ಭಗವದ್ಗೀತಾ ಜಯಂತಿ ಆಚರಣೆ ನಡೆಯುವಂತಾಗಲಿ: ಪುತ್ತಿಗೆ ಶ್ರೀಪಾದರು

KannadaprabhaNewsNetwork | Published : Dec 22, 2024 1:34 AM

ಸಾರಾಂಶ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಧ್ಯಾನ ದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಗವದ್ಗೀತೆಯಲ್ಲಿ ಧ್ಯಾನ ಯೋಗದ ಮಹತ್ವವನ್ನು ಗೀತಾಚಾರ್ಯ ಭಗವಾನ್ ಶ್ರೀಕೃಷ್ಣ ವಿವರಿಸಿದ್ದಾನೆ. ಇದನ್ನು ಮನಗಂಡ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ಡಿ.21ನ್ನು ವಿಶ್ವ ಧ್ಯಾನ ದಿನವೆಂದು ಘೋಷಿಸಿದ್ದು, ಆ ಪ್ರಕಾರ ಪ್ರಪ್ರಥಮ ವಿಶ್ವ ಧ್ಯಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಕೃಷ್ಣಮಠದ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.ಅವರು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಬೆಳಗ್ಗೆ ವಿಶ್ವ ಧ್ಯಾನ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ಚವಚನ ನೀಡಿದರು.

ಮುಂದೊಂದು ದಿನ ವಿಶ್ವಾದ್ಯಂತ ಭಗವದ್ಗೀತಾ ಜಯಂತಿ ದಿನಾಚರಣೆ ನಡೆಯಲಿ. ಗೀತಾಚಾರ್ಯನ ನುಡಿಗಳು ನಡೆಯಲ್ಲಿ ಮೂಡಿ ಬರಲಿ ಎಂದು ಆಶಿಸಿದರು.ಪತಂಜಲಿಯ ಮಂಡಲ ಪ್ರಭಾರಿ ಶ್ರೀ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬೀಜ ಮಂತ್ರ ಸಹಿತವಾಗಿ ಅಷ್ಟ ಚಕ್ರದ ಧ್ಯಾನ ನಡೆಸಿಕೊಟ್ಟರು.ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆರ್.ಜಿ. ಬಿರದಾರಣ್ಣ, ಶ್ರೀ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿಯ ಅಮಿತ್ ಕುಮಾರ್ ಶೆಟ್ಟಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಬನ್ನಂಜೆಯ ರಾಜೇಶ್ ಶೆಟ್ಟಿ, ನಿರಂತರ ಯೋಗ ಕೇಂದ್ರ ಚಿಟ್ಪಾಡಿಯ ಮಮತಾ ಶೆಟ್ಟಿಗಾರ್ ಅವರನ್ನು ಹೂ ನೀಡಿ ಸ್ವಾಗತಿಸಿದರು.ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ರಮೇಶ್ ಭಟ್, ಪತಂಜಲಿಯ ಅಜೀವ ಸದಸ್ಯ ವಿಶ್ವನಾಥ್ ಭಟ್, ಪ್ರಭಾರಿಗಳಾದ ಅನಂತರಾಯ ಶೆಣೈ, ಜಗದೀಶ ಕುಮಾರ್, ಶ್ರೀಪತಿ ಭಟ್, ಲೀಲಾ ಆರ್. ಅಮೀನ್, ಗಿರೀಶ್, ರವೀಂದ್ರ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಜಿತ್ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿ, ಲಕ್ಷ್ಮಣ ಕಾಮತ್ ವಂದಿಸಿದರು.

Share this article