ಶಿಗ್ಗಾಂವಿ: ಒಂದು ಮರ ಕಡಿದರೆ ಏಳು ಗಿಡಗಳನ್ನು ನೆಡಬೇಕು ಎಂಬುದು ನಿಯಮ ಇದೆ. ಆದಷ್ಟು ಗಿಡಗಳನ್ನು ಕಡಿಯದೆ ಇರೋಣ. ಪ್ರತಿ ದಿನ ಒಂದು ಸಸಿ ನೆಡಬೇಕು ಎನ್ನುವ ಮನಸ್ಸು ಮಾಡೋಣ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ವಿಶ್ವ ಸಂಸ್ಥೆಯಲ್ಲಿ ಚರ್ಚೆಯಾಗಿ, ಪರಿಸರ ಸಂರಕ್ಷಣೆಗಾಗಿ ದಿನಾಚರಣೆಯನ್ನು ೧೯೭೩ರಲ್ಲಿ ಜಾರಿಗೆ ತರಲಾಗಿದೆ. ಪ್ರತಿ ವರ್ಷ ಒಂದೊಂದು ಧ್ಯೇಯವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತದೆ. ಹಾಗೆಯೇ ಈ ವರ್ಷ ನಮ್ಮ ಭೂಮಿ ನಮ್ಮ ಭವಿಷ್ಯ-ಪೀಳಿಗೆಯ ಪುನರ್ಸ್ಥಾಪಕರು ನಾವು ಎಂಬುದು ಧ್ಯೇಯವಾಗಿದೆ. ತಾಪಮಾನ ಏರಿಳಿತದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜೀವ ಸಂಕುಲಕ್ಕೆ ತೊಂದರೆಯಾಗಿದೆ. ಹಾಗಾಗಿ ಪರಿಸರ ರಕ್ಷಣೆಗೆ ನಾವೆಲ್ಲ ನಿಲ್ಲಬೇಕಾಗಿದೆ ಎಂದರು.
ರಂಗಕರ್ಮಿ ಡಾ. ಪ್ರಕಾಶ ಗರುಡ ಮಾತನಾಡಿ, ಪರಿಸರದ ಜಾಗೃತಿ ಕುರಿತು ರಂಗ ಪ್ರದರ್ಶನ ನೀಡಿದ್ದೇವೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣ ಅತ್ಯಂತ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಕ್ಯಾಂಪಸ್ ಅದ್ಭುತವಾಗಿದೆ. ಪರಿಸರಸ್ನೇಹಿ ರಂಗಪ್ರಕಾರಗಳನ್ನು ಅಳವಡಿಸಿಕೊಳ್ಳೋಣ ಎಂದರು.ಎಂ.ವಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣಾ ಲಿಂಬಿಕಾಯಿ ಅವರು ಚಿತ್ರಿಸಿದ ಪರಿಸರ ಜಾಗೃತಿ ಕುರಿತಾದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಭಾವಚಿತ್ರ ಬಿಡುಗಡೆಗೊಳಿಸಲಾಯಿತು. ಸಂಗೀತ ನಿರ್ದೇಶಕ ರಾಘವ್ ಅವರು ಪರಿಸರ ಜಾಗೃತಿ ಕುರಿತು ಗೀತೆಗಳನ್ನು ಹಾಡಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.