ಭಾರತದ ನೆಲದಲ್ಲಿ ಬಹುತ್ವ ಎತ್ತಿ ಹಿಡಿಯೋಣ: ದಸ್ತಗೀರಸಾಬ್ ದಿನ್ನಿ

KannadaprabhaNewsNetwork |  
Published : Apr 22, 2026, 02:45 AM IST
ಬಳ್ಳಾರಿ ತಾಲೂಕಿನ ದಮ್ಮೂರು ಗ್ರಾಮದ ವೆಂಕಾವಧೂತ ಮಠದಲ್ಲಿ ಸರಳಾದೇವಿ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ’ಹೊಸ ತಲೆಮಾರು ಮತ್ತು ಸೌಹಾರ್ದತೆ’ ವಿಷಯದ ಕುರಿತು ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಮಾತನಾಡಿದರು.  | Kannada Prabha

ಸಾರಾಂಶ

ಪರಸ್ಪರ ಸ್ನೇಹ, ಸಹಬಾಳ್ವೆ, ಸೌಜನ್ಯ, ಸೌಹಾರ್ದ, ಶಾಂತಿಯಿಂದ ನಾವೆಲ್ಲರೂ ಬದುಕಿ ಭಾರತದ ನೆಲದಲ್ಲಿ ಬಹುತ್ವವನ್ನು ಎತ್ತಿ ಹಿಡಿಯಬೇಕಾದ ಅಗತ್ಯವಿದೆ ಎಂದು ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಅಭಿಪ್ರಾಯಪಟ್ಟರು.

ಬಳ್ಳಾರಿ: ಪರಸ್ಪರ ಸ್ನೇಹ, ಸಹಬಾಳ್ವೆ, ಸೌಜನ್ಯ, ಸೌಹಾರ್ದ, ಶಾಂತಿಯಿಂದ ನಾವೆಲ್ಲರೂ ಬದುಕಿ ಭಾರತದ ನೆಲದಲ್ಲಿ ಬಹುತ್ವವನ್ನು ಎತ್ತಿ ಹಿಡಿಯಬೇಕಾದ ಅಗತ್ಯವಿದೆ ಎಂದು ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಅಭಿಪ್ರಾಯಪಟ್ಟರು.

ತಾಲೂಕಿನ ದಮ್ಮೂರು ಗ್ರಾಮದ ವೆಂಕಾವಧೂತ ಮಠದಲ್ಲಿ ಸರಳಾದೇವಿ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಹೊಸ ತಲೆಮಾರು ಮತ್ತು ಸೌಹಾರ್ದ ವಿಷಯದ ಕುರಿತು ಮಾತನಾಡಿದರು.

ನಮ್ಮ ಸುತ್ತಲಿನ ಸಮಾಜದಲ್ಲಿ ಮೋಸ, ವಂಚನೆ, ಶೋಷಣೆ, ಅತ್ಯಾಚಾರ, ದೌರ್ಜನ್ಯ, ಮರ್ಯಾದೆಗೇಡು ಹತ್ಯೆ ,ಜಾತಿ ತಾರತಮ್ಯ ಕೃತ್ಯಗಳು ಢಾಳಾಗಿ ಗೋಚರಿಸುತ್ತಿವೆ. ಇವುಗಳ ಸಂಕಟದ ಮಗ್ಗಲು ಕಲಕಬೇಕಿದೆ. ಹೊಸ ತಲೆಮಾರು ಗಂಭೀರವಾಗಿ ಆಲೋಚಿಸಿ,ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿ ನವ ಸಮಾಜಕ್ಕೆ ಕೈಜೋಡಿಸಬೇಕಿದೆ ಎಂದು ವಿಶ್ಲೇಷಿಸಿದರು.

ಬದಲಾದ ಸಾಮಾಜಿಕ, ರಾಜಕೀಯ ಕಾಲಘಟ್ಟದಲ್ಲಿ ಜಗದ ಆಗು- ಹೋಗುಗಳನ್ನು ತೆರೆದ ಕಣ್ಣಿನಿಂದ ಗಮನಿಸಬೇಕು. ಸಮಕಾಲೀನ ಸಮಾಜದಲ್ಲಿ ಜಾತ್ಯತೀತ ಮನೋಭಾವ, ಮಾನವೀಯ ಮೌಲ್ಯ, ಸೌಹಾರ್ದತಾ ಪ್ರಜ್ಞೆಯನ್ನು ಅಂತರ್ಗತವಾಗಿಸಿಕೊಳ್ಳಬೇಕಿದೆ. ಬಹುಭಾಷಿಕ, ಬಹು ಸಂಸ್ಕೃತಿಯ ಗ್ರಾಮ ಭಾರತದಲ್ಲಿ ಉತ್ತಮ ಲೋಕದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಒತ್ತಿ ಹೇಳಿದರು.

ದೇಶದ ಭವಿಷ್ಯವನ್ನು ಅಡಗಿಸಿಕೊಂಡ ಯುವ ಸಮುದಾಯ ಕನ್ನಡ ನಾಡು, ನುಡಿ, ನೆಲ, ಜಲ, ಪರಿಸರದ ಬಗೆಗೆ ಪ್ರೀತಿ ಅಭಿಮಾನ, ವಿವೇಕ ಮತ್ತು ನೈತಿಕ ಕಾಳಜಿಯನ್ನು ಗಾಢವಾಗಿ ಹೊಂದಬೇಕು. ಆರೋಗ್ಯಕರ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಹುರುಪಿನಿಂದ ದೃಢವಾದ ಹೆಜ್ಜೆಗಳನ್ನು ಊರಬೇಕಾಗಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ದೊಡ್ಡ ಬಸವರಾಜ್ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ವರ್ತಮಾನದ ತಲ್ಲಣಗಳು ಕುರಿತು ಮಾತನಾಡಿದರು.

ಇತ್ತೀಚೆಗೆ ಸಮಾಜದಲ್ಲಿ ಸೌಹಾರ್ದ, ಸಹಿಷ್ಣುತೆ, ಪರಸ್ಪರ ಗೌರವದ ಮೌಲ್ಯಗಳು ಕುಸಿಯುತ್ತಿರುವುದು ಚಿಂತಾಜನಕ ಬೆಳವಣಿಗೆಯಾಗಿದೆ. ವಿಭಿನ್ನ ಧರ್ಮ, ಭಾಷೆ ಹಾಗೂ ಸಂಸ್ಕೃತಿಗಳ ನಡುವೆ ಬೆಳೆದಿದ್ದ ಒಗ್ಗಟ್ಟು ನಿಧಾನವಾಗಿ ಕುಗ್ಗುತ್ತಿದೆ.

ಸಾಮಾಜಿಕ ಜಾಲತಾಣಗಳ ದುರುಪಯೋಗ, ರಾಜಕೀಯ ಪ್ರೇರಿತ ಪ್ರಚೋದನೆಗಳು ಹಾಗೂ ಅಸಹಿಷ್ಣು ಮನೋಭಾವಗಳು ಈ ಪರಿಸ್ಥಿತಿಗೆ ಕಾರಣಗಳಾಗಿ ಪರಿಣಮಿಸುತ್ತಿವೆ. ಇದರಿಂದಾಗಿ ಸಾಮಾನ್ಯ ಜನರ ಜೀವನದಲ್ಲಿಯೂ ಅಶಾಂತಿ ಮತ್ತು ಅನಿಶ್ಚಿತತೆ ಹೆಚ್ಚುತ್ತಿದೆ ಎಂದರು.

ಸಮಾಜದಲ್ಲಿ ಶಾಂತಿ, ಸೌಹಾರ್ದ ಉಳಿಸಿಕೊಳ್ಳಲು ಸಹಿಷ್ಣುತೆ, ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳ ಪುನರುಜ್ಜೀವನ ಅಗತ್ಯವಾಗಿದೆ ಎಂದು ದೊಡ್ಡಬಸವರಾಜ್ ಅವರು ತಿಳಿಸಿದರು.

ಕಾರ್ಯಕ್ರಮಾಧಿಕಾರಿ ಕೆ. ಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್ಎಸ್ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಬಿ.ರಾಮಸ್ವಾಮಿ, ಎಂ.ಎನ್. ಪ್ರವೀಣಕುಮಾರ, ಅತಿಥಿ ಉಪನ್ಯಾಸಕ ಮಾರೆಪ್ಪ, ಯುವ ಕಲಾವಿದ ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭರತನಾಟ್ಯ ಕರಗತ ಮಾಡಿಕೊಳ್ಳುವುದೇ ಕಲೆ: ಡಾ. ಮೋಹನ್ ಆಳ್ವ
ಮಾಹೆ: ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ