ಸಮರ್ಪಣಾ ಮನೋಭಾವದಿಂದ ಶಿಕ್ಷಕರು ಕಾರ್ಯ ನಿರ್ವಹಿಸಲಿ: ಸುರೇಶ ಹುಗ್ಗಿ

KannadaprabhaNewsNetwork |  
Published : Aug 01, 2024, 12:18 AM IST
೩೦ಎಚ್‌ವಿಆರ್೨ | Kannada Prabha

ಸಾರಾಂಶ

ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಶಾಲೆಯ ವಿದ್ಯಾರ್ಥಿಗಳ, ಸಹದ್ಯೋಗಿಗಳೊಂದಿಗೆ, ಪಾಲಕರೊಂದಿಗೆ ಹಾಗೂ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.

ಹಾವೇರಿ: ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.ಸಮೀಪದ ನೆಲ್ಲೋಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸಮಾಜವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತಾಲೂಕು ಘಟಕ ಹಾವೇರಿ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಿನ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಅವುಗಳ ಸದ್ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವನ್ನು ಹೆಚ್ಚಿಸಬೇಕು ಎಂದರು.

ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಶಾಲೆಯ ವಿದ್ಯಾರ್ಥಿಗಳ, ಸಹದ್ಯೋಗಿಗಳೊಂದಿಗೆ, ಪಾಲಕರೊಂದಿಗೆ ಹಾಗೂ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಆ ಮೂಲಕ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ನಾವೇ ಸೃಷ್ಟಿಸುವ ಮೂಲಕ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ, ಧನಾತ್ಮಕ ಮನೋಧರ್ಮ, ಆತ್ಮವಿಶ್ವಾಸ ಮೂಡಿಸಿ, ಶಾಲೆಗೆ ಹಾಗೂ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ರೂಪಿಸಲು ಸದಾ ಪ್ರಯತ್ನಶೀಲರಾಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ಶಿಕ್ಷಕರು ಸದಾ ಅಧ್ಯಯನಶೀಲರಾಬೇಕು. ಶೈಕ್ಷಣಿಕ ಕಾರ್ಯಾಗಾರಗಳು ನಮ್ಮ ವೃತ್ತಿಪರತೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ. ಇಲ್ಲಿ ಪಡೆದ ಹೊಸ ಜ್ಞಾನವು ವರ್ಗ ಕೋಣೆಯಲ್ಲಿ ಅನುಷ್ಠಾನವಾಗಬೇಕು. ಅನುಭವ ಹೆಚ್ಚಿದಂತೆ, ಬೋಧನಾ ಕೌಶಲ್ಯ ಉತ್ತಮವಾಗಬೇಕು. ಅದಕ್ಕಾಗಿ ನಿರಂತರವಾಗಿ ಶೈಕ್ಷಣಿಕ ಕಾರ್ಯಾಗಾರಗಳನ್ನು, ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಷಯ ಸಂಪನ್ಮೂಲ ಶಿಕ್ಷಕರಾದ ಸವಿತಾ ಕಲಕೇರಿ ಮತ್ತು ಆರ್.ವೈ. ಪಾಟೀಲ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಹಮ್ಮಿಕೊಳ್ಳಬಹುದಾದ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣ ಸಂಯೋಜಕ ಷಣ್ಮುಖ ಮಳವಳ್ಳಿ ಚುನಾವಣಾ ಸಾಕ್ಷರತಾ ಕ್ಲಬ್ ಮಾಹಿತಿ ನೀಡಿದರು. ಕಳೆದ ವರ್ಷದ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿಷಯ ಪರಿವೀಕ್ಷಕರಾದ ಮಂಜಪ್ಪ. ಆರ್, ಬಸವನಗೌಡ ಪಾಟೀಲ, ದೇವೇಂದ್ರಪ್ಪ ಬಸಮ್ಮನವರ, ಈರಪ್ಪ ಲಮಾಣಿ, ಸಿ.ಜಿ. ಚಿಕ್ಕಮಠ, ಪ್ರಭಾರ ಮುಖ್ಯಶಿಕ್ಷಕ ಸಿ.ಎಂ. ಮಾರೇರ, ಸಿ.ಎಸ್. ಅರಳಿಹಳ್ಳಿ, ಕೆ.ಎಸ್. ನಾಗನೂರ, ಸಿ.ಎಸ್. ಮರಳೀಹಳ್ಳಿ, ಎಸ್.ವಿ. ಕಪ್ಪರದ, ಶಿವಬಸವ ಮರಳಿಹಳ್ಳಿ, ಬಿ.ಎಸ್. ಮಡ್ಲೂರ, ರಮೇಶ ಲಮಾಣಿ ಇತರರಿದ್ದರು. ಸವಿತಾ ಕಲಕೇರಿ ಸ್ವಾಗತಿಸಿದರು. ಬಿ.ಆರ್. ನಾರಗಲ ಕಾರ್ಯಕ್ರಮ ನಿರೂಪಿಸಿದರು. ಎಚ್.ಕೆ. ಆಡಿನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ