ಸೇವಾ ಕೇಂದ್ರಗಳು ರೈತರ, ಜನಸಾಮಾನ್ಯರ ನೆಮ್ಮದಿ ಕೇಂದ್ರಗಳಾಗಿದ್ದು ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆಗಳು, ಡಿಜಿಟಲ್ ಪಾವತಿಗಳು ಬಹಳ ಬೇಗ ಹಾಗೂ ಪಾರದರ್ಶಕ ರೀತಿಯಲ್ಲಿ ಜನರನ್ನು ತಲುಪುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೆ. ಉದಯ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸೇವಾ ಕೇಂದ್ರಗಳು ರೈತರ, ಜನಸಾಮಾನ್ಯರ ನೆಮ್ಮದಿ ಕೇಂದ್ರಗಳಾಗಿದ್ದು ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆಗಳು, ಡಿಜಿಟಲ್ ಪಾವತಿಗಳು ಬಹಳ ಬೇಗ ಹಾಗೂ ಪಾರದರ್ಶಕ ರೀತಿಯಲ್ಲಿ ಜನರನ್ನು ತಲುಪುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೆ. ಉದಯ್ ತಿಳಿಸಿದರು. ತಾಲೂಕಿನ ರಂಗಾಪುರ ವಲಯದ ತಡಸೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೂತನ ಸಾಮಾನ್ಯ ಸೇವಾಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಸರ್ಕಾರದ ಯೋಜನೆಗಳು ಸಕಾಲಕ್ಕೆ ತಲುಪಬೇಕು ಹಾಗೂ ಕೆಲಸಕಾರ್ಯ ಬಿಟ್ಟು ಜನರು ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸಾಮಾನ್ಯ ಸೇವಾ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಸೇವಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಳೆ ವಿಮೆ, ಪಿಎಂ ಕಿಸಾನ್, ಆಯುಷ್ಮಾನ್, ಈ-ಶ್ರಮ್, ಪಿಎಂ-ವಿಶ್ವಕರ್ಮ, ವಾಹನಗಳ ವಿಮೆ, ಎಲ್ಐಸಿ ಭೀಮಾಜ್ಯೋತಿ, ಪಿಎಂ ಕಿವೈಎಸ್ಸಿ, ವಿದ್ಯುತ್ ಬಿಲ್, ಗ್ಯಾಸ್ ಬುಕಿಂಗ್, ಬಸ್, ಟ್ರೈನ್ ಟಿಕೆಟ್, ಪಾಸ್ ಪೋರ್ಟ್, ಪಾನ್ಕಾರ್ಡ್ ನಂತಹ ಅನೇಕ ಸೌಲಭ್ಯಗಳನ್ನು ಸಮಾಜದ ಪ್ರತಿಯೊಬ್ಬ ಪ್ರಜೆಗೂ ಒದಗಿಸಿಕೊಡಲಾಗುತ್ತದೆ. ಇದರ ಸದುಪಯೋಗವನ್ನು ಜನಸಾಮಾನ್ಯರು ಉಪಯೋಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸೇವಾ ಕೇಂದ್ರ ಕಟ್ಟಡ ಮಾಲಿಕ ಸ್ವಾಮಿನಾಥ್, ಮುಖ್ಯ ಶಿಕ್ಷಕಿ ಅನಿತಾ, ತಾಲೂಕು ಹಣಕಾಸು ಪ್ರಬಂದಕ ರೇವಣ್ಣ, ವಲಯ ಮೇಲ್ವಿಚಾರಕ ದಿನೇಶ್, ತಾಲೂಕು ಸಿಎಸ್ಸಿ ನೋಡಲ್ ಅಧಿಕಾರಿ ಶೋಭ, ಸೇವಾಪ್ರತಿನಿಧಿ ದಿವ್ಯ, ಸಿಎಸ್ಸಿ ಸೇವಾದರರಾದ ಲತಾಮಣಿ ಸೇರಿದಂತೆ ಸಂಘದ ಪಾಲುದಾರ ಬಂಧುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.