ಯೋಗ ಜೀವನ ಪದ್ಧತಿ ಆಗಲಿ

KannadaprabhaNewsNetwork | Published : Jun 22, 2025 1:18 AM

ಯೋಗ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಪ್ರತಿ ದಿನ ಬೆಳಗ್ಗೆ ಯೋಗ ಸಾಧನೆ ಮಾಡಿದ್ದಲ್ಲಿ ನಿಜವಾದ ಯೋಗಿಗಳಾಗಲು ಸಾಧ್ಯ.

ರಾಣಿಬೆನ್ನೂರು: ಶರೀರ ಮನಸ್ಸು ಏಕಾಗ್ರಗೊಳಿಸುವುದೇ ಯೋಗವಾಗಿದ್ದು, ಅದು ನಮ್ಮ ಜೀವನ ಪದ್ಧತಿ ಆಗಲಿ ಎಂದು ಮುಂಬಯಿ ಶ್ರೀರಾಮಕೃಷ್ಣ ಮಿಶನ್‌ದ ದಯಾಧಿಪಾನಂದಜಿ ಮಹಾರಾಜ್ ನುಡಿದರು.

ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಕಾಲೇಜಿನ ಆವರಣದಲ್ಲಿ ಪತಂಜಲಿ ಯೋಗ ಪೀಠ, ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮ, ಕಾಕಿ ಜನಸೇವಾ ಸಂಸ್ಥೆ, ಗಾಯತ್ರಿ ಕೋಮಲಾಚಾರ್ ಯೋಗ ತರಬೇತಿ ಸಂಸ್ಥೆ ಹಾಗೂ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಯೋಗ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಪ್ರತಿ ದಿನ ಬೆಳಗ್ಗೆ ಯೋಗ ಸಾಧನೆ ಮಾಡಿದ್ದಲ್ಲಿ ನಿಜವಾದ ಯೋಗಿಗಳಾಗಲು ಸಾಧ್ಯ. ಯೋಗ ಜೀವನ ಪಾಲನೆಯಿಂದ ಶ್ರೇಷ್ಠ ಆರೋಗ್ಯ ಪ್ರಾಪ್ತಿಯಾಗುತ್ತದೆ. ಯೋಗ ಶರೀರ ಸಶಕ್ತಗೊಳಿಸುತ್ತದೆ. ಮನುಷ್ಯ ತನ್ನ ಆತ್ಮ ಅರಿತಾಗ ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಶರೀರ, ಮನಸ್ಸು ಒಂದಾಗಿ ಆತ್ಮನಲ್ಲಿ ಲೀನವಾದಾಗ ಉತ್ತಮ ಆರೋಗ್ಯ ಲಭಿಸುತ್ತದೆ. ಶರೀರ, ಮನಸ್ಸು, ಆತ್ಮದ ತೃಪ್ತಿಗೆ ಯೋಗದ ಅಗತ್ಯವಿದೆ. ಯೋಗದಿಂದ ಜ್ಞಾಪಕ ಶಕ್ತಿ ವೃದ್ಧಿಯಾಗಿ ರೋಗಗಳು ದೂರವಾಗುತ್ತವೆ ಎಂದರು.

ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.

ಬ್ರಹ್ಮಕುಮಾರ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಮಾಲತಿ ಅಕ್ಕ, ಬಿಇಒ ಶಾಮಸುಂದರ ಅಡಿಗ, ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರ ವಿಜಾಪುರ ಅಧ್ಯಕ್ಷತೆ ವಹಿಸಿದ್ದರು.

ಆರ್.ಬಿ. ಪಾಟೀಲ, ಕೆ.ಸಿ. ಕೋಮಲಾಚಾರಿ, ರಾಮಸಿಂಗ್ ರಾಠೋಡ, ಗಿರಿಜಾ ಸಾಳೇರ, ಸರೋಜಾ ಸುಣಗಾರ, ಪಾರ್ವತಿ ಹುಲಿಹಳ್ಳಿ, ಶಶಿಕಲಾ ಬಡೆಂಕಲ್, ಡಾ.ಲಕ್ಷಣ ಪೂಜಾರ, ಎಚ್.ಎಸ್. ಮುದಿಗೌಡ್ರ, ವಜ್ರೇಶ್ವರಿ ಲದ್ವಾ, ಷಣ್ಮುಖಪ್ಪ ಕೋಟೂರ, ಕೆ.ಜಿ. ದಿವಾಕರಮೂರ್ತಿ ಮತ್ತಿತರರಿದ್ದರು.