, ಮಾತೃ ಹೃದಯ ಗುಣ ಬೆಳೆಸಿಕೊಳ್ಳಬೇಕು, ಇಂದಿನ ಮಕ್ಕಳು ಬಾಲ್ಯದಿಂದಲೇ ವಿಜ್ಞಾನದ ಅರಿವನ್ನು ಹೊಂದಿ ಸಾಕಷ್ಟು ಜ್ಞಾನ ಪಡೆದುಕೊಂಡಿರುತ್ತಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಒದಗಿಸಬೇಕು ಎಂದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ತರಗತಿಗಳಲ್ಲಿ ಸರಿಯಾಗಿ ಬೋಧನೆ ಆಗುವಂತೆ ನೋಡಿಕೊಳ್ಳಬೇಕು. ಕಾಲೇಜು ದಿನಗಳು ನಿಮ್ಮ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದೆ. ಅದನ್ನು ದುರ್ಬಳಕೆ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಿ ಎಂದರು.ಬಳ್ಳಾರಿ ವಿವಿ ಕುಲಪತಿ ಮುನಿರಾಜು ಮಾತನಾಡಿ, ಹರಪನಹಳ್ಳಿಯಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಬೇಕೆಂಬ ಕನಸಿತ್ತು ಅದಕ್ಕೆ ಇಂದು ಸಕಾಲ ಕೂಡಿ ಬಂದಿದೆ. ಮುಂದಿನ ತಿಂಗಳು ಬಿಕಾಂ ಫೈನಾನ್ಸ್ ಮತ್ತು ಅಕೌಂಟಿಂಗ್ ಕೋರ್ಸ್ಗಳನ್ನು ಪ್ರಾರಂಭಿಸುತ್ತೇವೆ. ಇದರಿಂದ ನಿರುದ್ಯೋಗ ಸಮಸ್ಯೆ ಸುಲಭವಾಗಿ ಹೋಗಲಾಡಿಸಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ನಮ್ಮ ಯುನಿವರ್ಸಿಟಿಗೆ ಸಂಬಂಧಿಸಿದ ಕಾಲೇಜುಗಳಲ್ಲಿ ವಿದೇಶಗಳಿಂದ ಅಲ್ಲಿನ ಶಿಕ್ಷಣದ ಬಗ್ಗೆ ಆನ್ಲೈನ್ ಮೂಲಕ ತರಬೇತಿ ಕೊಡಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಕುಲಸಚಿವ ರುದ್ರೇಶ್, ಟಿಎಂಎಇ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿದರು. ಸಂಸ್ಥೆಯ ಡೀನ್ ಟಿ.ಎಂ. ರಾಜಶೇಖರ್, ಪ್ರಾಂಶುಪಾಲ ವೀರೇಶ್, ಟಿ.ಎಂ. ಪ್ರತೀಕ್, ಶಿವಣ್ಣ, ಮಹಂತೇಶ್, ಪ್ರೇಮ್ ಕುಮಾರ್, ಬಂಗಿ ಬಸಪ್ಪ ಕಾಲೇಜು ಪ್ರಾಂಶುಪಾಲ ಅರುಣ್ ಬಡಿಗೇರ್, ಲತಾ ಹಾಗೂ ಮೀನಾಕ್ಷಿ ಹಾಗೂ ಇತರರಿದ್ದರು.