ಜನರ ನಂಬಿಕೆ, ಆಚಾರದಿಂದ ಸಾಹಿತ್ಯ

KannadaprabhaNewsNetwork |  
Published : Jun 09, 2025, 01:36 AM IST
ಕ್ಯಾಪ್ಷನ8ಕೆಡಿವಿಜಿ39, 40 ದಾವಣಗೆರೆಯಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಾಹಿತ್ಯದಲ್ಲಿ ಸ್ವತ್ವ ಶೀರ್ಷಿಕೆಯ ನಾಲ್ಕನೇ ರಾಜ್ಯ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಡಾ.ಜಿ.ಬಿ.ಹರೀಶ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಸ್ವಂತಿಕೆಯ ಆಧಾರದಲ್ಲಿ ಕನ್ನಡ ಸಾಹಿತ್ಯ ಬೆಳೆದಿದೆ. ತತ್ವಶಾಸ್ತ್ರಕ್ಕೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎಂಬುದು ಸರಿಯಲ್ಲ. ನಮ್ಮ ದೇಶದಲ್ಲಿ ಸಾಹಿತ್ಯ ಹಾಗೂ ದಾರ್ಶನಿಕರ ಚಿಂತನೆ ಒಟ್ಟೊಟ್ಟಿಗೆ ಸಾಗಿದೆ. ಜನರ ನಂಬಿಕೆ, ಆಚಾರ-ವಿಚಾರಗಳನ್ನು ಬಳಸಿಕೊಂಡು ಸಾಹಿತ್ಯ ರಚನೆಯಾಗಿದೆ ಎಂದು ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಿ.ಬಿ.ಹರೀಶ್ ತಿಳಿಸಿದರು.

ಸಾಹಿತಿ ಡಾ.ಜಿ.ಬಿ.ಹರೀಶ್ ಅಭಿಮತ । ನಾಲ್ಕನೇ ರಾಜ್ಯ ಅಧಿವೇಶನದ ಸಮಾರೋಪ । ವಿಜಯಪುರದಲ್ಲಿ 5ನೇ ಸಮಾವೇಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ವಂತಿಕೆಯ ಆಧಾರದಲ್ಲಿ ಕನ್ನಡ ಸಾಹಿತ್ಯ ಬೆಳೆದಿದೆ. ತತ್ವಶಾಸ್ತ್ರಕ್ಕೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎಂಬುದು ಸರಿಯಲ್ಲ. ನಮ್ಮ ದೇಶದಲ್ಲಿ ಸಾಹಿತ್ಯ ಹಾಗೂ ದಾರ್ಶನಿಕರ ಚಿಂತನೆ ಒಟ್ಟೊಟ್ಟಿಗೆ ಸಾಗಿದೆ. ಜನರ ನಂಬಿಕೆ, ಆಚಾರ-ವಿಚಾರಗಳನ್ನು ಬಳಸಿಕೊಂಡು ಸಾಹಿತ್ಯ ರಚನೆಯಾಗಿದೆ ಎಂದು ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಿ.ಬಿ.ಹರೀಶ್ ತಿಳಿಸಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಾಹಿತ್ಯದಲ್ಲಿ ಸ್ವತ್ವ ಶೀರ್ಷಿಕೆಯ ನಾಲ್ಕನೇ ರಾಜ್ಯ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯದಲ್ಲಿ ಸ್ವಂತಿಕೆ ಇದ್ದರೂ ಅದನ್ನು ನೋಡುವ ದೃಷ್ಟಿಕೋನವನ್ನು ಕಾಲೇಜು, ವಿಶ್ವವಿದ್ಯಾಲಯಗಳು ಬೆಳೆಸುತ್ತಿಲ್ಲ. ಮಾರ್ಕ್ಸ್ ವಾದ, ಸಮಾಜವಾದ, ಅಂಬೇಡ್ಕರ್ ವಾದ ಕಲಿಸುತ್ತಿರುವವರು ಸಾಹಿತ್ಯವಾದವನ್ನು ಹೇಳಿಕೊಡುತ್ತಿಲ್ಲ. ಅದರ ಬದಲು ಇರುವ, ಇಲ್ಲದಿರುವ ಸಂಘರ್ಷಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.

ಸ್ವ ಎಂಬುದು ನಮ್ಮ ನೆಲೆಗಟ್ಟನ್ನು ಅವಲಂಬಿಸಿದೆ. ಕೃತಿಯನ್ನು ಮೆಚ್ಚಿಕೊಂಡ ಮಾತ್ರಕ್ಕೆ ಸಾಹಿತಿಯ ವಾದವನ್ನು ಒಪ್ಪಬೇಕೆಂದಿಲ್ಲ. ದತ್ತಪೀಠ ಹಾಗೂ ಬಾಬಾಬುಡನಗಿರಿ, ಶಿವಾಜಿ ಮತ್ತು ಔರಂಗಜೇಬ್ ಈ ಪೈಕಿ ನಮ್ಮ ಸ್ವತ್ವದ ನೆಲೆ ನಮಗೆ ಅರಿವಿರಬೇಕು. ಭಾರತೀಯತೆಗೆ ವಿರುದ್ಧವಾಗಿರುವ ಸಾಹಿತಿ ಹಾಗೂ ಸಾಹಿತ್ಯ ಕೃತಿಗಳು ನಮಗೆ ಪ್ರಮಾಣವಾಗಬಾರದು ಎಂದು ತಿಳಿಸಿದರು.

ಶೈವ ಚಿಂತನೆ ಅರ್ಥವಾಗದೆ ಅಲ್ಲಮಪ್ರಭು ಅರ್ಥವಾಗುವುದಿಲ್ಲ. ಸಾಹಿತ್ಯದಲ್ಲೂ ಇಂತಹದ್ದೇ ಸ್ವಂತಿಕೆಯ ಪ್ರಮಾಣ ಬೇಕಾಗುತ್ತದೆ. ಆರ್ಥಿಕ, ರಾಜಕೀಯ ಸಂಘರ್ಷಗಳು ನಮಗೆ ಪ್ರಮಾಣವಲ್ಲ. ಸ್ವತ್ವದ ವ್ಯಾಖ್ಯಾನ ಮಾಡುವಾಗ ಮೋಹಕ ಸಾಹಿತಿಗಳನ್ನು ಹೊರಗಿಡಬೇಕು. ಸಾಹಿತಿಗಳ ಇಬ್ಬಂದಿ ನೀತಿಯು ಸ್ವಂತಿಕೆಗೆ ಮಾಮಾರಕವಾಗಿದೆ. ವ್ಯಕ್ತಿಗಳ ಮೇಲಿನ ಮೋಹ ಬಿಡಬೇಕು. ಕೃತಿಗಳ ಆಧಾರದಲ್ಲಿ ಸಾಹಿತಿಗಳನ್ನು ಅಳೆಯಬೇಕು ಎಂದು ಪ್ರತಿಪಾದಿಸಿದರು.

ಸಾಹಿತಿ, ಸಾಹಿತ್ಯ ಸಂಘಟಕ ಎಸ್.ಜಿ.ಕೋಟಿ ಬಾಗಲಕೋಟೆ ಮಾತನಾಡಿ, ಪ್ರಸ್ತುತ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಎದ್ದು ಕಾಣುತ್ತಿದೆ. ಮಕ್ಕಳ ಮೇಲೆ ತಂದೆ-ತಾಯಿಗೆ ನಿಯಂತ್ರಣ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು ದಾರಿ ತಪ್ಪದಂತೆ ಸದಭಿರುಚಿ ಬೆಳೆಸಬೇಕಿದೆ. ಮೊಬೈಲ್, ಅಂತರ್ಜಾಲದತ್ತ ಆಕರ್ಷಣೆ ಆಗದಂತೆ ಕಲೆ, ಸಂಗೀತ, ಸಾಹಿತ್ಯದತ್ತ ಮನಸ್ಸು ತಿರುಗಿಸಬೇಕು. ಆಗ ಮಾತ್ರ ನೈತಿಕ, ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಂಡು ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವರ್ಷದಿಂದ ವರ್ಷಕ್ಕೆ ಬಹುದೊಡ್ಡ ಪ್ರಗತಿ ಕಾಣುತ್ತಿದೆ. ಕಳೆದ 15 ವರ್ಷದಲ್ಲಿ ರಾಜ್ಯಮಟ್ಟದ ಸಂಘಟನೆಯಾಗಿ ಬೆಳೆದಿದೆ. ಪರಿಷತ್ತಿನ ಸದಸ್ಯರಾಗಲು ಹೆಚ್ಚು ಜನ ಮುಂದೆ ಬರುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಸದಸ್ಯರನ್ನು ಮಾಡಬೇಕೆಂಬ ಗುರಿ ಇದ್ದು, ಪ್ರಯತ್ನಪಟ್ಟರೆ 35,000 ಸದಸ್ಯರ ಸಂಖ್ಯೆ ಮುಟ್ಟುವುದು ಕಷ್ಟವಲ್ಲ. ಎಲ್ಲರೂ ಸಹಕರಿಸಿದರೆ ದೊಡ್ಡ ಸಂಘಟನೆ ಕಟ್ಟಲು ಸಾಧ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಭಾಗವಹಿಸಿದ್ದರು. ಪುಷ್ಪ ತಾಳಿಕೊಪ್ಪ ಆಶಯಗೀತೆ ಹಾಡಿದರು.

ಇದೇ ವೇಳೆ ವಿಜಯಪುರದಲ್ಲಿ ಮುಂಬರುವ ಐದನೇ ರಾಜ್ಯ ಅಧಿವೇಶನವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಜಯಪುರದ ಅನಿಲ್ ಬೀಳುಂಡಗಿ, ಶಿವಶರಣಪ್ಪ ಅಧಿವೇಶನದ ಅಧ್ಯಕ್ಷರಿಂದ ವೀಳ್ಯ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!