ಕಂಪ್ಲಿ: ವಿಭೂತಿ, ಲಿಂಗ, ರುದ್ರಾಕ್ಷಿಗಳೆಂಬ ಮೂರು ರತ್ನಗಳನ್ನು ಧರಿಸಿ, ಸನ್ಮಾರ್ಗದತ್ತ ಸಾಗಿದರೆ ಜೀವನ ಪಾವನವಾಗುತ್ತದೆ ಎಂದು ಹಿಮವತ್ಕೇದಾರ ಭೀಮಾಶಂಕರಲಿಂಗ ಶ್ರೀ ಹೇಳಿದರು.ಸಮೀಪದ ಬುಕ್ಕಸಾಗರ ಕರಿಸಿದ್ಧೇಶ್ವರ ಮಠದಲ್ಲಿ ಲಿಂ.ಕರಿಸಿದ್ದೇಶ್ವರರ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಎಮ್ಮಿಗನೂರು ಮಹಾಂತ ಮಠದ ವಾಮದೇವ ಶಿವಾಚಾರ್ಯರು ಮಾತನಾಡಿ, ಲಿಂ.ಕರಿಸಿದ್ಧೇಶ್ವರರು ತಮ್ಮ ತಪೋಬಲದಿಂದ ಸದ್ಭಕ್ತರನ್ನು ಉದ್ಧರಿಸಿದ್ದು, ಸದಾ ಭಕ್ತರ ಒಳಿತಿಗಾಗಿ ಜೀವನ ಸವೆಸಿದ್ದಾರೆ. ಬುಕ್ಕಸಾಗರದ ಕರಿಸಿದ್ಧೇಶ್ವರ ಮಠವು ಗುರು ಸದ್ಭಕ್ತರಲ್ಲಿ ಸಾಮರಸ್ಯ ಸಾಧಿಸುವಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಜಾಗೃತಿಯನ್ನೊಂದಿದೆ. ಸಂತರು ಕ್ರಿಯಾಶುದ್ಧರಾಗುವ ಮೂಲಕ ಜಗದ ಹಿತ ಸಾಧಿಸಬೇಕಿದೆ ಎಂದರು.
ಕರಿಸಿದ್ಧೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಕರಿಸಿದ್ಧೇಶ್ವರರ ತಪಶ್ಯಕ್ತಿಯಿಂದ ಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವರ ವಾಕ್ಸಿದ್ಧಿ, ತಪಶ್ಯಕ್ತಿಯಿಂದಾಗಿ ಮಠಕ್ಕೆ ಬರುವ ಸದ್ಭಕ್ತರನ್ನು ನಾನಾ ಸಂಕಷ್ಟಗಳಿಂದ ಪಾರು ಮಾಡಿದ್ದಾರೆ ಎಂದರು.ಇದಕ್ಕು ಮುನ್ನಾ ಜಗದ್ಗುರು ಶ್ರೀಭೀಮಾಶಂಕರಲಿಂಗ ಶ್ರೀ ಅಡ್ಡಪಲ್ಲಕ್ಕಿ ಮೆರವಣಿಗೆ, ಕರಿಸಿದ್ದೇಶ್ವರರ ಪಾಠಶಾಲೆ ವಿದ್ಯಾರ್ಥಿಗಳಿಂದ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಾಮೂಹಿಕ ವಿವಾಹಗಳು ನಡೆದವು. ಧಾರ್ಮಿಕ, ಸಾಮಾಜಿಕ ಸೇವೆಗಾಗಿ ಹುಡಾದ ಕುಮಾರಸ್ವಾಮಿ ತಾತಾ, ಹೊಸಪೇಟೆಯ ಸಾಲಿ ಬಸವರಾಜಸ್ವಾಮಿಗಳಿಗೆ ಕರಿಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುರುಪಾದದೇವರ ಮಲ್ಲಿಕಾರ್ಜುನ ಶಿವಾಚಾರ್ಯರು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯರು, ಪಂಚವಣಗಿಯ ಸಿದ್ಧಲಿಂಗ ಶಿವಾಚಾರ್ಯರು, ಬಳ್ಳಾರಿಯ ಕಲ್ಯಾಣಸ್ವಾಮಿ, ಗೋವಿನಕೋವಿಯ ವಿಶ್ವರಾಧ್ಯ ಮಹಾಲಿಂಗಹಾಲಸ್ವಾಮಿ, ಬಂಗಾರಿಕ್ಯಾಂಪಿನ ಡಾ.ಸಿದ್ಧರಾಮ, ಹಂಚಿನಾಳಕ್ಯಾಂಪಿನ ಶಿವಲಿಂಗಯ್ಯತಾತ, ವೆಂಕಟಾಪುರದ ನಾಗಲಿಂಗಪ್ಪತಾತ, ಬೂದಗುಂಪದ ಸಿದ್ದೇಶ್ವರದೇವರು, ಕಾರಟಗಿಯ ವೀರಭದ್ರಶರಣ, ಹೆಬ್ಬಾಳ್ ಶಿವಪ್ರಕಾಶಶರಣ, ಗುಡದೂರಿನ ನೀಲಕಂಠತಾತ, ಎಂ.ಎಸ್.ಶಶಿಧರಶಾಸ್ತ್ರಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಎಸ್ಪಿ ಹರಿಬಾಬು, ತಹಸೀಲ್ದಾರ್ ಶೃತಿ ಮಾಳಪ್ಪಗೌಡರು, ಪ್ರಮುಖರಾದ ಶರಣಬಸಪ್ಪ ಕೋಲ್ಕಾರ, ಗೊಗ್ಗ ಚನ್ನಬಸವರಾಜ, ಐ.ಸಂಗನಬಸಪ್ಪ, ಸಾಲಿ ಸಿದ್ದಯ್ಯ, ಹೇಮಣ್ಣ, ವಿ.ಕೆ.ಹನುಮಂತಪ್ಪ, ಪಿ.ಮೂಕಯ್ಯಸ್ವಾಮಿ, ಎಚ್.ಎಂ.ಕಾಶಿನಾಥಸ್ವಾಮಿ, ಟಿ.ರಾಜೇಶ್ವರಿ, ಸಿದ್ದೇಶ್, ಎಚ್.ಎಂ.ವಿಶ್ವನಾಥ, ಎಸ್.ಡಿ.ಬಸವರಾಜ ಇದ್ದರು.