ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ಹಿರಿಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಅಪರ ಸಿವಿಲ್ ನ್ಯಾಯಾಲಯಗಳಲ್ಲಿ ನೆನಗುದಿ ಬಿದ್ದಿದ್ದ ಒಟ್ಟು 10,445 ಪ್ರಕರಣಗಳಲ್ಲಿ 8437 ಪ್ರಕರಣಗಳನ್ನು ಕಕ್ಷಿದಾರರು ಮತ್ತು ಅರ್ಜಿದಾರರ ಸಮ್ಮುಖದಲ್ಲಿ ಬಗೆಹರಿಸಿದ ನ್ಯಾಯಾಧೀಶರು ದೂರುದಾರರಿಗೆ 9 ಕೋಟಿ, 5 ಲಕ್ಷದ, 84 ಸಾವಿರದ 228 ರು ಪರಿಹಾರ ನೀಡುವಂತೆ ತೀರ್ಪು ನೀಡಿದರು.
ಅಪಘಾತ ಪ್ರಕರಣಗಳಲ್ಲಿ ನೊಂದವರಿಗೆ ವಿಮಾ ಕಂಪನಿಯಿಂದ 47 ಪ್ರಕರಣಗಳಲ್ಲಿ 3 ಕೋಟಿ, 42 ಲಕ್ಷದ, 38ಸಾವಿರದ 558 ರು. ಪರಿಹಾರವಾಗಿ ತೀರ್ಪು ನೀಡಿದರು.ಕ್ರಿಮಿನಲ್ ಪ್ರಕರಣಗಳಲ್ಲಿ 11,533 ಚೆಕ್ ಬೌನ್ಸ್ ಪ್ರಕರಣದಲ್ಲಿ 3.96 ಲಕ್ಷ, 70 ಸಾವಿರ. ಬ್ಯಾಂಕ್ಗಳ ಸಾಲ ವಸೂಲಾತಿ ಮತ್ತು ಇತರ 61 ಸಿವಿಲ್ ವಾಜ್ಯಗಳಲ್ಲಿ ಒಂದು ಕೋಟಿ, 55 ಲಕ್ಷದ 22 ಸಾವಿರದ 593 ರು. ಪಾವತಿಸುವಂತೆ ಆದೇಶ ಹೊರಡಿಸಿದರು.
ಕೌಟುಂಬಿಕ ಕಲಹ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ಉಭಯ ಕಕ್ಷಿದಾರರ ಸಮ್ಮುಖದಲ್ಲಿ ಬಗೆಹರಿಸಿದ ನ್ಯಾಯಾಧೀಶರು ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಹರಿಣಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಜಿತ್ ದೇವರಮನಿ. ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ಎಸ್.ಸಿ.ನಳಿನ, ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೊನಪ್ಪ, ಮೂರನೇ ಅಪರ ನ್ಯಾಯಾಧೀಶ ಎಸ್.ಪಿ.ಕಿರಣ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಂ ಡೇವಿಡ್, ಕಪನಿ ನಂಜೇಶ್ವರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಲೋಕ ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.