ಕನ್ನಡಪ್ರಭ ವಾರ್ತೆ ಕೋಲಾರನಗರಸಭೆಯಿಂದ ವ್ಯಾಪಾರ ಪರವಾನಗಿ ನವೀಕರಣ ಮಾಡಿಸದೆ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಅಂಗಡಿಗಳಿಗೆ ಭೀಗ ಹಾಕಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ನಗರದಲ್ಲಿ ನಗರಸಭೆ ಅಧಿಕಾರಿಗಳು ನಗರದ ಎಂ.ಜಿ.ರಸ್ತೆ, ದೊಡ್ಡಪೇಟೆಯಲ್ಲಿ ವ್ಯಾಪಾರ ಪರವಾನಗಿ ನವೀಕರಣ ಮಾಡಿಸದ ಚಿನ್ನದ ಅಂಗಡಿ, ಬಟ್ಟೆ ಅಂಗಡಿಗಳಿಗೆ ಬೀಗ ಹಾಕಿದರು. ಚಿನ್ನದ ಅಂಗಡಿಗಳಿಗೆ ಟ್ರೇಡ್ ಲೈಸೆನ್ಸ್ ನೀಡುವುದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ, ಅಲ್ಲದೆ ಚಿನ್ನದ ಅಂಗಡಿಗಳಿಗೆ ಬೀಗ ಹಾಕಿಸುವ ಅಧಿಕಾರ ನಗರಸಭೆಗೆ ಇಲ್ಲ ಎಂಬ ಹೈಕೋರ್ಟ್ ಆದೇಶದ ಪ್ರತಿಯನ್ನು ಅಧಿಕಾರಿಗಳಿಗೆ ನೀಡಿ ವಾಗ್ವಾದ ನಡೆಸಿದರು.ನಗರದಲ್ಲಿ ಚಿನ್ನದಂಗಡಿಗಳು, ಆಸ್ಪತ್ರೆ, ಕ್ಲಿನಿಕ್, ಬಟ್ಟೆ, ಚಿಲ್ಲರೆ ಅಂಗಡಿಗಳು ಸೇರಿ ೬ ಸಾವಿರ ಮಳಿಗೆಗಳಿವೆ. ಇವುಗಳಲ್ಲಿ ೭೦೦ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ, ಈಗಾಗಲೇ ೪೦ ಲಕ್ಷ ಹಣ ಬಾಕಿ ಇದೆ, ಮುನಿಸಿಪಲ್ ಆಕ್ಟ್ ಪ್ರಕಾರ ಹಣ ವಸೂಲಿ ಆಗಬೇಕಿದೆ ಎಂದು ನಗರಸಭೆ ಆಹಾರ ನಿರೀಕ್ಷಕ ಮಂಜುನಾಥ್ ವಿವರಿಸಿದರು. ನಗರದ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಕ್ಲಾಕ್ ಟವರ್ ಸೇರಿದಂತೆ ಎಲ್ಲೆಡೆ ಅಂಗಡಿಗಳನ್ನು ಸೀಜ್ ಮಾಡುವಂತೆ ಅಂಗಡಿ ಮಾಲೀಕರು ತಿರುಗಿ ಬೀಳುತ್ತಿದ್ದಂತೆ ಅಧಿಕಾರಗಳು ತಟಸ್ಥರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿ ಅಧಿಕಾರಿಗಳಿಗೆ ಅಗತ್ಯ ದಾಖಲೆ ಹಾಗೂ ಬಂದೋಬಸ್ತ್ನಲ್ಲಿ ಬೀಗ ಮುದ್ರೆ ಹಾಕುವಂತೆ ಸೂಚನೆ ನೀಡಿದರು.ವ್ಯಾಪಾರ ನವೀಕರಣ ಶುಲ್ಕ ಪಾವತಿಗೆ ಸಮಯಾವಕಾಶ ನೀಡುವಂತೆ ಕೆಲವರು ಮನವಿ ಮಾಡಿದ ಬಳಿಕ ಕಾರ್ಯಾಚರಣೆಯನ್ನು ಕೈ ಬಿಡಲಾಯಿತು ಎಂದು ಅಂಗಡಿ ಮಾಲೀಕರಾದ ಜಯಂತಿ ಲಾಲ್, ಲಾಲ್ ಚಂದ್ ತಿಳಿಸಿದರು.