ನಲ್ಬೆಳಗು ಕೃತಿ ಬಿಡುಗಡೆ ಮಾಡಿದ ಹಾಸ್ಯ ಕಲಾವಿದ
ಓದುವ ಸಂಸ್ಕೃತಿ ಎಲ್ಲೆಡೆ ಪಸರಸಲಿ ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಹೇಳಿದರು.
ಸುಶಮೀಂದ್ರ ಗುರುಕುಲದಲ್ಲಿ ಜನಾರ್ದನ ಕುಲಕರ್ಣಿ ಅಲಬನೂರು ಅವರ ನಲ್ಬೆಳಗು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಓದುವ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿ. ಓದು ವ್ಯಕ್ತಿತ್ವಕ್ಕೆ ಹೊಳಪನ್ನು, ಜೀವಂತಿಕೆಯನ್ನು ತರುತ್ತದೆ. ಹೊಸ ಜ್ಞಾನದ ತಿಳುವಳಿಕೆ ಬಾಳಿಗೆ ಸೊಗಸನ್ನು ಉಂಟುಮಾಡುತ್ತದೆ. ಪರಿಪೂರ್ಣತೆಯೆಡೆಗೆ ಸಾಗಬೇಕಾದರೆ ಸತತ ಅಧ್ಯಯನವೇ ಶಕ್ತಿ ನೀಡುತ್ತದೆ. ಸಾಹಿತ್ಯ ಕೃತಿಗಳನ್ನು ಮಕ್ಕಳಿಗೆ ಓದಿಸಬೇಕು. ನೀತಿ, ಆದರ್ಶದ ಕೃತಿಗಳ ಓದು ನಿಮ್ಮ ಬದುಕಿಗೆ ಶೋಭೆ. ಉತ್ತಮ ಪುಸ್ತಕ, ಒಳ್ಳೆಯ ಮಿತ್ರ ಬದುಕಿನ ದೊಡ್ಡ ಸಂಪತ್ತು. ನಾವೆಲ್ಲರೂ ಮೊಬೈಲ್ ದಾಸರಾಗದೇ ಪುಸ್ತಕದ ದಾಸರಾಗಬೇಕು. ಸಾಹಿತ್ಯದ ಓದು ನಾವು ಸರಿದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಮುಮ್ತಾಜ್ ಬೇಗಂ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ವಿಚಾರಗಳನ್ನು ಹಂಚಿಕೊಳ್ಳಲು ಜಾಲತಾಣ ವೇದಿಕೆಯಾಗಬೇಕೆಂದರು.ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಜನಾರ್ದನ್ ಕುಲಕರ್ಣಿ ಅಲಬನೂರು, ಕಲಾವತಿ ಕುಲಕರ್ಣಿ, ಚಿತ್ರ ನಿರ್ದೇಶಕ ಮಂಜುನಾಥ ಪಾಂಡವಪುರ, ಹಿರಿಯ ಸಂಶೋಧಕ ಪ್ರೊ. ವಿಜಯಕುಮಾರ ವೈದ್ಯ, ಕತೆಗಾರ ರಾಘವೇಂದ್ರ ಮಂಗಳೂರು, ನಿವೃತ್ತ ಬ್ಯಾಂಕ್ ನೌಕರ ನಾರಾಯಣರಾವ್ ವೈದ್ಯ ಉಪಸ್ಥಿತರಿದ್ದರು.