ಗಜೇಂದ್ರಗಡ: ಜಾತಿ ವಿಷ ಇದ್ದಂತೆ, ಧರ್ಮ ಅಮೃತವಿದ್ದಂತೆ. ಹೀಗಾಗಿ ಜಾತಿ ಹಿಡಿದು ಬಡಿದಾಡುವ ಬದಲು ಧರ್ಮದಿಂದ ನಡೆದು ಜಾತ್ಯತೀತರಾಗಿ ಮಾನವರೆಲ್ಲರೂ ಒಂದು ಎನ್ನೋಣ ಎಂದು ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.ಮಹಾತ್ಮಗಾಂಧಿ ಹುತಾತ್ಮ ದಿನ ಅಂಗವಾಗಿ ರಾಜ್ಯವಾಪಿ ಸೌಹಾರ್ದತೆ ಪರಂಪರೆ ಉಳಿಸಿ ಬೆಳೆಸುವ ಅಭಿಯಾನ ಹಿನ್ನೆಲೆ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಸೌಹಾರ್ದ ಕರ್ನಾಟಕ, ವಿವಿಧ ಪ್ರಗತಿಪರ, ಸಮಾನ ಮನಸ್ಕರು ಹಾಗೂ ಜನಪರ ಸಂಘಟನೆಗಳಿಂದ ಮಂಗಳವಾರ ನಡೆದ ಸೌಹಾರ್ದತಾ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಕ್ಕೇದ ದರ್ಗಾದ ಹಜರತ್ ಸೈಯದ್ ನಿಜಾಮುದ್ದೀನ್ ಶಾ ಅಶ್ರಫಿ ಮಾತನಾಡಿ, ಜಾತಿ ಮನೆಗೆ ಸೀಮಿತವಾಗಿರಬೇಕು ಹೊರಗೆ ಬಂದರೆ ನಾವೆಲ್ಲ ಒಂದೇ ಎನ್ನುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕಿದೆ. ಮನುಷ್ಯನಿಗೆ ಬೆಲೆ ಇಲ್ಲ, ಮನುಷ್ಯತ್ವಕ್ಕೆ ಬೆಲೆ ಇದೆ. ಸರ್ವಜನಾಂಗದ ತೋಟದಲ್ಲಿ ಎಲ್ಲರೂ ಒಗಟ್ಟಿನಿಂದ ಬಾಳಿದರೆ ಹೂತೋಟ ಸುಂದರವಾಗಿ ಕಾಣಲಿದೆ ಎಂದರು.
ಇಲ್ಲಿನ ರಾಜವಾಡೆಯ ಯಶರಾಜ್ ಘೋರ್ಪಡೆ ಮಾತನಾಡಿ, ಪಟ್ಟಣದಲ್ಲಿ ೧೮ ಮಠ, ೧೮ ಮಸೀದಿ ಹಾಗೂ ೧೮ ಬಾವಿಗಳನ್ನು ಕಟ್ಟಿದ್ದೇವೆ. ನಮ್ಮ ಊರಿನಂತೆ ದೇಶದಲ್ಲಿ ಮತ್ತೊಂದು ಊರಿಲ್ಲ ಎನ್ನುವುದು ಹೆಮ್ಮೆ ನಮಗಿದೆ. ಇಂತಹ ಭವ್ಯವಾದ ಇತಿಹಾಸ ಹಾಗೂ ಸಂಪ್ರದಾಯದ ಛತ್ರಪತಿ ಶಾಹುಮಹಾರಾಜ ಪ್ರಥಮ ಮೀಸಲಾತಿ ಜಾರಿ ತಂದವರು. ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗ ಮತ್ತು ಅವರ ಆದರ್ಶಗಳು ನಮಗೆ ಪ್ರೇರಣೆಯಾಗಿದ್ದು, ಸೌಹಾರ್ದ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.ಫಾದರ್ ಜೊಶೇಪ್ ಮಾತನಾಡಿ, ನಾವು ಎಲ್ಲರೂ ಒಂದು ಎನ್ನುವ ಮನೋಭಾವನೆ ನಮ್ಮನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ಹೀಗಾಗಿ ನಾವು ಒಂದು ಎಂದು ಸಾಗುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ನಿವೃತ್ತ ಉಪನ್ಯಾಸಕ ಬಿ.ಎ.ಕೆಂಚರೆಡ್ಡಿ, ವಕೀಲ ಎಂ.ಎಸ್.ಹಡಪದ, ಮುಖಂಡ ಎ.ಡಿ.ಕೋಲಕಾರ ಮಾತನಾಡಿದರು.ಈ ವೇಳೆ ಮಾರುತಿ ಚಿಟಗಿ, ರಾಜು ಸಾಂಗ್ಲೀಕರ, ಬಾಲು ರಾಠೋಡ, ಶರಣು ಪೂಜಾರ, ಬಸವರಾಜ ಹೊಸಮನಿ, ಚಂದ್ರು ರಾಠೋಡ, ಗಣೇಶ ರಾಠೋಡ, ಹಸನಸಾಬ ತಟಗಾರ, ಕಳಕಯ್ಯ ಸಾಲಿಮಠ, ನಾಸಿರಅಲಿ ಸುರಪುರ, ಉಮೇಶ ರಾಠೋಡ ಸೇರಿ ಇತರರು ಇದ್ದರು.