ಹೊಳೆಹೊನ್ನೂರು: ಸರ್ಕಾರದಿಂದ ಸಹಕಾರ ಸಂಘಗಳಿಗೆ ಈವರೆಗೆ 9 ಕೋಟಿ ರು. ಸಾಲ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಮೊತ್ತ ಹತ್ತು ಪಟ್ಟು ಹೆಚ್ಚಾಗಲಿದ್ದು, 90 ಕೋಟಿ ರು.ಗೂ ಅಧಿಕ ಮೊತ್ತ ಸಹಕಾರ ಸಂಘಗಳಿಗೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಹಕಾರ ಸಂಘಗಳಿಂದ ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ದೊರೆಯುತ್ತಿದೆ. ಸಹಕಾರ ಸಂಘಗಳಲ್ಲಿ ಚಿನ್ನದ ಮೇಲಿನ ಸಾಲ ಹಾಗೂ ಅಡಕೆ ಅಡಮಾನ ಸಾಲ ದೊರೆಯುವುದರಿಂದ ರೈತರು ತಮ್ಮ ಆರ್ಥಿಕತೆ ಸುಧಾರಿಸಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಸಂಘದ ಏಳಿಗೆಗೆ ಶ್ರಮಿಸಬೇಕು ಆಗ ಮಾತ್ರ ಸಹಕಾರ ಸಂಘಗಳ ಅಬಿವೃದ್ಧಿ ಸಾಧ್ಯ ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಪಂಪ್ ಸೇಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದರು. ಸಿದ್ದರಾಮಯ್ಯ ನೀಡಿದ ಉಚಿತ ಕಾರ್ಯಕ್ರಮಗಳು ನಾಡಿನ ಪ್ರತಿಯೊಬ್ಬರಿಗೂ ತಲುಪುವಲ್ಲಿ ಯಶಸ್ವಿಯಾಗಿವೆ. ಇದರಿಂದ ಎಷ್ಟೋ ಕುಟುಂಬಗಳು ಅರ್ಥಿಕವಾಗಿ ಪ್ರಗತಿಯತ್ತ ಮುಖ ಮಾಡಿವೆ. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಮಾತನಾಡಿ, ಸುಮಾರು 25 ವರ್ಷಗಳ ಹಿಂದೆ ದಿ।ಗೌಡ್ರ ನಾಗರಾಜಣ್ಣ ಅವರಿಂದ ನೀರು ಬಳಕೆದಾರರ ಸಹಕಾರ ಸಂಘ ಸ್ಥಾಪನೆ ಮಾಡುವುದರ ಮೂಲಕ ಸಹಕಾರ ಸಂಘ ಬೆಳವಣಿಗೆಯಾಗಿದೆ. ಈ ಸಹಕಾರ ಸಂಘದಲ್ಲಿ ಪ್ರಸ್ತುತ 935 ಜನ ಷೇರುದಾರರು ಇದ್ದು, ಸಹಕಾರ ಸಂಘವು ತಡಸ, ಅಗರದಹಳ್ಳಿ, ಬಸವಪುರ, ಸಿದ್ದರ ಕಾಲೋನಿ, ಹಂಚಿನ ಸಿದ್ದಾಪುರ, ದೊಡ್ಡಸೀಗೆ ಹಾಗೂ ಕೆಂಗಾನಲ್ ಗ್ರಾಮಗಳನ್ನು ಒಳಗೊಂಡು ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಮಾಜಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ನಾಗರಾಜಪ್ಪ, ಮರಿಯಪ್ಪ, ಶ್ರೀನಿವಾಸ್ ಕರಿಯಣ್ಣ, ಎಚ್.ಎನ್.ನಾಗರಾಜ್, ಷಡಾಕ್ಷರಿ, ಸದಾಶಿವಪ್ಪ, ಜಯಪ್ಪ, ಡಿಬಿ ಹಳ್ಳಿ ಬಸವರಾಜಪ್ಪ ಇನ್ನಿತರರು ಇದ್ದರು.