ಕನ್ನಡಪ್ರಭ ವಾರ್ತೆ ಬಂಟ್ವಾಳ
ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಳಪಟ್ಟ ಮಂಗಳೂರು – ಬೆಂಗಳೂರು ರಸ್ತೆಯಲ್ಲಿ ಬ್ರಹ್ಮರಕೂಟ್ಲು ಎಂಬಲ್ಲಿರುವ ಟೋಲ್ ಸಂಗ್ರಹ ಕೇಂದ್ರದ ವಿರುದ್ಧ ಎಂ.ತುಂಗಪ್ಪ ಬಂಗೇರ ನೇತ್ರತ್ವದಲ್ಲಿ ಹೋರಾಟಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಸಭೆ ಗುರುವಾರ ಬಿಸಿರೋಡಿನಲ್ಲಿ ನಡೆಯಿತು.ಈ ಸಂದರ್ಭ ಹೋರಾಟಕ್ಕೆ ಸಂಬಂಧಿಸಿದಂತೆ ಸಮಾನಮನಸ್ಕರ ಸಮಿತಿಯನ್ನು ರಚನೆ ಮಾಡಲಾಗಿದ್ದು, ಹೋರಾಟದ ಸ್ವರೂಪವನ್ನು ತಿಳಿಸಿದರು.ಅವೈಜ್ಞಾನಿಕ ಟೋಲ್ ಕೇಂದ್ರದ ವಿರುದ್ಧ ಟೊಂಕ ಕಟ್ಟಿ ನಿಂತ ಸಮಾನಮನಸ್ಕರ ತಂಡ “ಟೋಲ್ ಹಠಾವೋ” ಎಂಬ ಘೋಷ ವಾಕ್ಯದಲ್ಲಿ ಹೋರಾಟಕ್ಕೆ ಮುಂದಡಿ ಇಟ್ಟಿದೆ.ಇಂದು ಬಿಸಿರೋಡಿನಲ್ಲಿ ನಡೆದ ಸಮಾನಮನಸ್ಕರ ಸಮಾಲೋಚನಾ ಸಭೆಯಲ್ಲಿ ಇವರ ಒಂದಷ್ಟು ಬೇಡಿಕೆಗಳನ್ನು ಅವರ ಮುಂದೆ ಇಡುವ ಬಗ್ಗೆ ಪ್ರಸ್ತಾಪವಾಗಿದ್ದು, ಸಂಧಾನಕ್ಕೆ ಸೈ ಎನ್ನದಿದ್ದಲ್ಲಿ ಸಂಗ್ರಾಮಕ್ಕೆ ಮುನ್ನುಡಿಯಾಗಬೇಕು ಎಂದು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವೈಜ್ಞಾನಿಕವಾಗಿರುವ ಈ ಟೋಲ್ ನಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಸ್ಥಳೀಯ ನೋಂದಣಿ ಹೊಂದಿದ ಅಂದರೆ ka- 19 ಮತ್ತು ka- 70 ನೊಂದಾಯಿತ ವಾಹನಗಳಿಂದ ಸುಂಕ ವಸೂಲಿ ಮಾಡಬಾರದು, ಸಿಬ್ಬಂದಿಗಳ ಅನುಚಿತ ವರ್ತನೆಗೆ ಕಡಿವಾಣ ಹಾಕಬೇಕು ಎಂಬುದರ ಬಗ್ಗೆ ಹೋರಾಟ ಸಮಿತಿಯವರು ಸಭೆಯಲ್ಲಿ ನಿರ್ಣಯ ಮಾಡಿದ್ದಾರೆ.ಇದರ ಜೊತೆಗೆ ಇಲ್ಲಿನ ಶಾಸಕರು, ಸಂಸದರನ್ನು ಭೇಟಿ ಮಾಡಿ ಅವರ ಮುಖೇನ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಂದಷ್ಟು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮಾಡಲಾಗುತ್ತದೆ. ಮನವಿಯನ್ನು ಸ್ವೀಕರಿಸಿ ಬೇಡಿಕೆಗಳನ್ನು ಪೂರೈಸಿದರೆ ಹೋರಾಟವನ್ನು ನಿಲ್ಲಿಸುತ್ತೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಟೋಲ್ ಕೇಂದ್ರವನ್ನು ನಿಲ್ಲಿಸುವ ತನಕ ಉಗ್ರ ರೂಪದಲ್ಲಿ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ಸಮಾನಮನಸ್ಕರ ತಂಡ ನೀಡಿದೆ.ಮಧುಕರ ಬಂಗೇರ ರಾಯಿ, ಕರುಣೇಂದ್ರ ಕೊಂಬ್ರಬೈಲ್, ಟಿ.ಹರೀಂದ್ರ ಪೈ, ಶಂಕರ ಶೆಟ್ಟಿ ಬೆದ್ರಮಾರ್, ಯಶೋಧರ ಶೆಟ್ಟಿ ದಂಡೆ, ಧನಂಜಯ ಶೆಟ್ಟಿ ಸರಪಾಡಿ, ಶಾಂತಪ್ಪ ಪೂಜಾರಿ ಹಟದಡ್ಕ, ಹರೀಶ್ ಶೆಟ್ಟಿ ನಯನಾಡು, ಜಿನೇಂದ್ರ ಜೈನ್ ವಗ್ಗ, ಪುಷ್ಪಾನಂದ ಮೂರ್ಜೆ, ಶ್ರೀನಿವಾಸ ಪೂಜಾರಿ ಸೇವಾ, ಗಿರೀಶ್ ಸಾಲ್ಯಾನ್ ಹೆಗ್ಡೆ ಬೆಟ್ಟು ಗುತ್ತು, ಕಿಶೋರ್ ಹಟದಡ್ಕ, ದಯಾನಂದ ರಾಯಿ ಉಪಸ್ಥಿತರಿದ್ದರು. ಪ್ರಭಾಕರ ಪಿ.ಎಂ. ಸ್ವಾಗತಿಸಿ, ವಂದಿಸಿದರು