ಕೇಂದ್ರ ಸಂಪುಟದಲ್ಲಿ ಲಿಂಗಾಯತರು, ಅಹಿಂದಗೆ ಅನ್ಯಾಯ: ಮಾಜಿ ಸಚಿವ ಎಚ್.ಆಂಜನೇಯ

KannadaprabhaNewsNetwork |  
Published : Jun 11, 2024, 01:34 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ವೀರಶೈವ ಲಿಂಗಾಯತ ಸಮುದಾಯ ಜನಜಾಗೃತಿಗೆ ಮುಂದಾಗಬೇಕು. ಈ ಹೋರಾಟಕ್ಕೆ ಅಹಿಂದ ವರ್ಗ ಬೆಂಬಲವಾಗಿ ನಿಲ್ಲಬೇಕು ಎಂದು ಆಂಜನೇಯ ಆಗ್ರಹಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಲಿಂಗಾಯತರು, ಅಹಿಂದ ವರ್ಗಕ್ಕೆ ಅವಕಾಶಗಳೇ ಇಲ್ಲದಂತಾಗಿದೆ. ಬಿಜೆಪಿ ಮನಸ್ಥಿತಿ ಏನು ಎಂಬುದು ಬಹಿರಂಗಗೊಂಡಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ದೂರಿದ್ದಾರೆ. ಇಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲಿಂಗಾಯತರು ಹಾಗೂ ಅಹಿಂದ ಸಮುದಾಯದ ಜನರು ಮತ ಹಾಕಲು ಅಷ್ಟೇ ಸೀಮಿತ, ಅಧಿಕಾರಕ್ಕೆ ಅಲ್ಲ ಎಂಬುದು ಸಾಬೀತು ಆಗಿದೆ ಎಂದಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದ ಮೇಲೆ ರಾಜ್ಯದಲ್ಲಿ ಬಿಜೆಪಿ ಉಸಿರಾಡುತ್ತಿದೆ. ಈ ಸಮುದಾಯದ ಸಂಸದರಿಗೆ ಕ್ಯಾಬಿನೆಟ್ ದರ್ಜೆ ಖಾತೆ ನೀಡದೇ, ಕವಡೆ ಕಾಸು ಕಿಮ್ಮತ್ತು ಇಲ್ಲದ ರಾಜ್ಯ ದರ್ಜೆ ಮಂತ್ರಿ ಸ್ಥಾನ ನೀಡುವ ಮೂಲಕ ಇಡೀ ಲಿಂಗಾಯತ ವರ್ಗವನ್ನೇ ಅವಮಾನಕಾರವಾಗಿ ನಡೆಸಿಕೊಂಡಿದೆ. ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ನೆರಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದ ಬಿಜೆಪಿ ಈಗ ಅದಕ್ಕಿಂತೂ ಹೆಚ್ಚು ಅಪಮಾನ ಮಾಡುವ ರೀತಿ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ನಡೆದುಕೊಂಡಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಕ್ಕೆ ಚುನಾವಣೆ ಸಂದರ್ಭದಲ್ಲಿ ಅಧಿಕಾರದ ಆಸೆ ತೋರಿಸಿ ಮತ ಪಡೆದು ಗದ್ದುಗೆ ಏರಿದ ಬಳಿಕ ಅತ್ಯಂತ ನಿಕೃಷ್ಟವಾಗಿ ಈ ಸಮುದಾಯಗಳನ್ನು ಬಿಜೆಪಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಸಂಪುಟದಲ್ಲಿ ಆಗಿರುವ ಅನ್ಯಾಯವೇ ಸ್ಪಷ್ಟ ಉದಾಹರಣೆ ಎಂದಿದ್ದಾರೆ.

ರಾಜ್ಯದಲ್ಲಿ ಮಾದಿಗ, ಭೋವಿ, ನಾಯಕ ಹಾಗೂ ಒಬಿಸಿ ವರ್ಗದ ಅನೇಕರು ಎನ್‌ಡಿಎ ಒಕ್ಕೂಟದಡಿ ಗೆದ್ದಿದ್ದಾರೆ. ಆದರೆ, ಇವರ್ಯಾರಿಗೂ ಮಂತ್ರಿ ಸ್ಥಾನ ನೀಡದೇ ನೀವುಗಳು ನಮ್ಮ ಕಾಲಾಳುಗಳು. ಮತ ಹಾಕಲಷ್ಟೇ ನೀವು ನಮಗೆ ಬೇಕು, ಅಧಿಕಾರ ಬಂದ ಬಳಿಕ ನೀವು ಬೇಕಿಲ್ಲ ಎಂಬುದನ್ನು ಬಿಜೆಪಿ ಸ್ಪಷ್ಟವಾಗಿ ತನ್ನ ವರ್ತನೆ ಮೂಲಕ ತೋರ್ಪಡಿಸಿದೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮುದಾಯಕ್ಕೆ ಒಂದು ಟಿಕೆಟ್ ನೀಡಲಿಲ್ಲ. ಇದನ್ನು ಪ್ರಶ್ನಿಸಿದ ಪಕ್ಷದ ಕಟ್ಟಾಳು ಕೆ.ಎಸ್.ಈಶ್ವರಪ್ಪರನ್ನೇ ಉಚ್ಚಾಟಿಸಿ, ಹಿಂದುಳಿದ ಹಿರಿಯಣ್ಣನ ಸ್ಥಾನದಲ್ಲಿರುವ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದೆ. ಜೊತೆಗೆ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ರಾಜಕಾರಣ ಮಾಡುವ ವ್ಯಕ್ತಿಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ತಾನು ಲಿಂಗಾಯತ ವರ್ಗದ ವಿರೋಧಿ ಎಂಬುದನ್ನು ಸಚಿವ ಸಂಪುಟ ರಚನೆ ವೇಳೆ ಸ್ಪಷ್ಟವಾಗಿ ಬಿಜೆಪಿ ಹೇಳಿದೆ ಎಂದಿದ್ದಾರೆ.

ವೀರಶೈವ ಲಿಂಗಾಯತ ಹಾಗೂ ಅಹಿಂದ ವರ್ಗ ಈಗಲೇ ಸಿಡಿದೇಳಬೇಕು. ರಾಜಕೀಯ ಹಕ್ಕು ಆಗಿರುವ ಕ್ಯಾಬಿನೆಟ್ ದರ್ಜೆ ಖಾತೆ ನೀಡುವಂತೆ ಒತ್ತಡ ತರಬೇಕು. ಇಲ್ಲದಿದ್ದರೇ ಜಿಲ್ಲಾ, ತಾಲೂಕು ಪಂಚಾಯಿತಿ, ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಧೂಳಿಪಟ ಮಾಡಲು ಸಂಕಲ್ಪ ಮಾಡಬೇಕು. ನಮ್ಮನ್ನು ಮತ ಬ್ಯಾಂಕ್ ಮಾಡಿಕೊಂಡು, ಅಧಿಕಾರದ ಬಾಗಿಲಿನಿಂದ ಹೊರದಬ್ಬುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ವೀರಶೈವ ಲಿಂಗಾಯತ ಸಮುದಾಯ ಜನಜಾಗೃತಿಗೆ ಮುಂದಾಗಬೇಕು. ಈ ಹೋರಾಟಕ್ಕೆ ಅಹಿಂದ ವರ್ಗ ಬೆಂಬಲವಾಗಿ ನಿಲ್ಲಬೇಕು ಎಂದು ಆಂಜನೇಯ ಆಗ್ರಹಿಸಿದ್ದಾರೆ.

ಮಧ್ಯಕರ್ನಾಟಕದ ಬಯಲು ಸೀಮೆ ಪ್ರದೇಶಕ್ಕೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅಸಹಕಾರ ತೋರಿಸುವ ಮೂಲಕ ತೀವ್ರ ಅನ್ಯಾಯ ಮಾಡಿದೆ. ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದ ₹5300 ಕೋಟಿ ಹಣದಲ್ಲಿ ಒಂದು ರುಪಾಯಿ ಬಿಡುಗಡೆ ಮಾಡದೇ ಅನ್ಯಾಯ ಮಾಡಲಾಯಿತು. ಬಿಜೆಪಿಯ 25 ಸಂಸದರು ಖಂಡಿಸದೆ ಮೌನವಹಿಸಿ ತಮ್ಮನ್ನು ಗೆಲ್ಲಿಸಿದ ಕನ್ನಡಿಗರಿಗೆ ಅನ್ಯಾಯ ಮಾಡಿದ್ದರು. ಈಗಲೂ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದರೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ರಾಜ್ಯದ ಸಂಸದರಿಗೆ ಉತ್ತಮ ಖಾತೆ ನೀಡಿ ಕರುನಾಡನ್ನು ಗೌರವಿಸಿತ್ತು. ಆದರೆ, ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಸಿ.ಕೆ.ಜಾಫರ್ ಷರೀಫ್‍ಗೆ ರೈಲ್ವೆ, ಎಸ್.ಎಂ.ಕೃಷ್ಣ ಅವರಿಗೆ ವಿದೇಶಾಂಗ, ಕೆ.ಎಚ್.ಮುನಿಯಪ್ಪ ಅವರಿಗೆ ಹೆದ್ದಾರಿ ಹೀಗೆ ಅನೇಕರಿಗೆ ಪ್ರಮುಖ ಖಾತೆ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸಿತ್ತು. ಜೊತೆಗೆ ಪ್ರಧಾನಿ ಹುದ್ದೆ ಎಚ್.ಡಿ.ದೇವೇಗೌಡರು ಅಲಂಕರಿಸಲು ಬೆಂಬಲ ವ್ಯಕ್ತಪಡಿಸಿ, ಕನ್ನಡದ ವ್ಯಕ್ತಿ ಮೊದಲ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ ಹೆಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಆದರೆ, ಬಿಜೆಪಿ ರಾಜ್ಯದ ಲಿಂಗಾಯತರು ಮತ್ತು ಅಹಿಂದ ವರ್ಗವನ್ನು ಕೇವಲ ಮತಗಳಿಗೆ ಸೀಮಿತ ಮಾಡಿಕೊಂಡು ಬಣ್ಣದ ಮಾತಿನಲ್ಲಿ ವಂಚಿಸುತ್ತಿದೆ. ಬಿಜೆಪಿಯ ನಯವಂಚನೆ ವಿರುದ್ಧ ಸಿಡಿದೇಳಬೇಕು ಎಂದು ಎಚ್.ಆಂಜನೇಯ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ