ಗದಗ: ಮಹಿಳೆಯರು ಇಂದು ಕಲೆ, ಸಾಹಿತ್ಯ, ಶಿಕ್ಷಣ,ತಂತ್ರಜ್ಞಾನ, ಕ್ರೀಡಾರಂಗದಲ್ಲಿ ಮುಂದಿದ್ದಾರೆ. ಜತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಮಹಿಳೆಯರು ಮುಂದೆ ಬಂದು ನವ ಸಮಾಜದ ರೂವಾರಿಗಳಾಗಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ಸುವರ್ಣಾ ಮದರಿಮಠ ಹೇಳಿದರು.
ಅಧ್ಯಕ್ಷತೆ ವಹಿಸಿದ ಜಯಶ್ರೀ ವಸ್ತ್ರದ ಮಾತನಾಡಿ, ಒಂದು ವರ್ಷದ ಕಾಲ ನಾನು ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಲು ತಾವು ನೀಡಿದ ಸಲಹೆ, ಸೂಚನೆ, ಸಹಕಾರಕ್ಕೆ ಸದಾ ಋಣಿಯಾಗಿರುವೆ. ತಾವು ನೀಡುವ ಸಹಕಾರವೇ ಸಂಸ್ಥೆಯ ಅಭಿವೃದ್ಧಿಗೆ ಆಧಾರವಾಗಿದೆ. ವ್ಯಕ್ತಿ ಶಕ್ತಿಯಾಗಿ ಬೆಳೆಯಲು ಸಂಸ್ಥೆಗಳು ಸಹಕಾರಿಯಾಗಿವೆ, ಸಂಸ್ಥೆಗಳನ್ನು ಬೆಳೆಸಿರಿ, ತಾವು ಬೆಳೆಯಿರಿ ಎಂದರು.
ಈ ವೇಳೆ ಕಿತ್ತೂರರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಮುಂಡರಗಿಯ ಮದರ ಥೆರೆಸಾ ಮಹಿಳಾ ಮಂಡಳದ ಅಧ್ಯಕ್ಷೆ ಮಂಜುಳಾ ಇಟಗಿ ಅವರನ್ನು ಸನ್ಮಾನಿಸಲಾಯಿತು.ರೇಣುಕಾ ಚಿಂಚಲಿಮಠ,ಅನ್ನಪೂರ್ಣ ವರವಿ ಸೇರಿದಂತೆ ಇತರರು ಇದ್ದರು. ವಿಜಯಲಕ್ಷ್ಮೀ ಮೇಕಳಿ ಪ್ರಾರ್ಥಿಸಿದರು. ಗೌರಿ ಜಿರಂಕಳಿ ಸ್ವಾಗತಿಸಿದರು. ಸುಲೋಚನಾ ಐಹೊಳ್ಳಿ ಪರಿಚಯಿಸಿದರು. ಜಯಶ್ರೀ ಡಾವಣಗೇರಿ ವರದಿ ವಾಚನ ಮಾಡಿದರು. ಕಾರ್ಯದರ್ಶಿ ಶಾಂತಾ ಮುಂದಿನಮನಿ ನಿರೂಪಿಸಿದರು. ಆ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.