ಮನುಷ್ಯನಿಗೆ ಜೀವ, ಜೀವನ ಮುಖ್ಯ: ಎನ್.ಎಸ್. ಹೆಗಡೆ ಕರ್ಕಿ

KannadaprabhaNewsNetwork |  
Published : Jan 30, 2025, 12:32 AM IST
ಪೊಟೋ೨೯ಎಸ್.ಆರ್.ಎಸ್೬ (ನಗರದ ಟಿಆರ್‌ಸಿ ಸಭಾಂಗಣದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊನೆಗೌಡರಿಗೆ ಉಚಿತ ೧೦ ಲಕ್ಷ ರೂಪಾಯಿ ಇಂಡಿಯನ್ ಪೋಸ್ಟ್ ಆಫೀಸ್ ಗ್ರುಪ್ ಎಕ್ಸಿಡೆಂಟ್ ಇನ್ಶುರೆನ್ಸ್ ಪಾಲಿಸಿ ವಿತರಣಾ ಸಮಾರಂಭವನ್ನು ಎನ್.ಎಸ್.ಹೆಗಡೆ ಉದ್ಘಾಟಿಸಿದರು.) | Kannada Prabha

ಸಾರಾಂಶ

ಬಡವರನ್ನು, ಆರ್ಥಿಕವಾಗಿ ದುರ್ಬಲರನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ಶಿರಸಿ: ಮನುಷ್ಯನಿಗೆ ಜೀವ ಮತ್ತು ಜೀವನ ಇವೆರಡೂ ಮುಖ್ಯವಾಗಿದೆ. ಇವೆರಡರ ಮಧ್ಯದಲ್ಲಿ ಬಡವರ ಬದುಕು ಕಷ್ಟಕರವಾಗಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಶ್ರಮಜೀವಿಗಳ ಒಳಿತಿಗಾಗಿ, ಅವರ ಕುಟುಂಬದ ಹಿತವನ್ನು ಯೋಚಿಸಿ ಅನಂತಮೂರ್ತಿ ಹೆಗಡೆ ಅವರು ಕೈಗೊಂಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಸಾಮಾಜಿಕ ಮುಖಂಡ ಎನ್.ಎಸ್. ಹೆಗಡೆ ಕರ್ಕಿ ತಿಳಿಸಿದರು.ಬುಧವಾರ ನಗರದ ಟಿಆರ್‌ಸಿ ಸಭಾಂಗಣದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊನೆಗೌಡರಿಗೆ ಉಚಿತ ₹೧೦ ಲಕ್ಷ ಇಂಡಿಯನ್ ಪೋಸ್ಟ್ ಆಫೀಸ್ ಗ್ರುಪ್ ಎಕ್ಸಿಡೆಂಟ್ ಇನ್ಶುರೆನ್ಸ್ ಪಾಲಿಸಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಬಡವರನ್ನು, ಆರ್ಥಿಕವಾಗಿ ದುರ್ಬಲರನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ನಿಟ್ಟಿನಲ್ಲಿ ಅನಂತಮೂರ್ತಿ ಹೆಗಡೆ ಅವರ ಸಾಮಾಜಿಕ ಬದ್ಧತೆಯನ್ನೂ ಮೆಚ್ಚಬೇಕು. ಅವರ ಕಾರ್ಯಕ್ಕೆ ಸಮಾಜ ಸ್ಪಂದಿಸಬೇಕು. ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಅವರು ಕೊನೆಗೌಡರಿಗೆ ಒಂದು ವರ್ಷದ ವಿಮೆಯನ್ನು ಮಾಡಿಕೊಡುತ್ತಿದ್ದಾರೆ. ಆದರೆ ನಂತರದ ವರ್ಷದಲ್ಲಿ ಆಯಾ ಜನರೇ ಮುಂದುವರಿಸಿಕೊಂಡು ಹೋಗಬೇಕು ಎಂದರು.ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಯಾವ ಕೃಷಿಕನೂ ನಮ್ಮ ಮನೆಗೆ ಬಂದ ಕೆಲಸದವನ ಮರಣ ಬಯಸುವುದಿಲ್ಲ. ಅದೇ ರೀತಿ ಕೆಲಸಗಾರನೂ ತಾನು ಸಾಯಬೇಕೆಂದು ಮರ ಏರುವುದಿಲ್ಲ. ಆ ಘಟನೆ ನಡೆಯುವುದು ಆಕಸ್ಮಿಕ. ಆದರೆ ಅದರ ಪರಿಣಾಮ ಮಾತ್ರ ತೀರಾ ಕಷ್ಟ. ಕಳೆದ ವರ್ಷವೂ ನಮ್ಮ ಭಾಗದಲ್ಲಿ ಅನೇಕ ಕೊನೆಗೌಡರು ಬಿದ್ದು, ಮೃತರಾಗಿದ್ದಾರೆ. ನಂತರ ಆ ಕಟುಂಬದ ಪರಿಸ್ಥಿತಿ ಜೀವನ ನಿರ್ವಹಣೆಯಲ್ಲಿ ಕಷ್ಟವಾಗಿದ್ದು, ನಮಗೆ ಕಾಣುತ್ತದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಜಿಲ್ಲೆಯ ಅನೇಕ ಕಡೆ ನನ್ನ ಟ್ರಸ್ಟ್ ವತಿಯಿಂದ ಈ ಯೋಜನೆಯ ಮೂಲಕ ಅನೇಕರಿಗೆ ಅನುಕೂಲ ಮಾಡಿದ್ದಾಗಿತ್ತು. ಅದರಿಂದ ಅನೇಕರಿಗೆ ವಿವಿಧ ರೀತಿಯಲ್ಲಿ ಅನುಕೂಲಗಳಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ, ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಮಲೆನಾಡು ಭಾಗದಲ್ಲಿ ಕೊನೆ ಕೊಯ್ಯುವ ಕೊನೆಗೌಡ ಬಿದ್ದು ಸಾವಿಗೀಡಾಗಿರುವ ಘಟನೆ ಈ ಹಿಂದಿನಿಂದಲೂ ನಡೆಯುತ್ತಿದೆ. ಇದು ಕೊನೆಗೊಳ್ಳಬೇಕು ಮತ್ತು ಇದರಿಂದ ಕೊನೆಗೌಡರಿಗೆ ಮತ್ತು ತೋಟದ ಯಜಮಾನ ಇಬ್ಬರಿಗೂ ಕಷ್ಟ. ಅನಂತಮೂರ್ತಿ ಹೆಗಡೆ ಅವರು ಯೋಜಿಸಿರುವ ಈ ಪಾಲಿಸಿಯಿಂದ ಅನೇಕ ಶ್ರಮಿಕ ವರ್ಗಕ್ಕೆ ಅನುಕೂಲಕರವಾಗಲಿ ಎಂದರು.

ಭಾರತೀಯ ಅಂಚೆ ಇಲಾಖೆಯ ವಿಭಾಗದ ಅಧೀಕ್ಷಕ ಹೂವಪ್ಪ ಮಾತನಾಡಿ, ಭಾರತೀಯ ಅಂಚೆ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಬಡವರಿಗೆ ಅನುಕೂಲಕರವಾಗುವ ಅನೇಕ ಯೋಜನೆಗಳು ಈಗೀಗ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಸಮಾಜ ಕಾರ್ಯಕ್ಕಾಗಿ ಅನಂತಮೂರ್ತಿ ಹೆಗಡೆ ಅವರ ಕೆಲಸ ಸಂತಸ ತಂದಿದೆ ಎಂದರು.ಕೃಷಿಕ ವಿ.ಎಂ. ಹೆಗಡೆ ಕಬ್ಬೆ ಮಾತನಾಡಿದರು. ಹಿರಿಯ ಸಹಕಾರಿ ಎಸ್.ಎನ್. ಹೆಗಡೆ ದೊಡ್ನಳ್ಳಿ, ರಮೇಶ ನಾಯ್ಕ ಕುಪ್ಪಳ್ಳಿ, ಜಿಪಂ ಮಾಜಿ ಸದಸ್ಯೆ ಉಷಾ ಹೆಗಡೆ, ತಿಮ್ಮಪ್ಪ ಮಡಿವಾಳ ಸಿದ್ದಾಪುರ, ಪ್ರಸಾದ ಹೆಗಡೆ ಯಲ್ಲಾಪುರ ಮತ್ತಿತರರು ಇದ್ದರು. ಟಿಆರ್‌ಸಿಯ ಜಿ.ಜಿ. ಹೆಗಡೆ ಕುರುವಣಿಗೆ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ೩೦೦ಕ್ಕೂ ಅಧಿಕ ಕೊನೆಗೌಡರು ಈ ಉಚಿತ ವಿಮಾ ಸೌಲಭ್ಯದ ಪ್ರಯೋಜನ ಪಡೆದುಕೊಂಡರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ