ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಸಮಾನ ಮನಸ್ಕ ಬಳಗದವರು ಪಕ್ಷಿ ಸಂಕುಲಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಬಂಡೇ ರಂಗನಾಥ ಬೆಟ್ಟದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಿ, ಅವುಗಳ ರಕ್ಷಣೆಗೆ ಮುಂದಾಗಿರುವುದು ಅವರಲ್ಲಿನ ಮನುಷ್ಯತ್ವವನ್ನು ತೋರಿಸುತ್ತದೆ ಎಂದು ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ ಹೇಳಿದರು.
ಪರಿಸರವನ್ನು ಉಳಿಸುವುದೆಂದರೆ ನಮ್ಮನ್ನು ನಾವು ಉಳಿಸಿಕೊಂಡಂತೆ. ಮನುಷ್ಯನಿಗೂ ನಿಸರ್ಗಕ್ಕೂ ಅವಿನಾಭಾವ ಸಂಬಂಧವಿದೆ. ಜೀವ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಸಮುದಾಯ ನಿರಂತರವಾಗಿ ತೊಡಗಬೇಕಿದೆ. ಪರಿಸರವನ್ನು ನಾಶಪಡಿಸುವುದು ನಮ್ಮನ್ನು ನಾವು ನಾಶಪಡಿಸಿಕೊಂಡಂತೆ. ಪರಿಸರ ಉಳಿವಿಗಾಗಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಪೂರಕ ಶಿಕ್ಷಣ ನೀಡಬೇಕು ಎಂದರು.
ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ ಮಾತನಾಡಿ, ಸಸಿಗಳ ರಕ್ಷಣೆ ಮಾಡಲು ಸುತ್ತಲೂ ತಂತಿಬೇಲಿ ಹಾಕಿ ರಕ್ಷಿಸಲು ₹೧೧ಸಾವಿರ ವೈಯಕ್ತಿಕ ಧನ ಸಹಾಯ ನೀಡಲಾಗುವುದು. ಪರಿಸರವನ್ನು ಉಳಿಸದಿದ್ದರೆ ಶುದ್ಧ ನೀರಿನಂತೆ ಶುದ್ಧ ಗಾಳಿಯನ್ನು ಖರೀದಿಸುವ ಸ್ಥಿತಿ ತಲುಪುತ್ತದೆ. ಸಮಾನ ಮನಸ್ಕ ಬಳಗದವರು ನಿರಂತರವಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಲಿ ಎಂದರು.ಎಸ್ಕಾಂ ಎಇಇ ಸಂತೋಷ್ ಆನೇಕಲ್ ಮಾತನಾಡಿ, ನೆಟ್ಟ ಸಸಿಗಳನ್ನು ನಿತ್ಯ ನೀರುಣಿಸಿ ನಿರ್ವಹಣೆ ಮಾಡುವವರಿಗೆ 25 ತಿಂಗಳುಗಳ ಕಾಲ ಪ್ರತಿ ತಿಂಗಳು ಸಾವಿರ ರುಪಾಯಿ ಗೌರವಧನ ನೀಡಲಾಗುವುದು ಎಂದರು.
ವಿಎಸ್ಎಸ್ಎನ್ ಅಧ್ಯಕ್ಷ ಸುರೇಶ ಯಳಕಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು. ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಸುದೀಪ್ ಉಂಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಗಿರೀಶ್ ಗೌರಜ್ಜನವರ, ತಾಪಂ ಮಾಜಿ ಸದಸ್ಯ ಪಿ. ಕೊಟ್ರೇಶ, ಅಕ್ಕಿ ಬಸವರಾಜ, ಗೊಂಡಬಾಳ ಬಸವರಾಜ, ಅಂಬಿಗರ ನಿಂಗಪ್ಪ, ರಾಮು ಕುರುಬರ, ರೆಡ್ಡಿ ಮಂಜುನಾಥ ಪಾಟೀಲ್, ಪಟ್ಟಣಶೆಟ್ಟಿ ಸುರೇಶ, ಯು. ಕೊಟ್ರೇಶ, ನಿಜಲಿಂಗಪ್ಪ, ದಾಸರ ಗಿರೀಶ, ರಾಜಶೇಖರ ರೆಡ್ಡಿ, ರಂಗನಾಥ, ಬಾಚಿನಹಳ್ಳಿ ಬಸವರಾಜ, ಗಿಡ್ಡಜ್ಜ, ಪರಶುರಾಮ, ಎಚ್.ಬಿ.ಟಿ. ಬಸವರಾಜ, ಸಣ್ಣಿಂಗಪ್ಪ, ಯಲ್ಲಪ್ಪಗೌಡ ಪೂಜಾರ್, ತೆಲುಗೋಳಿ ಪರಮೇಶ, ಪ್ರಭಾಕರ, ನಾಗೇಂದ್ರಪ್ಪ ಸೇರಿದಂತೆ ಹಲವರಿದ್ದರು. ಬಳಗದ ಟಿ. ರಾಮಪ್ಪ ನಿರ್ವಹಿಸಿದರು.