ಅಂಕೋಲಾದ ಪಿಎಂ ಹೈಸ್ಕೂಲ್ ರೈತ ಭವನದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಅಂಕೋಲಾ: ನಾಮಧಾರಿ ಸಮಾಜದ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಬೇಕು. ಈಗ ಸಾಕಷ್ಟು ಸೌಲಭ್ಯಗಳಿದ್ದು, ಪಾಲಕರಿಗೆ ಹಾಗೂ ಗುರುಗಳಿಗೆ ಗೌರವ ಹೆಚ್ಚಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವೈದ್ಯ ಡಾ. ಕರುಣಾಕರ ಎಂ. ನಾಯ್ಕ ತಿಳಿಸಿದರು.
ಪಟ್ಟಣದ ಪಿಎಂ ಹೈಸ್ಕೂಲ್ ರೈತ ಭವನದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯವರು ಹಮ್ಮಿಕೊಂಡ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಯ ಈಡಿಗ ನಾಮಧಾರಿ ನೌಕರರ ಸಂಘದ ಗೌರವಾಧ್ಯಕ್ಷ ಮೋಹನ ಡಿ. ನಾಯ್ಕ ಮಾತನಾಡಿ, ನಮ್ಮ ಸಮಾಜದಲ್ಲಿಯೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಎಷ್ಟೆ ಬಡವರಿದ್ದರೂ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಾಲಕರು ನೀಡಬೇಕು. ಶಿಕ್ಷಣ ಪಡೆದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಉಪಾಧ್ಯಕ್ಷ ರಮೇಶ ಎನ್. ನಾಯ್ಕ ಬೊಬ್ರುವಾಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ದಾಮೋದರ ಜಿ. ನಾಯ್ಕ ಮಾತನಾಡಿದರು. ಸಮಿತಿಯ ಯುವ ಘಟಕದ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ನಿರ್ವಹಿಸಿದರು. ಉಪಾಧ್ಯಕ್ಷ ರಮೇಶ ಎಸ್. ನಾಯ್ಕ ತೆಂಕಣಕೇರಿ ವಂದಿಸಿದರು. ಕಾರ್ಯದರ್ಶಿ ವಸಂತ ವಿ. ನಾಯ್ಕ ಇತರರು ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ
ಎಸ್ಎಸ್ಎಲ್ಸಿಯಲ್ಲಿ ಸ್ಮಿತಾ ಉದಯ ನಾಯ್ಕ, ಸಮನ್ವಿತಾ ನಂದೀಶ ನಾಯ್ಕ, ಧ್ರುವ ಪ್ರಭಾಕರ ನಾಯ್ಕ, ಆದಿತ್ಯ ಮಂಜುನಾಥ ನಾಯ್ಕ, ಸಂಪ್ರೀತ ಸಂತೋಷ ನಾಯ್ಕ, ಭೂಮಿಕಾ ಶಾಂತ ನಾಯ್ಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ಮಾನ್ಯಾ ಮಂಜುನಾಥ ನಾಯ್ಕ, ಅರುಣ ಕೃಷ್ಣಮೂರ್ತಿ ನಾಯ್ಕ, ಅನನ್ಯಾ ವಿನೋದ ನಾಯ್ಕ, ಸಿಂಚನಾ ಮಂಜುನಾಥ ನಾಯ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.