ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಲಿ

KannadaprabhaNewsNetwork | Published : Jul 2, 2024 1:32 AM

ಸಾರಾಂಶ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಆ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಬೇಕು.

ಕರವೇಯಿಂದ ಪ್ರತಿಭಟನೆ । ಕೊಪ್ಪಳ ತಹಸೀಲ್ದಾರಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಆ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿ ಕರವೇ ಜಿಲ್ಲಾ ಘಟಕದವರು ನಗರದಲ್ಲಿ ಪ್ರತಿಭಟಿಸಿ ಕನಕದಾಸ ವೃತ್ತದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋಪಾ ಮಾತನಾಡಿ, ಕರ್ನಾಟಕದ ಎಲ್ಲ ಬಗೆಯ ಉದ್ಯೋಗದಲ್ಲಿ ಕನ್ನಡಿಗರಿಗೆ ಸಿಂಹಪಾಲು ಇರಬೇಕೆಂಬುದು ನ್ಯಾಯಯುತವಾದ ಬೇಡಿಕೆ. ಆದರೆ ಖಾಸಗಿ ವಲಯ ದೊಡ್ಡದಾಗಿ ಬೆಳೆದ ಹಿನ್ನೆಲೆ ಈ ವರದಿ ಸಮರ್ಪಕವಾಗಿ ಜಾರಿಯಾಗಿಲ್ಲ. ಇದರಿಂದ ಕನ್ನಡದ ಯುವ ಸಮುದಾಯ ಉದ್ಯೋಗವಿಲ್ಲದೇ ಬಳಲುವಂತಾಗಿದೆ. ಆದ ಕಾರಣ ಈ ಸಮಸ್ಯೆಯನ್ನು ಸರಿಪಡಿಸಿ ಸರ್ಕಾರಿ, ಅರೆಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸಿಕೊಡಬೇಕು ಎಂದರು.

ಕರವೇ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಹೆಚ್ಚು ಭೌಗೋಳಿಕ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಕನ್ನಡ ನಾಡು ಸಾಂಸ್ಕೃತಿಕ, ಸಾಹಿತ್ಯಿಕ, ಚಾರಿತ್ರಿಕವಾಗಿ ವೈಭವದ ಇತಿಹಾಸವನ್ನು ಹೊಂದಿದೆ. ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ, ಸಾಮಾಜಿಕ, ರಾಜಕೀಯ ಚಹರೆಯೇ ಬದಲಾಗುತ್ತಿದೆ. ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರು ಈ ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಈ ನೆಲದಲ್ಲಿ ಸ್ಥಾಪಿತವಾಗಿರುವಂತಹ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೆ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ-ಯುವತಿಯರನ್ನು ಕರೆ ತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೆ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದರು.

ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಗೌರವಾಧ್ಯಕ್ಷ ಸಂಜಯ ಖಟವಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ ಆನೆಗೊಂದಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಮಹಿಳಾ ಘಟಕ ತಾಲೂಕಾಧ್ಯಕ್ಷೆ ಸಾವಿತ್ರಮ್ಮ ದಳವಾಯಿ, ಕೊಪ್ಪಳ ತಾಲೂಕಾಧ್ಯಕ್ಷ ವಿನೋದ ಎಸ್. ಗಂಗಾ, ತಾ.ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಕುಷ್ಟಗಿ ತಾಲೂಕಾಧ್ಯಕ್ಷ ಪ್ರಕಾಶ ಮನ್ನೇರಾಳ, ಜಿಲ್ಲಾ ಸಂಚಾಲಕ ಶರಣಯ್ಯ ಹಳೇಮನಿ, ಕುಷ್ಟಗಿ ತಾ.ಗೌರವಾಧ್ಯಕ್ಷ ಆದಪ್ಪ ಉಳಾಗಡ್ಡಿ, ಕರವೇ ಮುಖಂಡರಾದ ಅಶೋಕ ಮಿಸ್ಕಿನ್, ಪರಸಪ್ಪ ಅಳಳ್ಳಿ, ಆನಂದ ಎಲಿಗಾರ, ದೊಡ್ಡಬಸವರಾಜ ತಿಪ್ಪಣ್ಣವರ, ಶರಣಯ್ಯ ಕೆ., ಶಿವಕುಮಾರ ಡಿ.ಸಿ., ಮಂಜುನಾಥ ಕಿನ್ನಾಳ, ಆನಂದ ಮೇಗಳಮನಿ, ಎಂ.ರಾಮು ಆನೆಗುಂದಿ, ಮಾರುತಿ ಎಂ., ಎಚ್. ರಾಮಯ್ಯ ಹಾಗೂ ಅನೇಕ ಕಾರ್ಯಕರ್ತರು ಇದ್ದರು.

Share this article