- ಅರಳಿಕೊಪ್ಪದಲ್ಲಿ ಬ್ಯಾಂಕ್ , ವಿವಿಧ ಇಲಾಖೆಗಳ ಮಾಹಿತಿ ಕಾರ್ಯಕ್ರಮದಲ್ಲಿ ರಿಜೇಶ್ ಹಿಮಾನಿಯಾಲ್
ಆರ್.ಬಿ.ಐ. ಅಧೀನದಲ್ಲಿ ಬರುವ ಎಲ್ಲಾ ಬ್ಯಾಂಕುಗಳಿಂದ ಪಿಎಂಇಜಿಪಿ ಯೋಜನೆಯಡಿ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಆಹಾರ ಉತ್ಪನ್ನಗಳ ಸಂರಕ್ಷಣಾ ಕೇಂದ್ರಗಳಿಗೂ ಸಾಲ ನೀಡಲಾಗುವುದು ಎಂದು ನಬಾರ್ಡನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ರಿಜೇಶ್ ಹಿಮಾನಿಯಾಲ್ ತಿಳಿಸಿದರು.
ಸೋಮವಾರ ಅರಳಿಕೊಪ್ಪ ಸಮುದಾಯ ಭವನದಲ್ಲಿ ನಬಾರ್ಡ್ ನೇತೃತ್ವದಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ಮದರ್ ಸ್ವಯಂ ಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿವಿಧ ಇಲಾಖೆ ಹಾಗೂ ಬ್ಯಾಂಕುಗಳಿಂದ ಸ್ವಸಹಾಯ ಸಂಘದ ಸದಸ್ಯ ರಿಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಹಕರು ಹಾಗೂ ಸ್ವಸಹಾಯ ಸಂಘಗಳಿಗೆ ಕುರಿ, ಕೋಳಿ ಹಾಗೂ ಹಸು ಸಾಕಾಣಿಗೂ ರಿಯಾಯಿತಿ ದರದ ಬಡ್ಡಿಯಲ್ಲಿ ಸಾಲ ನೀಡಲಾಗುವುದು. ಕೆಲವು ಯೋಜನೆಗಳಿಗೆ ಸಹಾಯ ಧನದ ಸೌಲಭ್ಯವಿದೆ. ಸಾಲ ಪಡೆದವರು ಕಾಲ, ಕಾಲಕ್ಕೆ ಸಾಲದ ಕಂತನ್ನು ಮರುಪಾವತಿ ಮಾಡಬೇಕು. ಕೇವಲ ಸಬ್ಸಿಡಿಗೋಸ್ಕರ ಸಾಲ ಮಾಡಿ ಸಾಲ ಕಟ್ಟದಿದ್ದರೆ ಬ್ಯಾಂಕುಗಳು ಸಾಲ ವಸೂಲು ಮಾಡುತ್ತಾರೆ ಎಂದರು.
ತೋಟಗಾರಿಕೆ ಇಲಾಖೆ ಕಿರಿಯ ಅಧಿಕಾರಿ ನವೀನ್ ಮಾಹಿತಿ ನೀಡಿ, ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕೃಷಿ ಇಲಾಖೆ ರಂಜಿತ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಅಂಗನವಾಡಿಯಿಂದ ಅರಳಿಕೊಪ್ಪ ಗ್ರಾಮದ ಅನನ್ಯ ಎಂಬ ಗರ್ಭಿಣಿ ಮಹಿಳೆಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ, ಸಹಾಯಕಿ ಸುಕೇತ ಸೀಮಂತ ಕಾರ್ಯ ನಡೆಸಿಕೊಟ್ಟರು.
ದೀಕ್ಷಾ ಸ್ವಾಗತಿಸಿದರು. ಎಂ. ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಅರಳಿಕೊಪ್ಪದ ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.