ಸವಣೂರು: ಪ್ರತಿಯೊಬ್ಬ ಮನುಷ್ಯ ನಿತ್ಯ ಕಾಯಕದೊಂದಿಗೆ ಭಗವಂತನ ಆರಾಧನೆ ಕೈಗೊಂಡಲ್ಲಿ ಮೈಲಾರಲಿಂಗೇಶ್ವರನ ಕಾರುಣ್ಯಮೃತ ಪ್ರಾಪ್ತಿಯಾಗಿ ಭವಿಷ್ಯದ ಬದುಕು ಸಾರ್ಥಕಗೊಳ್ಳಲಿದೆ ಎಂದು ಬಂಕಾಪುರ ಕೆಂಡದಮಠದ ಸಿದ್ದಯ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮಂತ್ರವಾಡಿ ಗ್ರಾಮದಲ್ಲಿ ಭಾರತ ಹುಣ್ಣಿಮೆ ಹಾಗೂ ಸರಪಳಿ ಪವಾಡ ಕಾರ್ಯಕ್ರಮದ ಅಂಗವಾಗಿ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನಾವು ಧರ್ಮವನ್ನು ಕಾಯ್ದರೆ ನಮ್ಮನ್ನು ಧರ್ಮ ಕಾಯುತ್ತದೆ. ಪ್ರತಿಯೊಬ್ಬ ವ್ಯಕ್ತಿ ಭಕ್ತಿ ಭಾವದಿಂದ ದೇವರ ಕಾರ್ಯದೊಂದಿಗೆ ಇನ್ನೊಬ್ಬರ ನೋವು ನಲಿವಿನಲ್ಲಿ ಭಾಗಿಯಾದಲ್ಲಿ ಸಾವಿನ ನಂತರವು ಚಿರವಾಗಿರಲು ಸಾಧ್ಯವಾಗಲಿದೆ ಎಂಬುದಕ್ಕೆ ದಿ. ಬಸವರಾಜ ಕಳಲಕೊಂಡ ಗೊರವಜ್ಜನವರು ಸಾಕ್ಷಿಯಾಗಿದ್ದಾರೆ. ಅವರ ಆದರ್ಶದಲ್ಲಿಯೆ ಇಂದಿನ ಯುವ ಜನರು ಧಾರ್ಮಿಕ ಕಾರ್ಯಗಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಮಾತನಾಡಿ, ಜಾತಿ, ಮತ, ಪಂಥಗಳನ್ನು ಲೆಕ್ಕಿಸದೆ ಸರ್ವ ಧರ್ಮಿಯರು ಸೇರಿಕೊಂಡು ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯವನ್ನು ಕೈಗೊಳ್ಳುವಂತ ಧರ್ಮಕ್ಷೇತ್ರ ಯಾವುದಾದರೂ ಇದ್ದರೇ ಅದು ಮಂತ್ರವಾಡಿ ಗ್ರಾಮ. ಗ್ರಾಮದ ಮೈಲಾರಲಿಂಗೇಶ್ವರ ದೇವರ ಶಿಭಾರದ ಅಭಿವೃದ್ಧಿಗೆ 10 ಲಕ್ಷ ಅನುದಾನವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುರೇಶ ಹೊನ್ನಿಕೊಪ್ಪ, ಸುಭಾಸ ಮಜ್ಜಗಿ, ರವಿ ಕರಿಗಾರ, ನವೀನ ಬಂಡಿವಡ್ಡರ, ಗ್ರಾಮಸ್ಥರಾದ ರಾಮಣ್ಣ ನೆಲ್ಲೂರ, ದೂಳಪ್ಪ ಕುರಿಗಾರ, ಹನಮಂತಪ್ಪ ಗುರನಳ್ಳಿ, ಶಿದ್ದಪ್ಪ ಕಳಲಕೊಂಡ, ಯಲ್ಲಪ್ಪ ಬಡಿಗೇರ, ನಿಂಗಪ್ಪ ಯಲವಿಗಿ, ಡಾ.ಹುಸೇನಸಾಬ ನದಾಫ, ಅಶೋಕ ನೆಲ್ಲೂರ, ಗೋವಿಂದಪ್ಪ ಬಡಿಗೇರ, ನೀಲಪ್ಪ ಕೋಳಿವಾಡ, ನಾಗಪ್ಪ ಬಾರ್ಕಿ, ತಿಪ್ಪಣ್ಣ ಪೂಜಾರ, ಮಹೇಶ ಅಪ್ಪಣ್ಣವರ, ರಮೇಶ ಹರಿಜನ, ನೀಲಪ್ಪ ಹುಣಿಸಿಮರದ, ನಿಂಗಪ್ಪ ನೆಲ್ಲೂರ, ಸಂಜೀವ ನೆಲ್ಲೂರ, ರಮಜಾನಸಾಬ ಬಡ್ನಿ, ಸೇರಿದಂತೆ ಭಕ್ತರು ಇದ್ದರು.