ಹಾವೇರಿ: ಪದವಿಪೂರ್ವ ಕಾಲೇಜುಗಳ ಮಟ್ಟದಲ್ಲಿ ಆಡಳಿತ ಮಂಡಳಿಯ ಪಾತ್ರ ಬಹು ಮುಖ್ಯವಾಗಿದೆ. ಎಲ್ಲ ಆಡಳಿತ ಮಂಡಳಿಗಳು ಒಂದೆಡೆ ಸೇರುತ್ತಿರುವುದು ಬಹಳ ಸಂತೋಷಕರ ವಿಷಯ. ಈ ಸಂಘಟನೆಗೆ ಬಲ ತುಂಬುವ ಕೆಲಸ ಆಗಬೇಕು ಎಂದು ಪಿಯುಡಿಡಿ ಡಾ. ಉಮೇಶಪ್ಪ ಎಚ್. ಹೇಳಿದರು.
ಸಂಘಟನೆ ಜಿಲ್ಲಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಭಗತ್ ಕಾಲೇಜಿನ ಎಂ.ಬಿ. ಸತೀಶ, ಸಮಾಜ ಒಳ್ಳೆಯ ಸಮಯದಲ್ಲಿ ಖಾಸಗಿ ಕಾಲೇಜುಗಳ ಪರ ಇರುತ್ತದೆ. ಆದರೆ ಯಾವುದೇ ಖಾಸಗಿ ಕಾಲೇಜಿನಲ್ಲಿ ಒಂದು ಸಣ್ಣ ಸಮಸ್ಯೆಯಾದರೆ ಅದನ್ನೇ ದೊಡ್ಡದು ಮಾಡಿ ಎಲ್ಲ ಖಾಸಗಿ ಕಾಲೇಜುಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ವಿಷಾದನೀಯ. ಖಾಸಗಿ ಕಾಲೇಜುಗಳು ಎಲ್ಲರಿಗಿಂತ ಹೆಚ್ಚು ಸಮಾಜಮುಖಿ ಕೆಲಸ ಮಾಡುತ್ತಿದ್ದು, ಸಂಖ್ಯೆಯಲ್ಲಿ ಬಹುಪಾಲು ಖಾಸಗಿ ಕಾಲೇಜುಗಳೇ ಇರುವುದರಿಂದ ಮತ್ತು ಹೆಚ್ಚಿನ ಮಕ್ಕಳು ಖಾಸಗಿ ಕಾಲೇಜಿನಲ್ಲೇ ಇರುವುದರಿಂದ ಸರ್ಕಾರ ಹಾಗೂ ಅಧಿಕಾರಿಗಳು ನೀತಿ, ನಿಯಮ ರೂಪಿಸುವಲ್ಲಿ ನಮ್ಮ ವಿಶ್ವಾಸವನ್ನೂ ತೆಗೆದುಕೊಳ್ಳುವುದು ಅವಶ್ಯವಾಗಿದೆ. ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು ಎಂದು ಹೇಳಿದರು.
ಜಿಲ್ಲಾ ಪಪೂ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಬೆನ್ನೂರ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ಕೊಂಡಿಯಂತೆ ಕಾರ್ಯ ನಿರ್ವಹಿಸಲು ಕುಪ್ಮಾದಂತಹ ಸಂಘಟನೆಯ ಅನಿವಾರ್ಯತೆಯಿದೆ. ಶಿಕ್ಷಣದ ಹೂಡಿಕೆಗೆ ಸಂಬಂಧಿಸಿದ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.ಜಂಟಿ ಕಾರ್ಯದರ್ಶಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ರವಿಕುಮಾರ ಪೂಜಾರ, ಖಾಸಗಿ ವಿದ್ಯಾಸಂಸ್ಥೆಗಳು ಸಮರ್ಥವಾಗಿ ಕಾರ್ಯ ನಿಭಾಯಿಸುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಇವರಿಗೆ ಋಣಿಯಾಗಿರಬೇಕು ಎಂದರು.