ಸುಳ್ಳು ಹೇಳುವುದರಲ್ಲಿ ಬಿಜೆಪಿ ಅವರು ನಿಸ್ಸೀಮರು, ಸುಳ್ಳು ಅವ್ರ ಮನೆ ದೇವ್ರು : ಸಿದ್ದರಾಮಯ್ಯ

KannadaprabhaNewsNetwork | Updated : Apr 17 2025, 10:31 AM IST

ಸಾರಾಂಶ

ಸುಳ್ಳು ಹೇಳುವುದರಲ್ಲಿ ಬಿಜೆಪಿ ಅವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

 ಬೀದರ್‌ : ಸುಳ್ಳು ಹೇಳುವುದರಲ್ಲಿ ಬಿಜೆಪಿ ಅವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.  

ಜನಾಕ್ರೋಶ ಸಭೆ ಮಾಡುತ್ತಿರುವ ಬಿಜೆಪಿ ಅವರು ಲಜ್ಜೆಗೆಟ್ಟವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ₹2025 ಕೋಟಿ ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬೆಲೆ ಏರಿಕೆ ಆಗಿದ್ದಕ್ಕೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಾರಣ, ಹಾಗಿದ್ದರೂ ಕರ್ನಾಟಕದಲ್ಲಿ ಬೆಲೆ ಏರಿಕೆ ಆಗಿದೆ ಎಂದು ರಾಜ್ಯದಲ್ಲಿ ಜನಾಕ್ರೋಶ ಸಭೆಗಳನ್ನು ಬಿಜೆಪಿ ಅವರು ಮಾಡುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದರೆ, ಕಿಂಚಿತ್ತೂ ಜನಪರ ಕಾಳಜಿ ಇದ್ದರೆ ಈ ನಾಟಕವನ್ನು ಬಂದ್‌ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರು ಅಧಿಕಾರದಲ್ಲಿದ್ದಾಗ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿತ್ತು, ಅಂದು ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಎಷ್ಟಿತ್ತು, ಎಂಬುವುದನ್ನು ತಿಳಿದುಕೊಳ್ಳಿ. ಕಚ್ಚಾ ತೈಲ ಬೆಲೆ 118 ಡಾಲರ್‌ ಇತ್ತು. ಮೊನ್ನೆ ಮೊನ್ನೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 65 ಡಾಲರ್‌ಗೆ ಇಳಿದಿದೆ. ಪೆಟ್ರೋಲ್‌ ಬೆಲೆ ಈಗ 100ರು.ಗಳಿಗಿಂತ ಹೆಚ್ಚಾಗಿದ್ದು ಯಾರು ಕಾರಣ ಎಂದು ಜನತೆ ಅರಿತಿದ್ದಾರೆ. ಇದಕ್ಕೆಲ್ಲಾ ಕೇಂದ್ರದ ಮೋದಿ ಸರ್ಕಾರ ಕಾರಣ ಎಂದು ಆರೋಪಿಸಿದರು.ಕೇಂದ್ರದಲ್ಲಿ 2014ರ ನಮ್ಮ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಗ್ಯಾಸ್‌ ಬೆಲೆ ₹430 ಇತ್ತು. ಇಂದು ₹1000 ಆಗಿದೆ. ಇವರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಅದಾಗ್ಯೂ ಜನರ ಗಮನ ಬೇರೆಡೆ ಸೆಳೆಯಲು ಬೆಲೆ ಏರಿಕೆಯ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ ವರ್ಷ ಬಂಡವಾಳ ವೆಚ್ಚ 56000 ಕೋಟಿ ರು. ಈ ವರ್ಷ 83000 ಕೋಟಿ ರು. ಖರ್ಚು ಮಾಡಿದ್ದೇವೆ. ದೇಶದಲ್ಲಿರುವ ಎಲ್ಲ ಬಿಜೆಪಿ ಸರ್ಕಾರದ ರಾಜ್ಯಗಳಿಗಿಂತ ಹೆಚ್ಚು ಬಂಡವಾಳ ವೆಚ್ಚವನ್ನು ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಬಂಡವಾಳ ವೆಚ್ಚವನ್ನು ದಿವಾಳಿ ಆಗಿರುವ ಸರ್ಕಾರ ಮಾಡಲು ಆಗುವುದಿಲ್ಲ ಎಂಬುವದನ್ನು ಅರ್ಥ ಮಾಡಿಕೊಳ್ಳಿ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ, ಗ್ಯಾರಂಟಿ ಯೋಜನೆಗಳಿಗೆ ದುಡ್ಡಿನ ಕೊರತೆ ಇಲ್ಲವೇ ಇಲ್ಲ. ಆರ್ಥಿಕವಾಗಿ ಕರ್ನಾಟಕ ಸದೃಢವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

Share this article