ತಾಪಂ ಇಒರ ಸುಳ್ಳಿನ ಕೋಟೆ ಒಡೆದ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್

KannadaprabhaNewsNetwork | Published : Oct 9, 2024 1:31 AM

ತಾಪಂ ಇಒರ ಸುಳ್ಳಿನ ಕೋಟೆ ಒಡೆದ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್

ಕನ್ನಡಪ್ರಭವಾರ್ತೆ, ತುರುವೇಕೆರೆ

ಲೋಕಾಯುಕ್ತ ಭೇಟಿ ಸಂಬಂಧ ಕರೆಯಲಾಗಿದ್ದ ಸಭೆಗೆ ಗೈರು ಹಾಜರಾಗಿದ್ದ ತಾಪಂ ಇಒ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಘಟನೆ ಮಂಗಳವಾರ ನಡೆದಿದೆ.

ಉಪ ಲೋಕಾಯುಕ್ತ ನ್ಯಾ. ಬಿ. ಬೀರಪ್ಪ ಅವರು ಅ.18, 19 ಹಾಗೂ 20ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಲೋಕಾಯುಕ್ತ ಇನ್ಸಪೆಕ್ಟರ್‌ ತಾಪಂ ಸಭಾಂಗಣದಲ್ಲಿ ಕರೆದಿದ್ದರು. ಆಗ ಸಭೆಗೆ ಗೈರು ಹಾಜರಾಗಿದ್ದ ತಾಪಂ ಇಒ ಶಿವರಾಜಯ್ಯ ಅವರಿಗೆ ಸಿಬ್ಬಂದಿ ಮೂಲಕ ಕರೆ ಮಾಡಿಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿವರುದ್ರಪ್ಪ ಮೇಟಿ ತಾಪಂ ಇಒ ಶಿವರಾಜಯ್ಯನವರು ಹೇಳಿದ ಸುಳ್ಳಿನ ಕಥೆಗೆ ಫುಲ್‌ ಸ್ಟಾಪ್‌ ಹಾಕಿದರು.

ಆಗಿದ್ದಿಷ್ಟು :

ಲೋಕಾಯುಕ್ತರ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿದ್ದ ಇಒ ಶಿವರಾಜಯ್ಯನವರಿಗೆ ಸಿಬ್ಬಂದಿಯೋರ್ವರು ದೂರವಾಣಿ ಕರೆ ಮಾಡಿ ಸಭೆಗೆ ಯಾಕೆ ಬಂದಿಲ್ಲವೆಂದು ವಿಚಾರಣೆ ಮಾಡಿದ ವೇಳೆ ತಾವು ತಾಲೂಕಿನ ವಡವನಘಟ್ಟದಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಸಲುವಾಗಿ ಬಂದಿದ್ದೇನೆಂದು ಸಮಜಾಯಿಸಿ ನೀಡಿದರು. ಆದರೆ ಅದೇ ವಡವನಘಟ್ಟದ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಪಂಚಾಯ್ತಿಯ ಸದಸ್ಯರನ್ನು ಇಒ ಭೇಟಿ ಬಗ್ಗೆ ಕೇಳಲಾಗಿ ಇಒ ಶಿವರಾಜಯ್ಯ ತಮ್ಮ ಗ್ರಾಮಕ್ಕೆ ಬಂದೇ ಇಲ್ಲ ಎಂಬ ಉತ್ತರ ಬಂತು. ಇದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿವರುದ್ರಪ್ಪ ಮೇಟಿಯವರನ್ನು ಕೆರಳಿಸಿತು. ಹಾಗಾಗಿ ಈ ಸಭೆಗೆ ಯಾವ ಯಾವ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದಾರೋ ಎಲ್ಲರಿಗೂ ಶೋಕಾಸ್ ನೀಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು.

180 ಪ್ರಕರಣ ಭಾಕಿ

ಇನ್ನೂ ಸಭೆ ನಡೆಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿವರುದ್ರಪ್ಪ ಮೇಟಿ ಜಿಲ್ಲೆಯಲ್ಲಿ ಸುಮಾರು ೧೮೦ ಪ್ರಕರಣಗಳು ಬಾಕಿ ಇದ್ದು ಅವುಗಳನ್ನು ಉಪ ಲೋಕಾಯುಕ್ತರು ಅಂದೇ ಸ್ಥಳದಲ್ಲಿ ಬಗೆಹರಿಸುವ ವಿಶ್ವಾಸವಿದೆ. ಸಾರ್ವಜನಿಕರು ಅಧಿಕಾರಿಗಳಿಂದಾಗುತ್ತಿರುವ ಸಮಸ್ಯೆಯನ್ನು ದಾಖಲೆ ಸಹಿತ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು ಎಂದು ಅವರು ತಿಳಿಸಿದರು. ಪ ಲೋಕಾಯುಕ್ತರಾದ ಬಿ.ವೀರಪ್ಪನವರು ಅ ೨೦ ರಂದು ಜಿಲ್ಲೆಯ ಯಾವುದೇ ಸ್ಥಳದಲ್ಲಿ ಯಾವುದೇ ಇಲಾಖೆಯ ತನಿಖೆಗೆ ಮುಂದಾಗಬಹುದು. ಹಾಗಾಗಿ ತಾಲೂಕಿನ ಎಲ್ಲಾ ಅಧಿಕಾರಿಗಳು ಕೇಂದ್ರೀಯ ಸ್ಥಾನದಲ್ಲಿ ತಪ್ಪದೇ ಇರಬೇಕೆಂದು ಸಹ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿವರುದ್ರಪ್ಪ ಮೇಟಿಯವರು ಸೂಚನೆ ನೀಡಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ್ ಕುಂಇ ಅಹಮದ್ ಉಪಸ್ಥಿತರಿದ್ದರು.