ಅಡಿಕೆ ರೈತರಿಗೆ ಜೀವನಾಧಾರ

KannadaprabhaNewsNetwork |  
Published : Aug 31, 2025, 02:00 AM IST
ಫೋಟೊ ಶೀರ್ಷಿಕೆ: 30ಆರ್‌ಎನ್‌ಆರ್5ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾನಗಲ್ಲ ತಾಲೂಕಿನ ಸೇವಾಲಾಲ ಗ್ರಾಮದಲ್ಲಿ ರೈತರಿಗಾಗಿ ಅಡಿಕೆ ಬೆಳೆಯಲ್ಲಿ ಸಮಗ್ರ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  | Kannada Prabha

ಸಾರಾಂಶ

ಅಡಿಕೆ ಬೆಳೆಯಲ್ಲಿ ಪೋಷಕಾಂಶದ ಅಸಮತೋಲನೆಯಿಂದ ಹಿಡಿ ಮುಂಡಿಗೆ, ಚಂಡೆ ತಿರುಗುವಿಕೆ, ಓರೆಗಣ್ಣು ಮತ್ತು ಕಾಯಿ ಒಡೆಯುವುದು ಕಂಡು ಬರುತ್ತದೆ

ರಾಣಿಬೆನ್ನೂರು: ಅಡಿಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಸಾಕಷ್ಟು ರೈತರಿಗೆ ಜೀವನಾಧಾರವಾಗಿದೆ ಎಂದು ತೋಟಗಾರಿಕೆ ವಿಜ್ಞಾನಿ ಡಾ.ಸಂತೋಷ ಎಚ್.ಎಂ. ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ಹಾನಗಲ್ಲ ತಾಲೂಕಿನ ಸೇವಾಲಾಲ್‌ ಗ್ರಾಮದಲ್ಲಿ ರೈತರಿಗಾಗಿ ಏರ್ಪಡಿಸಿದ್ದ ಅಡಿಕೆ ಬೆಳೆಯಲ್ಲಿ ಸಮಗ್ರ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಡಿಕೆ ಬೆಳೆಯಲ್ಲಿ ಪೋಷಕಾಂಶದ ಅಸಮತೋಲನೆಯಿಂದ ಹಿಡಿ ಮುಂಡಿಗೆ, ಚಂಡೆ ತಿರುಗುವಿಕೆ, ಓರೆಗಣ್ಣು ಮತ್ತು ಕಾಯಿ ಒಡೆಯುವುದು ಕಂಡು ಬರುತ್ತದೆ. ಗದ್ದೆ ಪರಿವರ್ತಿತ ತೋಟಗಳು, ಮಣ್ಣಿನಲ್ಲಿ ನೀರು ನಿಲ್ಲುವಿಕೆಯಿಂದ ಬೇರಿನ ಬೆಳವಣಿಗೆ ಕುಂಠಿತಗೊಳ್ಳುವುದರಿಂದ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತವೆ. ಪೋಷಕಾಂಶ ಮತ್ತು ಬಸಿಗಾಲುವೆ ನಿರ್ವಹಣೆ ಮಾಡುವುದರಿಂದ ಈ ಸಮಸ್ಯೆ ನಿವಾರಿಸಬಹುದು. ಹಿಡಿ ಮುಂಡಿಗೆ ರೋಗದಿಂದ ಎಲೆಗಳ ಗಾತ್ರ ಚಿಕ್ಕದಾಗಿ ಕಡು ಹಸಿರು ಬಣ್ಣಕ್ಕೆ ತಿರುಗುತ್ತವೆ. ಸತುವಿನ ಕೊರತೆಯು ಇದಕ್ಕೆ ಪ್ರಮುಖ ಕಾರಣವಾಗಿದ್ದು ಪ್ರತಿ ಮರದ ಬುಡಕ್ಕೆ 10 ಗ್ರಾಂ ಸತುವಿನ ಸಲ್ಪೇಟ್ ಹಾಕುವುದರಿಂದ ಪ್ರಾರಂಭಿಕ ಹಂತದಲ್ಲಿರುವ ಮರ ಸರಿಪಡಿಸಬಹುದು. ಹೆಚ್ಚು ಬಾಧಿತವಿರುವ ಮರಗಳಿಗೆ ಶೇ. 0.5 ರಷ್ಟು ಸತುವಿನ ಸಲ್ಪೇಟ್‌ನ್ನು ಸಿಂಪರಣೆ ಮಾಡುವುದರಿಂದ ಸಾಮಾನ್ಯ ಗಾತ್ರದ ಹೊಸ ಎಲೆ ಪಡೆಯಬಹುದು. ಕಾಯಿ ಒಡೆಯುವ ಸಮಸ್ಯೆಯು ಪೋಟ್ಯಾಷಿಯಂ ಮತ್ತು ಬೋರಾನ್ ಕೊರತೆಯಿಂದ ಉಂಟಾಗುತ್ತಿದ್ದು ಇದರ ನಿರ್ವಹಣೆಗೆ ಶೇ.0.2 ರಷ್ಟು ಬೋರಾಕ್ಸ್ನ್ನುಸಿಂಪರಣೆ ಮಾಡಬೇಕು. ತೋಟದಲ್ಲಿ ಬಸಿಗಾಲುವೆ ನಿರ್ಮಿಸಬೇಕು. ಸಸಿಗಳ ಆರೋಗ್ಯಕರ ಬೆಳವಣಿಗೆಗೆ ಸರಿಯಾದ ಬಸಿಗಾಲುವೆ ಅತ್ಯಗತ್ಯವಾಗಿದ್ದು, ನೀರು ಬಸಿದು ಹೋಗುವ ಮಣ್ಣಿರುವ ತೋಟದಲ್ಲಿ ಪ್ರತಿ ಎರಡು ಸಾಲಿಗೊಂದರಂತೆ ಬಸಿಗಾಲುವೆ ಅವಶ್ಯವಿದೆ. ಗಡುಸು ಮಣ್ಣಿರುವ ತೋಟದಲ್ಲಿ ಪ್ರತಿ ಸಾಲಿಗೊಂದು ಬಸಿಗಾಲುವೆ ಆಳವಾಗಿ ನಿರ್ಮಿಸಬೇಕು ಎಂದರು.

ಹಿತ್ತಲ ಕೋಳಿ ಸಾಕಾಣಿಕೆ ಬಗ್ಗೆ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾಹಿತಿ ನೀಡಿದರು.

ಗ್ರಾಮದ ಸುಮಾರು 30 ಅಡಿಕೆ ಬೆಳೆಗಾರರು ತರಬೇತಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ