ತಾಪಂ ಸಭಾಂಗಣದಲ್ಲಿ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಸಾನ್ನಿಧ್ಯ
ಕನ್ನಡಪ್ರಭ ವಾರ್ತೆ, ಕಡೂರುಎಲ್ಲ ವರ್ಗಗಳಿಗೆ ಸಮಾನ ಹಕ್ಕಿನ ವೇದಿಕೆ ಕಲ್ಪಿಸಿ ಧಾರ್ಮಿಕ ಕಾಂತ್ರಿ ನಡೆಸಿದ ಬಸವಣ್ಣನವರು ನಿರ್ಮಿಸಿದ ಮಹಾ ಮಂಟಪ ನಮ್ಮೆಲ್ಲರ ಆದರ್ಶವಾಗಬೇಕು ಎಂದು ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಎಲ್ಲಾ ಸಮಾಜಗಳನ್ನು ಒಂದೆಡೆ ಸೇರಿಸಿ ಕಾಯಕ ಜೀವಿಗಳನ್ನಾಗಿ ಮಾಡಿರುವ ಬಸವಣ್ಣನ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿವೆ. ಶೋಷಿತ ಸಮಾಜಗಳ ಸಮಾನತೆಗಾಗಿ ಮೂಢನಂಬಿಕೆಗಳನ್ನು ತೊಲಗಿಸಲು ಪಣ ತೊಟ್ಟಿದ್ದರು. ಕಾಯಕ ಮಾಡಿ ತಿನ್ನಬೇಕು ಎನ್ನುವುದು ಬಸವಣ್ಣನವರ ಮುಖ್ಯ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ದುರ್ವಿದ್ಯೆಗಳೆಲ್ಲವೂ ಕ್ಷಯವಾಗಿ ಶಾಂತಿ, ಆತ್ಮ ಜ್ಞಾನ ಹಾಗೂ ಸ್ವಾಸ್ಥ್ಯ ಸಮಾಜ ಅಕ್ಷಯವಾಗಲಿ ಎಂಬುದು ಅಕ್ಷಯ ತೃತೀಯ ದಿನದ ಸಂದೇಶ. ಅಂದೇ ಹುಟ್ಟಿದ ಬಸವಣ್ಣನವರೂ ಇದೇ ತಳಹದಿ ಆಧಾರದಲ್ಲಿ ಶರಣಕ್ರಾಂತಿ ಮಾಡಿದರು. ನಮ್ಮನ್ನು ನಾವು ಮೊದಲು ಅರಿತುಕೊಂಡರೆ ಸ್ವಯಂ ಜ್ಞಾನ ಸಿದ್ದಿಸುತ್ತದೆ. ವಿಶ್ವಗುರು ಬಸವಣ್ಣನವರು ಹಾಕಿದ ತಳಹದಿ ಯಲ್ಲಿ ರೂಪುಗೊಂಡಿರುವುದು ವೀರಶೈವ-ಲಿಂಗಾಯಿತ ಧರ್ಮ. ಶರಣ ತತ್ವವೇ ಈ ಧರ್ಮದ ಮೂಲ ಸಾರ ಎಂದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಲಿಂಗಾಚಾರ, ಸದಾಚಾರದ ಸದ್ಗುಣಗಳನ್ನು ಮೈಗೂಡಿ ಸಿಕೊಳ್ಳಬೇಕು. ಬಸವಣ್ಣನವರ ಸಾಮಾಜಿಕ ಚಿಂತನೆಗಳು, ಅವರ ವಚನಗಳು ಎಂದಿಗೂ ಪ್ರಸ್ತುತ. ಶಸ್ತ್ರ ಮತ್ತು ಶಾಸ್ತ್ರ ಎರಡನ್ನೂ ಎದುರಿಸಿ ಸಮಾನತೆ ಪ್ರತಿಪಾದಿಸಿದ ಬಸವಣ್ಣನವರ ತತ್ವಾದರ್ಶಗಳು ಎಲ್ಲರಿಗೂ ಅನುಕರಣೀಯ ಎಂದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಮಾತನಾಡಿದರು. ತಾಲೂಕು ಅಧ್ಯಕ್ಷ ಟಿ.ಆರ್. ರೇಣುಕಪ್ಪ ಬಸವಣ್ಣನವರ ಜೀವನ ಕುರಿತು ಮಾತನಾಡಿದರು.ವೀರಶೈವ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಎಂ.ಎಚ್.ಪ್ರಕಾಶಮೂರ್ತಿ, ಡಾ.ಉಮೇಶ್, ಶಿವಪ್ರಕಾಶ್, ವಿಶ್ವನಾಥ್, ಸಾಣೇಹಳ್ಳಿ ರೇಣುಕಾರಾಧ್ಯ, ತಾರಾನಾಥ್, ಕಲ್ಮುರಡಪ್ಪ, ಜಿ.ಎಂ. ಯತೀಶ್, ಮಹೇಶ್ ಮತ್ತಿತರಿದ್ದರು.
11ಕೆಕೆಡಿಯು3.ಕಡೂರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬಸವ ಜಯಂತಿ ಆಚರಣೆ ನಡೆಯಿತು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಕವಿರಾಜ್ ಮತ್ತಿತರರು ಇದ್ದರು.