ಗಜೇಂದ್ರಗಡ: ಸಮಾಜದಲ್ಲಿ ನಡೆಯುವ ಘಟನೆ, ಸಮಸ್ಯೆ ಸೇರಿದಂತೆ ಹಲವಾರು ಪ್ರಚಲಿತ ವಿದ್ಯಮಾನಗಳು ಕುರಿತ ನಾಟಕಗಳು ಜನರಿಗೆ ಅರ್ಥ ಪೂರ್ಣವಾದ ಸಾಮಾಜಿಕ ಸಂದೇಶ ನೀಡುತ್ತವೆ ಎಂದು ರೋಣ ಪುರಸಭೆ ಸದಸ್ಯ ಮಿಥುನ್ ಪಾಟೀಲ ಹೇಳಿದರು.
ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಕಣ್ಮರೆಯಾಗುತ್ತಿರುವ ಗ್ರಾಮೀಣ ಪ್ರದೇಶದ ಸಂಸ್ಕೃತಿ,ಪರಂಪರೆ ಮತ್ತು ಜೀವನ ಶೈಲಿಗಳಿಗೆ ಮರು ಜೀವ ಕಲ್ಪಸುವ ಕಾರ್ಯ ನಾಟಕಗಳು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ನಾಟಕ ಉಳಿಸಿ, ಬೆಳೆಸುವ ಕಾರ್ಯ ಮೇಲಿಂದ ಮೇಲೆ ನಡೆಯಬೇಕಿದೆ ಎಂದ ಅವರು, ನಾಟಕಗಳು ಜನರಿಗೆ ಹಲವಾರು ವಿಷಯಗಳ ಕುರಿತು ಮನವರಿಕೆ ಮಾಡಿ ತಿಳಿವಳಿಕೆ ಮೂಡಿಸುತ್ತದೆ. ಮನರಂಜನೆಯ ಜತೆಗೆ ರಂಗಭೂಮಿ ಉಳಿಸುವ ಕೆಲಸ ಮಾಡುತ್ತದೆ. ಈ ನಾಟಕವು ಜರ್ಮನ್ ನಾಟಕಕಾರ ಬರ್ಟೋಲ್ಡ್ ಬ್ರೆಕ್ಟ್ನ ನಾಟಕವನ್ನು ಆಧರಿಸಿದೆ ಎಂದು ತಿಳಿಸಿದರು.
ಆರ್.ಕೆ.ಬಾಗವಾನ ಮಾತನಾಡಿ, ನಾಟಕವೆಂದರೆ ಸಂಭಾಷಣೆಯನ್ನು ಕಂಠಪಾಠ ಮಾಡಿಸಿ ಕಟ್ಟುವುದಲ್ಲ. ತರಬೇತಿಯಲ್ಲಿ ಕಲಾವಿದರು ಅಭಿವ್ಯಕ್ತಿಸಿದ ಪರಿಣಾಮ ನಾಟಕವಾಗಿದೆ. ಹೀಗಾಗಿ ನಾಟಕವೆಂದರೆ ಸುಲಭವಲ್ಲ ಎಂದರು.ಈ ವೇಳೆ ವಕೀಲ ಕೆ.ಎಸ್. ಕೊಡತಗೇರಿ, ಬಸವರಾಜ ಮೂಲಿಮನಿ, ಕಳಕಯ್ಯ ಹಿರೇಮಠ, ಹೇಮಾಪತಿ ಭೋಸಲೆ, ಹನಮಪ್ಪ ಹೋರಪೇಟಿ, ಇಮಾಮಸಾಬ್ ಬಾಗವಾನ, ಕಳಕಪ್ಪ ಅಡವಿ, ಕಟ್ಟೆಪ್ಪ ಮಾದರ, ಮಲ್ಲಿಕಾರ್ಜುನ ಗಾರಗಿ, ಬಸವರಾಜ ಶೀಲವಂತರ, ಕೆ.ಕೆ. ಬಾಗವಾನ, ಹನಮಪ್ಪ ಮಾದರ, ಮುತ್ತಪ್ಪ ಲ್ಯಾವಕ್ಕಿ, ಎಫ್.ಡಿ. ಕಟ್ಟಿಮನಿ, ಪರಶುರಾಮ ಹೊರಪೇಟಿ, ಮಂಜು ಭೋಸಲೆ ಇತರರು ಇದ್ದರು.