ಧಾರವಾಡ: ಭಾರತೀಯ ಸಮಾಜದಲ್ಲಿ ವಿವಿಧ ಸಮುದಾಯಗಳ ಗುಚ್ಛವಿದೆ. ಇಲ್ಲಿ ಯಾವುದೇ ರೀತಿಯ ಧರ್ಮ, ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕೆಂದು ಮಹಾನಗರ ಪಾಲಿಕೆ ಮಹಾಪೌರ ಜ್ಯೋತಿ ಪಾಟೀಲ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿದ ಅವರು, ಹಡಪದ ಸಮಾಜವು ಸಣ್ಣ ಸಮುದಾಯವಾಗಿದ್ದರೂ, ದೊಡ್ಡ ಸಂಘಟನೆಯಾಗಿ ಸಮಾಜದಲ್ಲಿ ಬೆಳೆದಿರುವುದು ಸಂತಸದ ಸಂಗತಿ. ಶರಣ ಪರಂಪರೆಯ ಅಗ್ರಗಣ್ಯ ಶರಣರಾದ ಹಡಪದ ಅಪ್ಪಣ್ಣನವರು ಕಾಯಕ ಯೋಗಿಯಾಗಿ ಅನೇಕ ಅನುಭವದ ವಚನಗಳನ್ನು ಬರೆದಿದ್ದಾರೆ. ಅವರ ವಚನಗಳ ಸಾರದ ಹಿನ್ನೆಲೆಯಲ್ಲಿ ಯಾವುದೇ ಸಮಾಜವಿರಲಿ, ಧರ್ಮವಿರಲಿ, ಜಾತಿ ಇರಲಿ ಎಲ್ಲರನ್ನೂ ಸಮಾನರಂತೆ ಕಾಣಬೇಕು ಎಂದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, 12ನೇ ಶತಮಾನ ಅಂದರೆ ಎಲ್ಲ ವಚನಕಾರರು ನೆನಪಾಗುತ್ತಾರೆ.ಯಾವುದೇ ಜಾತಿ, ಧರ್ಮ, ಮತ, ಪಂಥ ಎನ್ನದೆ ಸರ್ವಧರ್ಮ ಸರ್ವಪಾಲು ಎಂದು ಶರಣರೆಲ್ಲ ಜೀವನ ನಡೆಸಿದವರು. ನಮ್ಮ ಮಹಾನ ದಾರ್ಶನಿಕರು, ಅವರು ಹೇಳುವ ವಚನಗಳು ನಮ್ಮ ಜೀವನಕ್ಕೆ ಧೇಯ್ಯ ವಾಕ್ಯಗಳಾಗಿವೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಶರಣರಿಗೆ ಜಾತಿ, ಶ್ರೀಮಂತಿಕೆ, ಬಡತನ ಮುಖ್ಯ ಆಗುವುದಿಲ್ಲ, ಮನುಷ್ಯ ಜಾತಿ ಒಂದೇ ಎಂದು ಬದುಕುತ್ತಾರೆ. ಸಮಾಜದ ಸಮಾನತೆ ಹಾಗೂ ಸಹೋದರತ್ವದ ಬಾಳನ್ನು ಜೀವಿಸಿದ ಮಹಾನ್ ವ್ಯಕ್ತಿಗಳು ಶಿವಶರಣರಾಗಿದ್ದಾರೆ ಎಂದರು.ಕೆ.ಇ.ಬೋರ್ಡ ಪ್ರೌಢ ಶಾಲೆ ಶಿಕ್ಷಕ ಸಂಗಮೇಶ ಹಡಪದ ಹಡಪದ ಅಪ್ಪಣ್ಣ ಜೀವನ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜದ ಮುಖಂಡರಾದ ಈರಣ್ಣ ಚಿಕ್ಕಬೆಳ್ಳಿಕಟ್ಟಿ, ನಿಂಗರಾಜ ಹಡಪದ, ಮಾರುತಿ ಹಡಪದ, ಈರಣ್ಣ ಹಡಪದ, ಫಕ್ಕೀರಪ್ಪ ಮೂಲಿಮನಿ, ಶಿವಕುಮಾರ ಅಣ್ಣಿಗೇರಿ, ನಾಗರಾಜ ಅಂಗಡಿ, ಮಲ್ಲಪ್ಪ ಹಡಪದ ಇದ್ದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಗಳಿಸಿರುವ ಜಿಲ್ಲೆಯ ರಾಜೇಶ್ವರಿ ಮಂಜುನಾಥ ಹಡಪದ ವಿದ್ಯಾರ್ಥಿನಿಯನ್ನು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.