ಗದಗ: ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿ ನೆಡಬೇಕು. ಅವುಗಳನ್ನು ಪಾಲನೆ,ಪೋಷಣೆ ಮಾಡಿ ಸಂರಕ್ಷಿಸಬೇಕು.ಈ ಸಂರಕ್ಷಣೆಯ ಕಾಳಜಿಯಿಂದ ಜೀವಿಗಳ ಪೋಷಣೆಯು ಸಾಧ್ಯವಾಗುತ್ತದೆ. ಯುವ ಜನತೆ ಪರಿಸರದ ಸಮೃದ್ಧಿಗೆ ಕೊಡುಗೆ ನೀಡಬೇಕು ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಾ.ಸುರೇಶ. ವಿ.ನಾಡಗೌಡರ ಹೇಳಿದರು.ಸಮೀಪದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಬುಧವಾರ ಎನ್.ಎಸ್.ಎಸ್ ಕೋಶ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಿಸರ ಸಮೃದ್ಧಿಯಿಂದ ಇದ್ದರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತಾದ ಕಾಳಜಿ ನಿರಂತರ ಮತ್ತು ಶಾಶ್ವತವಾಗಿರಲಿ. ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗಿದೆ. ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಸಾವಿರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 50 ಸಾವಿರ ಗಿಡಗಳನ್ನು ನೆಟ್ಟು ವಿಶ್ವವಿದ್ಯಾಲಯವನ್ನು ಹಸಿರು ವಿಶ್ವವಿದ್ಯಾಲಯವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಆ ನಂತರದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಾವಿರ ವಿವಿಧ ರೀತಿಯ ಗಿಡಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿ ನೆಟ್ಟು ಪರಿಸರ ಪ್ರೇಮ ಮೆರೆದರು.
ಈ ವೇಳೆ ಉಮೇಶ ಬಾರಕೇರ, ಡಾ.ಅಬ್ದುಲ್ ಅಜೀಜ್ ಮುಲ್ಲಾ, ಡಾ. ಗಿರೀಶ ದೀಕ್ಷಿತ್, ಶಶಿಭೂಷಣ್ ದೇವೂರ, ಮೃತ್ಯುಂಜಯ ಹಿರೇಮಠ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರಶಾಂತ ಮೇರವಾಡೆ, ಡಾ. ಉಡಚಪ್ಪ ಪೂಜಾರ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಕಾಶ ಮಾಚೇನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.