ಶ್ರೀಭೀಮಾಂಬಿಕಾದೇವಿ ಶಿವಾನುಭವ ಸಮಿತಿಯಿಂದ ನಡೆದ ೩೬೭ನೇ ಶಿವಾನುಭವ ಗೋಷ್ಠಿ
ಕನ್ನಡಪ್ರಭ ವಾರ್ತೆ ಯಲಬುರ್ಗಾಪ್ರತಿಯೊಬ್ಬರು ಶಿವಶರಣರ ಚಿಂತನೆಯಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಶಂಕ್ರಪ್ಪ ಬಡಿಗೇರ ಹೇಳಿದರು.
ತಾಲೂಕಿನ ದಮ್ಮೂರು ಗ್ರಾಮದಲ್ಲಿ ಶನಿವಾರ ರಾತ್ರಿ ಶ್ರೀಭೀಮಾಂಬಿಕಾದೇವಿ ಶಿವಾನುಭವ ಸಮಿತಿಯಿಂದ ಹಮ್ಮಿಕೊಂಡಿದ್ದ ೩೬೭ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವುಗಳು ಧರ್ಮದ ಹಾದಿಯಲ್ಲಿ ನಡೆದಾಗ ಸನ್ಮಾರ್ಗ ದೊರೆಯುತ್ತದೆ ಎಂದರು.ಮಾನವರಾಗಿ ಹುಟ್ಟಿದ ಮೇಲೆ ಸಮಾಜದಲ್ಲಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಧರ್ಮದ ಮಾರ್ಗದಿಂದ ನಡೆಯಬೇಕು. ಇದರಿಂದ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಇಂತಹ ಶಿವಾನುಭವ ಗೋಷ್ಠಿಗಳು ಹೆಚ್ಚು ನಡೆಯುವುದರಿಂದ ಜನರಲ್ಲಿ ಭಕ್ತಿ ಭಾವ, ಆಧ್ಯಾತ್ಮಿಕ ಚಿಂತನೆ ಬೆಳೆಸಬಹುದು ಎಂದರು.
ನಿವೃತ್ತ ನೌಕರ ಮಹಾದೇವಪ್ಪ ಕಮ್ಮಾರ ಹಾಗೂ ಮಹಂತೇಶ ಛಲವಾದಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಪುರಾಣ ಪ್ರವಚನಗಳು, ಶಿವಾನುಭವ ಗೋಷ್ಠಿ ಕಡಿಮೆ ಆಗುತ್ತಿದೆ. ಜನರಲ್ಲಿ ಇಚ್ಛಾಶಕ್ತಿ ಕೊರತೆಯಾಗಿದೆ. ಆದರೂ ಶ್ರೀಮಠದಲ್ಲಿ ಪ್ರತಿ ಅಮಾವಾಸ್ಯೆಗೊಮ್ಮೆ ಗೋಷ್ಠಿ ಆಯೋಜನೆ ಮೂಲಕ ಉತ್ತಮ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದರು.ಶಿವಾನುಭವ ಸಮಿತಿಯ ಅಧ್ಯಕ್ಷ ಶರಣಬಸಪ್ಪ ದಾನಕೈ ಮಾತನಾಡಿದರು. ಹನುಮಂತಪ್ಪ ಅಜ್ಜನವರು, ವೇದಮೂರ್ತಿ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ಬಳಿಕ ಶ್ರೀಮಠದಿಂದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮದ ಶ್ರೀಕಲ್ಲಿನಾಥೇಶ್ವರ ಟ್ರಸ್ಟ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.ಅತಿಥಿಗಳಾಗಿ ಮಲ್ಲಪ್ಪ ಮಂಡಾಲಿ, ಸಂಗಯ್ಯ ಶಾಸ್ತ್ರೀಮಠ, ಭೀಮಣ್ಣ ಚಿಕ್ಕಗೌಡ, ದುರಗೇಶ ಹರಿಜನ, ಹೇಮಣ್ಣ ನಾಯಕ, ದೇವಪ್ಪ ಗುರಿಕಾರ, ಹೇಮಣ್ಣ ನಾಯಕ, ಇಬ್ರಾಹಿಂಸಾಬ ವಾಲಿಕಾರ, ಯಮನೂರಪ್ಪ ಹಳ್ಳಿಕೇರಿ, ಕಳಕಪ್ಪ ಹಡದಪ, ಅಂದಾನಯ್ಯ ಹಿರೇಮಠ, ನೀಲಕಂಠಪ್ಪ, ಗುರುಮೂರ್ತಿ ಬಡಿಗೇರ, ನೀಲಪ್ಪ ಖಾನಾವಳಿ ಹಾಗೂ ಸಮಿತಿಯ ಸದಸ್ಯರು ಮತ್ತಿತರರಿದ್ದರು.