ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಮದ್ಯದಂಗಡಿಗೆ ಅವಕಾಶ ಬೇಡ

KannadaprabhaNewsNetwork | Published : Sep 19, 2024 1:56 AM

ಸಾರಾಂಶ

ಜನವಸತಿ ಪ್ರದೇಶದಲ್ಲಿ ಜಿಲ್ಲಾಡಳಿತ ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದು ಶ್ರೀ ಶಿವಕುಮಾರ ಸ್ವಾಮಿ ಬಡಾವಣೆಯ 2ನೇ ಹಂತದ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಪಿ.ಮುಪ್ಪಣ್ಣ ಒತ್ತಾಯಿಸಿದರು.

- ಶ್ರೀ ಸಂಜೀವಿನಿ ಆಂಜನೇಯ ದೇವಸ್ಥಾನದ ಗಣೇಶೋತ್ಸವದಲ್ಲಿ ಜಿ.ಪಿ.ಮುಪ್ಪಣ್ಣ ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜನವಸತಿ ಪ್ರದೇಶದಲ್ಲಿ ಜಿಲ್ಲಾಡಳಿತ ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದು ಶ್ರೀ ಶಿವಕುಮಾರ ಸ್ವಾಮಿ ಬಡಾವಣೆಯ 2ನೇ ಹಂತದ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಪಿ.ಮುಪ್ಪಣ್ಣ ಒತ್ತಾಯಿಸಿದರು.

ನಗರದ ಶ್ರೀ ಶಿವಕುಮಾರ ಸ್ವಾಮಿ ಬಡಾವಣೆಯ 2ನೇ ಹಂತದ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀ ಗಣೇಶೋತ್ಸವ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ವರ್ಷಗಳ ಹಿಂದೆ ಇದೇ ರೀತಿ ಮದ್ಯದಂಗಡಿ ಆರಂಭಿಸಲು ಬಂದಾಗ ಸಮಿತಿಯಿಂದ ಆಕ್ಷೇಪ ಸಲ್ಲಿಸಿದ್ದರಿಂದ ತಡೆಹಿಡಿಯಲಾಗಿತ್ತು. ಈಗ ಮತ್ತೆ ಅಂತಹ ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದರು.

ಪ್ರತಿ ವರ್ಷ ಶ್ರೀ ಸಂಜೀವಿನಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಸಲ 18ನೇ ವರ್ಷದ ಗಣೇಶೋತ್ಸವ ಹಮ್ಮಿಕೊಳ್ಳಲಾಗಿದೆ. ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದಿಂದ ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನ ಏರ್ಪಡಿಸಿದ್ದು, ಮಕ್ಕಳಾದಿಯಾಗಿ ಹಿರಿಯ ನಾಗರೀಕರವರೆಗೆ ಆಸಕ್ತಿಯಿಂದ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಶ್ರೀ ಸಂಜೀವಿನಿ ಆಂಜನೇಯ ದೇವಸ್ಥಾನದ ಮುಂಭಾಗವನ್ನು ವಿಸ್ತರಿಸುವ ಆಲೋಚನೆ ಇದೆ. ಈ ಭಾಗದ ನಿವಾಸಿಗಳು, ಭಕ್ತಾದಿಗಳು ಕೈಲಾದ ದೇಣಿಗೆ ನೀಡುವ ಮೂಲಕ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ದಾನಿಗಳಾದ ಪಾಲಿಕೆ ಇಇ ಎಂ.ಎಚ್.ಉದಯಕುಮಾರ, ವಿದ್ಯಾ ದಂಪತಿ, ನಿವೃತ್ತ ಬೋಧಕ ಬಿ.ತಿಮ್ಮಣ್ಣ, ಸಾವಿತ್ರಮ್ಮ ದಂಪತಿ, ಡಾ.ಡಿ.ಷಣ್ಮುಖ, ಆರ್.ಎಲ್. ವೀಣಾ ದಂಪತಿ, ಲಕ್ಷ್ಮೀ ಗ್ರಾನೈಟ್ಸ್‌ನ ಇಂದ್ರಪ್ಪ, ಶ್ರೀ ಸಾಯಿ ಸೆರಾಮಿಕ್ಸ್‌ನ ಟಿ.ಹನುಮಂತಪ್ಪ, ವಿಶಾಲ, ಎನ್.ಜಿ.ಪ್ರಕಾಶ ನೀರ್ಥಡಿ ಇತರರಿಗೆ ಸನ್ಮಾನಿಸಲಾಯಿತು.

ಸಮಿತಿಯ ಬಿ.ತಿಮ್ಮಣ್ಣ, ಎಚ್.ಎಂ. ಶೇಖರ, ಜಿ.ಪರಮೇಶ್ವರಪ್ಪ, ಎಸ್.ಷಣ್ಮುಖಪ್ಪ, ಎಸ್.ಬಸವರಾಜಪ್ಪ, ಜಿ.ಆರ್. ಚನ್ನಬಸಪ್ಪ, ಓಂಕಾರಪ್ಪ, ಜಿ.ಪಿ.ಚಿದಾನಂದಪ್ಪ ಹೆಮ್ಮನಬೇತೂರು, ಎನ್.ಪಿ. ಮೌನೇಶಪ್ಪ, ಶಂಭು ಬಚಗೌಡರ್, ಸಿ.ಸಿದ್ದಪ್ಪ, ವಿಜಯಕುಮಾರ ಇತರರು ಇದ್ದರು.

- - -

ಬಾಕ್ಸ್ * ಪಾಲಿಕೆಯಿಂದ ಅಗತ್ಯ ಸಹಕಾರ: ವೀರೇಶ ಪಾಲಿಕೆ ಸದಸ್ಯ ಕೆ.ಎಂ.ವೀರೇಶ ಮಾತನಾಡಿ, ಶಿವಕುಮಾರ ಸ್ವಾಮಿ ಬಡಾವಣೆಯ ಜಿಲ್ಲಾ ಕೇಂದ್ರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾಗಿದೆ. ಈ ಭಾಗಕ್ಕೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರವೀಂದ್ರನಾಥ ಸಹ ಸಾಕಷ್ಟು ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಸಹ ಪಾಲಿಕೆಯಿಂದ ಆಗತ್ಯ ಸಹಕಾರ ಕೊಡಿಸಲು ಪಾಲಿಕೆ ಸದಸ್ಯರ ಜೊತೆಗೂಡಿ ಶ್ರಮಿಸುವೆ. ಮದ್ಯದಂಗಡಿಗೆ ನಿವಾಸಿಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವೇ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ಮನವಿ ಮಾಡೋಣ ಎಂದು ತಿಳಿಸಿದರು.

- - - -17ಕೆಡಿವಿಜಿ9:

ದಾವಣಗೆರೆ ಶ್ರೀ ಶಿವಕುಮಾರ ಸ್ವಾಮಿ ಬಡಾವಣೆಯ ಶ್ರೀ ಸಂಜೀವಿನಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಶ್ರೀ ಗಣೇಶೋತ್ಸವ ಅಂಗವಾಗಿ ಉರಿಲಿಂಗ ಪೆದ್ದಿ ನಾಟಕ ಉದ್ಘಾಟನಾ ಸಮಾರಂಭ ನಡೆಯಿತು.

Share this article