ಬರವಣಿಗೆ ಜನ-ದೇಶದ ಹಿತಾಸಕ್ತಿ ಕಡೆಗಿರಲಿ: ಚಲುವರಾಯಸ್ವಾಮಿಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲು ಸಲಹೆ
- ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲು ಸಲಹೆ ಕನ್ನಡಪ್ರಭ ವಾರ್ತೆ ಮಂಡ್ಯ ಪತ್ರಕರ್ತರ ಬರವಣಿಗೆ ಜನ ಮತ್ತು ದೇಶದ ಹಿತಾಸಕ್ತಿ ಕಡೆಗೆ ಇರಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ನಡೆದ ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಸೂಕ್ಷ್ಮ ಮತ್ತು ಪ್ರಮುಖವಾದುದು. ಅದು ಎಂದಿಗೂ ಸ್ವಾರ್ಥಪರ ಮತ್ತು ವ್ಯಾಪಾರೋದ್ಯಮ ಆಗಬಾರದು. ಒಂದು ಕಾಲದಲ್ಲಿ ಪತ್ರಿಕಾ ವರದಿಗಳು ಸಮಾಜವನ್ನು ಎಚ್ಚರಿಸುವ, ಅಧಿಕಾರಸ್ಥರನ್ನು ಬೆಚ್ಚಿಬೀಳಿಸುವಂತಿದ್ದವು. ಈಗ ಆ ವಾತಾವರಣವಿಲ್ಲ. ಇದರ ಬಗ್ಗೆ ಪತ್ರಿಕಾ ರಂಗದಲ್ಲಿರುವವರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ರಾಜಕಾರಣಕ್ಕೆ ಪರ್ಯಾಯವಾದ ಮತ್ತೊಂದು ವ್ಯವಸ್ಥೆ ಇಲ್ಲ. ಅಭಿವೃದ್ಧಿಗೆ ರಾಜಕಾರಣ ಅವಶ್ಯವಾಗಿದೆ. ಜನಹಿತಕ್ಕೆ ಬೇಕಾದ ವಿಷಯಗಳನ್ನು ಮೂಲೆಗುಂಪು ಮಾಡಿ ಅನವಶ್ಯಕ ವಿಷಯಗಳಿಗೆ ಮಾನ್ಯತೆ ನೀಡುತ್ತಿರುವುದು ಸರಿಯಲ್ಲ. ಜನರಿಗೆ ಬೇಕಾದ ವಿಷಯಗಳು ಸಮಾಜದಲ್ಲಿ ನೂರಾರು ಇವೆ. ಅವುಗಳ ಮೇಲೆ ಬೆಳಕು ಚೆಲ್ಲುವಂತೆ ಸಲಹೆ ನೀಡಿದರು. ಅಧಿಕಾರಸ್ಥರು ತಪ್ಪುಮಾಡಿದಾಗ ಅದನ್ನು ತೋರಿಸಿ. ಅದು ನಿಮ್ಮ ಕರ್ತವ್ಯವೂ ಹೌದು. ಆದರೆ, ಒಬ್ಬರನ್ನು ಗುರಿಯಾಗಿಸಿಕೊಂಡು ರಾಜಕೀಯ ತೇಜೋವಧೆ ಮಾಡುವುದು ಸರಿಯಲ್ಲ. ಅದಕ್ಕೆ ಪ್ರೇರಣೆ ನೀಡುವವರಿಗೆ ಮಾನ್ಯತೆಯನ್ನೂ ನೀಡಬಾರದು. ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು, ಜನರಿಗೆ ಅನುಕೂಲವಾಗುವಂತಹ ವರದಿಗಳು ಸಮಾಜದ ಪ್ರಗತಿಗೆ ನೆರವಾಗುತ್ತವೆ. ಆಗ ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂಬ ಮಾತು ಸಾರ್ಥಕತೆ ಪಡೆಯುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.