ಕಲಾ ಸೇವೆಯಿಂದ ಬದುಕು ಸಾರ್ಥಕ: ಲಕ್ಷ್ಮೀನಾರಾಯಣ ಆಸ್ರಣ್ಣ

KannadaprabhaNewsNetwork | Published : Apr 5, 2025 12:48 AM

ಸಾರಾಂಶ

ಭರತಾಂಜಲಿ ಕೊಟ್ಟಾರ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಕಿಂಕಿಣಿ ತ್ರಿಂಶತ್’ 30 ತುಂಬಿದ ಹರ್ಷ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಲಿಯುಗದಲ್ಲಿ ಕಲಾ ಸೇವೆಯು ಸಹ ದೇವತಾ ಸೇವೆಯಾಗಿದ್ದು ಇದರಿಂದ ಬದುಕು ಸಾರ್ಥಕವಾಗುವುದು ಎಂದು ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಅವರು ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ನಗರದ ಪುರಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ‘ಕಿಂಕಿಣಿ ತ್ರಿಂಶತ್’ 30 ತುಂಬಿದ ಹರ್ಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗುರು, ನಾಟ್ಯಾಚಾರ್ಯ ವಿದ್ವಾನ್‌ ಉಳ್ಳಾಲ ಮೋಹನ ಕುಮಾರ್‌ ಮಾತನಾಡಿ, ಪಂದನಲ್ಲೂರು ಶೈಲಿಯ ಶಾಸ್ತ್ರೀಯ ಚೌಕಟ್ಟಿನಲ್ಲಿ ಕಲಾ ಶಿಕ್ಷಣವನ್ನು ಶ್ರದ್ಧೆಯಿಂದ ಕಳೆದ ಮೂರು ದಶಕಗಳಿಂದ ನೀಡುತ್ತಾ ಬಂದಿರುವ ಪ್ರತಿಮಾ ದಂಪತಿಗಳ ಕಾರ್ಯ ಮೆಚ್ಚುವಂತದ್ದು ಎಂದರು.

ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್, ಉದ್ಯಮಿಗಳಾದ ಪುಷ್ಪರಾಜ್ ಜೈನ್, ಜಿತೇಂದ್ರ ಕೊಟ್ಟಾರಿ, ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕೇಂದ್ರೀಯ ಅಧ್ಯಕ್ಷ ಎಚ್‌. ಸತೀಶ್ ಹಂದೆ ಮುಖ್ಯ ಅತಿಥಿಗಳಾಗಿದ್ದರು.

ಭರತಾಂಜಲಿಯ ಹಿರಿಯ ಶಿಷ್ಯ ಡಾ. ಶ್ರೇಯಸ್ ಅವರು ಸಂಸ್ಥೆಯೊಂದಿಗೆ ಇರುವ ತನ್ನ ಅವಿನಾಭಾವ ಸಂಬಂಧಗಳನ್ನು ಹಂಚಿಕೊಂಡರು. ಇದೆ ಸಮಯದಲ್ಲಿ ಸಂಸ್ಥೆಯ ವಿದ್ಯಾರ್ಥಿನಿ, 2024-25 ರ ಸಾಲಿನ ಎನ್‌ಸಿಸಿ ನೆವೆಲ್‌ ವಿಂಗ್‌ನಲ್ಲಿ ದೇಶದ ಅತ್ಯುತ್ತಮ ಐದು ಕೆಡೆಟ್‌ಗಳಲ್ಲಿ ಒಬ್ಬಳಾಗಿ ಆಯ್ಕೆಯಾದ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಲಿಷಾ ಡಿ.ಎಸ್. ಇವರನ್ನು ಸನ್ಮಾನಿಸಲಾಯಿತು.ಸಂಸ್ಥೆಯ ನಿರ್ದೇಶಕ ಶ್ರೀಧರ ಹೊಳ್ಳ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಡಾ. ವಿದ್ಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ನೃತ್ಯ ಗುರು ಪ್ರತಿಮಾ ಶ್ರೀಧರ್ ವಂದಿಸಿದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ವಿದುಷಿ ಅನ್ನಪೂರ್ಣ ರಿತೇಶ್, ವಿದುಷಿ ಪ್ರಕ್ಶಿಲಾ ಜೈನ್, ವಿದುಷಿ ಶ್ರಾವ್ಯ ಅಮೊಘ್ ಶೆಟ್ಟಿ, ವಿದುಷಿ ಮಧುರಾ ಕಾರಂತ್, ವಿದುಷಿ ಮಾನಸ ಕಾರಂತ್, ವಿದುಷಿ ಮಾನಸ ಕುಲಾಲ್, ವಿದುಷಿ ವಂದನಾ ರಾಣಿ ಮತ್ತಿತರರು ಭರತನಾಟ್ಯ ಪ್ರದರ್ಶನ ನೀಡಿದರು.

Share this article