ಸರ್ಕಾರ ಶಾಶ್ವತ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಿ

KannadaprabhaNewsNetwork | Published : Nov 25, 2024 1:03 AM

ಸಾರಾಂಶ

ಜಗಳೂರು: ತುಂಗಾಭದ್ರಾ ನದಿ ನೀರು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡರೆ ನಾಡು ಸಮೃದ್ಧಿ ನೀರಾವರಿ ಪ್ರದೇಶವಾಗಲಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಗಳೂರು: ತುಂಗಾಭದ್ರಾ ನದಿ ನೀರು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡರೆ ನಾಡು ಸಮೃದ್ಧಿ ನೀರಾವರಿ ಪ್ರದೇಶವಾಗಲಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಹಿರೇಅರೆಕೆರೆ, ಕೊಡದಗುಡ್ಡ, ಗೋಡೆ, ಮರುಕುಂಟೆ ನಂತರ ಅಸಗೋಡು ಗ್ರಾಮದ ಕೆರೆ ವೀಕ್ಷಣೆ ಮತ್ತು ಬಾಗೀನಾ ಅರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿರುವ ಹಣದಿಂದ ನೂರಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು. ಚಿಕ್ಕ ಮಕ್ಕಳ ಮುಂದೆ ಹಣ ಮತ್ತು ಚಾಕೊಲೇಟ್ ಇಟ್ಟಾಗ ಮಗು ಹಣಕ್ಕಿಂತ ಚಾಕೊಲೇಟ್ ಆಯ್ಕೆ ಮಾಡುತ್ತದೆ. ಹಾಗೇಯೆ ರೈತರು ಕೇಳೋದು ನೀರು. ಬೀರಲ್ಲ. ಸರ್ಕಾರ ಶಾಶ್ವತವಾದ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಜಗಳೂರು-ಭರಮಸಾಗರ ಏತಾ ನೀರಾವರಿಯಿಂದ ಕಹಿ ಹೋಗಿ ಸಿಹಿ ಬಂದಿದೆ. ಕೆರೆಗಳು ತುಂಬಿ ಹರಿಯುತ್ತಿರುವ ಸಂಭ್ರಮ ನೋಡಿದರೆ 2018ರ ತರಳಬಾಳು ಹುಣ್ಣಿಮೆ ಆಚರಣೆ ಮಾಡಿದ್ದು, ಸಾರ್ಥಕ ವೆನಿಸಿತು. ಜಗಳೂರು ಇನ್ನು ಮುಂದೆ ಜೌಗು ತುಂಬಿದ ಊರಾಗಲಿದೆ. ಕೆರೆ ತುಂಬಿಸುವುದಕ್ಕಿಂತ ಹೆಚ್ಚಾಗಿ ಕೆರೆ ಸ್ವಚ್ಛತೆ ಪವಿತ್ರ ಭಾವದಿಂದ ಉಪಯೋಗಿಸಿ ಸಂರಕ್ಷಣೆ ಮಾಡಬೇಕು ಎಂದರು.ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, 1992ರಲ್ಲಿ ತರಳಬಾಳು ಹುಣ್ಣಿಮೆ ನಡೆದಿದ್ದರಿಂದ ಜಗಳೂರಿನಲ್ಲಿ ತರಳಬಾಳು ಕೇಂದ್ರವಾಯಿತು. 2018ರಲ್ಲಿ ತರಳಬಾಳು ಹುಣ್ಣಿಮೆ ನಡೆದದ್ದರಿಂದ 57 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯನ್ನು ಕೊಟ್ಟಿದ್ದಾರೆ ಎಂದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿದರು.

ಜಿ.ಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಹಾರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಡಾ.ಸಿದ್ದಪ್ಪ, ಗ್ರಾ.ಪಂ ಅಧ್ಯಕ್ಷ ನಾಗಮ್ಮ ಚನ್ನಬಸಪ್ಪ, ಉಪಾಧ್ಯಕ್ಷೆ ಶಕುಂತಲಾ ತಿಮ್ಮಪ್ಪ, ಕೊಟ್ರಸ್ವಾಮಿ, ಮಾಜಿ ಛೇರ್ಮನ್ ಲೋಕನಾಥ್ , ರಂಗಸ್ವಾಮಿ, ಎಚ್.ಸಿ.ಮಹೇಶ್ , ಎಸ್.ಕೆ.ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.

Share this article