ಬದುಕಿನ ಮೌಲ್ಯಗಳ ಜನಮಾನಸಕ್ಕೆ ತಲುಪಿಸುವ ರಂಗ ವೈಭವ ಆರಂಭವಾಗಲಿ-ಪ್ರೊ. ಮಾರುತಿ

KannadaprabhaNewsNetwork |  
Published : Mar 31, 2024, 02:06 AM IST
ಫೋಟೋ : ೩೦ಎಚ್‌ಎನ್‌ಎಲ್೧ | Kannada Prabha

ಸಾರಾಂಶ

ರಂಗಭೂಮಿ ವೈಭವವನ್ನು ಪುನರುತ್ಥಾನಗೊಳಿಸುವ ಮೂಲಕ ಬದುಕಿನ ಸತ್ಯ, ಮೌಲ್ಯಗಳನ್ನು ಜನ ಮಾನಸಕ್ಕೆ ತಲುಪಿಸುವ ರಂಗ ವೈಭವ ಆರಂಭವಾಗಬೇಕಾಗಿದೆ ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.

ಹಾನಗಲ್ಲ: ರಂಗಭೂಮಿ ವೈಭವವನ್ನು ಪುನರುತ್ಥಾನಗೊಳಿಸುವ ಮೂಲಕ ಬದುಕಿನ ಸತ್ಯ, ಮೌಲ್ಯಗಳನ್ನು ಜನ ಮಾನಸಕ್ಕೆ ತಲುಪಿಸುವ ರಂಗ ವೈಭವ ಆರಂಭವಾಗಬೇಕಾಗಿದೆ ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶೇಷಗಿರಿಯ ಗಜಾನನ ಯುವಕ ಮಂಡಳ, ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳ ಸಂತಸದ ಕಲಿಕೆಯ ಸುವರ್ಣಾವಕಾಶಗಳು. ಯಾವುದೇ ಇತರ ಮಾಧ್ಯಮಗಳಿಲ್ಲದ ದಿನಗಳಲ್ಲಿ ನಾಟಕ ಸಾಂಸ್ಕೃತಿಕ, ಸಾಮಾಜಿಕ ಜಾಗೃತಿಯ ಮಾಧ್ಯಮವಾಗಿತ್ತು. ಕಲಾವಿದರು ತಮ್ಮನ್ನು ಸಮಾಜಕ್ಕಾಗಿ ಅರ್ಪಿಸಿಕೊಳ್ಳುತ್ತಿದ್ದರು. ಪೌರಾಣಿಕ ಸಾಮಾಜಿಕ ವಸ್ತುಗಳನ್ನು ನಾಟಕಗಳ ಮೂಲಕ ನೀಡಿ ಜೀವನೋತ್ಸಾಹ ನೀಡುತ್ತಿದ್ದರು. ಸಾಮಾಜಿಕ ಲೋಪಗಳನ್ನು ಸರಿಪಡಿಸಿ ಸೌಖ್ಯ ಸಮಾಜ ನಿರ್ಮಾಣಕ್ಕೆ ನಾಟಕಗಳು ದೊಡ್ಡ ಕೊಡುಗೆ ನೀಡಿವೆ. ಇಂದು ಕಲೆ ಕಲಾವಿದರನ್ನು ಗೌರವಿಸುವ ಕಾಲ ಮತ್ತೆ ಬರಬೇಕಾಗಿದೆ. ಗ್ರಾಮಗಳು ಮತ್ತೆ ನಾಟಕಗಳತ್ತ ಮುನ್ನಡೆಯಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಉದಯ ನಾಸಿಕ ಮಾತನಾಡಿ, ಕಲಾವಿದನ ಪರಿಪೂರ್ಣ ಅಭಿವ್ಯಕ್ತಿಯ ಮೂಲಕ ರಂಗ ಭೂಮಿ ಶಕ್ತಿಯುತವಾಗಿ ಬೆಳೆದಿದೆ. ರಂಗ ಕಲಾವಿದರು ಅತ್ಯಂತ ಕಷ್ಟದಲ್ಲಿ ರಂಗಭೂಮಿಯನ್ನು ಉಳಿಸಿದ್ದಾರೆ. ಈಗ ಕಲೆಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಭಾರ ಪ್ರಾಚಾರ್ಯ ಎಂ.ಬಿ. ನಾಯಕ ಕಲೆಯ ಬೆಲೆ ಅರಿಯಬೇಕು. ರಂಗ ಸಂಸ್ಕೃತಿ ನಮ್ಮ ಜನಪದ ಜೀವನ ಶೈಲಿಯ ಎಲ್ಲ ಸತ್ಯ ಸತ್ವಗಳನ್ನು ಒಳಗೊಂಡಿತ್ತು. ಬದಲಾದ ಕಾಲಕ್ಕೆ ನಾಟಕಗಳ ಶೈಲಿ ಬದಲಾಗಿದೆ. ಕಲಾವಿದ ಕಾಲಕ್ಕೆ ತಕ್ಕಂತೆ ಬೇಕಾಗುವ ವಿಷಯ ವಸ್ತುಗಳನ್ನು ನೀಡಲು ಮುಂದಾಗಿದ್ದಾನೆ. ನಾಟಕ ಸಾಹಿತ್ಯ ಸದಾ ಅನುಭವಗಳ ಅಭಿವ್ಯಕ್ತಿಯ ಶಕ್ತಿ ಸಾರ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವರಂಗ ಕಲಾವಿದ ಸೋಮನಾಥ ಗುರಪ್ಪನವರ ರಂಗ ಸಂದೇಶ ಓದಿದರು. ಡಾ. ವಿಶ್ವನಾಥ ಬೋಂದಾಡೆ, ಡಾ. ರಾಘವೇಂದ್ರ ಮಾಡಳ್ಳಿ, ಡಾ. ಹರೀಶ ತಿರಕಪ್ಪ, ಡಾ. ಪ್ರಕಾಶ ಹುಲ್ಲೂರ, ಡಾ. ಜಿತೇಂದ್ರ, ಡಾ. ಜಿ.ವಿ. ಪ್ರಕಾಶ, ಡಾ. ಬಿ.ಎಸ್. ರುದ್ರೇಶ, ಆರ್. ದಿನೇಶ, ಎಂ.ಎಂ. ನಿಂಗೋಜಿ, ರಂಗ ಕಲಾವಿದರಾದ ಸಿದ್ದಪ್ಪ ರೊಟ್ಟಿ, ಜಮೀರ ಪಠಾಣ, ಶಿವಮೂರ್ತಿ ಹುಣಸೀಹಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಹಿರಿಯ ರಂಗ ಕಲಾವಿದ ಹಾವೇರಿಯ ಕೆ.ಆರ್. ಹಿರೇಮಠ, ಧಾರವಾಡದ ರಂಗ ನಟಿ ರಂಜಿತಾ ಜಾಧವರ ಅವರಿಗೆ ರಂಗ ಸನ್ಮಾನ ನೀಡಲಾಯಿತು. ಸಂಗೀತ ಕಲಾವಿದರಾದ ಪ್ರತೀಕ್ಷಾ ಕೋಮಾರ, ಅಂಬಿಕಾ ಅಕ್ಕಿವಳ್ಳಿ, ಗಂಗಾ ಕೋಮಾರ ರಂಗ ಗೀತೆಗಳನ್ನು ಹಾಡಿದರು. ಶ್ರೀಪಾದ ಅಕ್ಕವಳ್ಳಿ ತಬಲಾ ಸಾಥ್ ನೀಡಿದರು. ಸ್ವಾತಿ ಬೈಲಣ್ಣನವರ ಸ್ವಾಗತಿಸಿದರು. ಸ್ಫೂರ್ತಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ಶಾಜಿಯಾಖಾನ ಮುಗಳಿ ವಂದಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ