ಪಾಲಿಕೆ ಚುನಾವಣೆ ಶೀಘ್ರ ಘೋಷಣೆಯಾಗಲಿ: ಕೆ.ಬಿ.ಪ್ರಸನ್ನಕುಮಾರ್

KannadaprabhaNewsNetwork |  
Published : Jul 04, 2024, 01:02 AM IST
ಪೊಟೊ: 3ಎಸ್ಎಂಜಿಕೆಪಿ03ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಮಹಾನಗರ ಪಾಲಿಕೆ ನಿದ್ರಿಸುತ್ತಿದೆ, ಜನರ ಹಿತ ಮರೆತಿದೆ, ಅಧಿಕಾರಿಗಳು ಕರ್ತವ್ಯ ಶೂನ್ಯರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ದೂರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ದೂರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆ ನಿದ್ರಿಸುತ್ತಿದೆ, ಜನರ ಹಿತ ಮರೆತಿದೆ, ಅಧಿಕಾರಿಗಳು ಕರ್ತವ್ಯ ಶೂನ್ಯರಾಗಿದ್ದಾರೆ. ಪಾಲಿಕೆ ಈಗ ಅಧಿಕಾರಿಗಳ ಕೈಯಲ್ಲಿದೆ. ಆದರೆ ಈ ಅಧಿಕಾರಿಗಳು ನಗರದ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಹೀಗಾಗಿ ಸರ್ಕಾರ ಪಾಲಿಕೆಯ ಚುನಾವಣೆಯನ್ನು ಶೀಘ್ರವೇ ಘೋಷಿಸಬೇಕು ಎಂದು ಒತ್ತಾಯಿಸಿದರು.

ಆದಷ್ಟು ಬೇಗ ನಗರದ ಸುವ್ಯವಸ್ಥೆ ಕಾಪಾಡಲು ಅಭಿವೃದ್ಧಿಗೆ ಆದ್ಯತೆ ನೀಡುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಹಾಗಾಗಿ ಆದಷ್ಟು ಬೇಗಾ ಚುನಾವಣೆ ಘೋಷಣೆಯಾಗಬೇಕು. ಇಡೀ ನಗರದಲ್ಲಿ ಸ್ವಚ್ಛತೆಯಿಲ್ಲದೆ, ಕಸದ ರಾಶಿ ಎಲ್ಲೆಡೆ ಕಂಡು ಬರುತ್ತಿದೆ. ಅವ್ಯವಸ್ಥೆಯ ಆಗರವಾಗಿದೆ. ಸೊಳ್ಳೆ ನಿಯಂತ್ರಣ ಇಲ್ಲವೇ ಇಲ್ಲ. ಪರಿಣಾಮ ನಗರದಲ್ಲೆಡೆ ಡೆಂಗ್ಯೂ ಜ್ವರ ಸೇರಿದಂತೆ ಇತರ ಸಾಮಾನ್ಯ ಜ್ವರಗಳು ಕಾಣಿಸಿ ಕೊಳ್ಳ ತೊಡಗಿವೆ ಎಂದು ದೂರಿದರು.

ಸಣ್ಣ ಸಣ್ಣ ಗಲ್ಲಿಯ ಆಸ್ಪತ್ರೆಗಳಲ್ಲೂ ಸಾರ್ವಜನಿಕರು ಚಿಕಿತ್ಸೆಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಹಂದಿ, ನಾಯಿಗಳ ಕಾಟ ಬೇರೆ, ಒಟ್ಟಾರೆ ಇಡೀ ನಗರದ ಚಿತ್ರಣವೇ ಬದಲಾಗಿದೆ ಎಂದ ಅವರು, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ, 24X7 ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಸ್ವಲ್ಪ ಮಳೆ ಬಂದರೂ ಸಾಕು, ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗುತ್ತದೆ. ರಾಜಕಾಲುವೆ ಸೇರಿದಂತೆ ಚರಂಡಿ, ಹೂಳು ತುಂಬಿದೆ. ಪರಿಣಾಮ ಕೊಳಚೆ ನೀರು, ರಸ್ತೆಗಳಲ್ಲಿ ಹರಿಯುತ್ತಿದೆ. ಕೆಲವು ಕಡೆ ಕುಡಿಯುವ ನೀರಿನ ನಳಗಳಿಗೂ ಹೋಗುತ್ತಿದೆ ಎಂದು ದೂರಿದರು.

ಇತ್ತೀಚಿಗೆ ಬಟ್ಟೆ ಮಾರ್ಕೆಟ್‌ಗೆ ಬೆಂಕಿ ಬಿದ್ದಿದ್ದು, ಅತ್ಯಂತ ದುರಾದೃಷ್ಟಕರ. ಸಾರ್ವಜನಿಕರ ಮತ್ತು ಅಗ್ನಿಶಾಮಕದಳದವರ ಪ್ರಯತ್ನದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅಗ್ನಿ ಶಾಮಕದಳದವರಿಗೆ ನಮ್ಮ ಅಭಿನಂದನೆಗಳನ್ನು ತಿಳಿಸುತ್ತೇವೆ. ಮತ್ತು ಇಲ್ಲಿನ ವ್ಯಾಪಾರಸ್ಥರಿಗೆ ತುಂಬಾ ನಷ್ಟವಾಗಿದ್ದು, ಜಿಲ್ಲಾಡಳಿತದಿಂದ ಬೇಗನೆ ಪರಿಹಾರ ನೀಡಬೇಕು ಎಂದರಲ್ಲದೇ, ಈ ಮಾರ್ಕೆಟ್‌ನ ಕಟ್ಟಡ ತುಂಬಾ ಹಳೆಯದು, ಈಗಲಾದರೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳ ಬೇಕು. ಇಲ್ಲಿ ಬಹುಮಹಡಿ ಕಟ್ಟಡವನ್ನು ಕಟ್ಟಿ ಇಲ್ಲಿನ ವ್ಯಾಪಾರಸ್ಥರಿಗೆ ನೀಡಬೇಕು. ಇದರಿಂದ ಪಾಲಿಕೆಯ ಆದಾಯ ಕೂಡ ಹೆಚ್ಚುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್ ಆದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಮತ್ತು ಪಾಲಿಕೆ ವತಿಯಿಂದ ಈಗಾಗಲೇ ಎರಡು ಕಡೆ ನಿರ್ಮಾಣವಾಗಿರುವ ಕಟ್ಟಡಗಳನ್ನು ಬೇಗನೆ ಲೋಕಾರ್ಪಣೆ ಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಮುಖಂಡರಾದ ದೀಪಕ್ ಸಿಂಗ್, ನರಸಿಂಹ ಗಂಧದ ಮನೆ, ತ್ಯಾಗರಾಜ್, ರಾಮಕೃಷ್ಣ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!