ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್ನ ೧೭ ನಿರ್ದೇಶಕರ ಸ್ಥಾನಗಳಿಗೆ ಫೆ.೧೬ ರಂದು ಚುನಾವಣೆ ನಡೆದಿತ್ತು. ಮಂಡ್ಯ ತಾಲೂಕಿನಿಂದ ಕೆ.ಸಿ.ನಾಗಮ್ಮ (ಸಾಮಾನ್ಯ) ಸಿ.ಜೆ.ಸುಜಾತ ಕೃಷ್ಣ (ಸಾಮಾನ್ಯ) ಎಂ.ಬಿ.ಕಮಲ್ಲಮ್ಮ (ಸಾಮಾನ್ಯ), ರತ್ನಶ್ರೀ (ಸಾಮಾನ್ಯ), ಹೇಮಲತಾ (ಸಾಮಾನ್ಯ), ಪುಟ್ಟಗೌರಮ್ಮ (ಸಾಮಾನ್ಯ), ಎ.ಜೆ.ವತ್ಸಲಾ (ಸಾಮಾನ್ಯ), ಮದ್ದೂರು ತಾಲೂಕಿನಿಂದ ಎನ್.ಎ.ರೇಣುಕಾ (ಸಾಮಾನ್ಯ), ಮಳವಳ್ಳಿಯಿಂದ ಬಿ.ಎನ್.ಲೀಲಾವತಮ್ಮಣ್ಣಿ (ಸಾಮಾನ್ಯ), ಕೆ.ಆರ್.ಪೇಟೆ ತಾಲೂಕಿನಿಂದ ಅನುರಾಧ (ಸಾಮಾನ್ಯ), ನಾಗಮಂಗಲದಿಂದ ಕೆ.ಎನ್.ಪುಷ್ಪ (ಸಾಮಾನ್ಯ), ಪಾಂಡವಪುರ ತಾಲೂಕಿನಿಂದ ಸಿ.ಕೆ.ಮೀನಾಕ್ಷಿ (ಸಾಮಾನ್ಯ), ಶ್ರೀರಂಗಪಟ್ಟಣದಿಂದ ಎನ್.ಲತಾ (ಸಾಮಾನ್ಯ), ಕೆ.ಶ್ವೇತಾ (ಪರಿಶಿಷ್ಟ ಪಂಗಡ) ಎಂ.ಎಸ್. ಸುಜಾತಮಣಿ (ಪರಿಶಿಷ್ಟ ಜಾತಿ) ಪುಟ್ಟಮ್ಮ ಮಾಯಣ್ಣಗೌಡ (ಹಿಂದುಳಿದ ವರ್ಗ ಬಿ) ಹಾಗೂ ಎಂ.ಬಿ.ಶಕುಂತಳಾ (ಹಿಂದುಳಿದ ವರ್ಗ ಎ) ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ಶುಕ್ರವಾರ ಬೆಳಗ್ಗೆ ೧೧ ರಿಂದ ೧೨ರವರೆಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುಜಾತ ಕೃಷ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಶಕುಂತಳಾ ಹಾಗೂ ಲೀಲಾವತಮ್ಮಣ್ಣಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ತೆಗೆಯಲು ಮಧ್ಯಾಹ್ನ ೨ ರಿಂದ ೨.೩೦ ರವರೆಗೆ ಅವಕಾಶ ಕಲ್ಪಿಸಿತ್ತು. ನಿರ್ದೇಶಕರೆಲ್ಲರೂ ಲೀಲಾವತ್ತಮ್ಮಣಿ ಅವರ ಮನವೊಲಿಸಿ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.ಅಧ್ಯಕ್ಷ ಸ್ಥಾನಕ್ಕೆ ಸುಜಾತಕೃಷ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಸುಜಾತಕೃಷ್ಣ ಹಾಗೂ ಉಪಾಧ್ಯಕ್ಷ ಸ್ಥಾನ ಎಂ.ಬಿ.ಶಕುಂತಳಾ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಕೆ.ಅನಿತಾ ಘೋಷಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು.
ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಜಿಲ್ಲೆಯ ಏಕೈಕ ಮಹಿಳಾ ಸಹಕಾರ ಬ್ಯಾಂಕ್ ಇದಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸೋಣ ಎಂದರು.