ಸಿದ್ದಾಪುರದ ಬೆಳೆಗಾರ ಗಣಪತಿ ಸೇರಿದಂತೆ ಹಲವರನ್ನು ಬಲಿ ಪಡೆದು ಸಾರ್ವಜನಿಕರಿಗೆ ಉಪಟಳ ನೀಡುತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಸಿದ್ದಾಪುರ: ಸಿದ್ದಾಪುರದ ಬೆಳೆಗಾರ ಗಣಪತಿ ಸೇರಿದಂತೆ ಹಲವರನ್ನು ಬಲಿ ಪಡೆದು ಸಾರ್ವಜನಿಕರಿಗೆ ಉಪಟಳ ನೀಡುತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.ಕಾಡಾನೆ ದಾಳಿಯಿಂದ ಗುರುವಾರ ಮಧ್ಯಾಹ್ನ ತನ್ನ ತೋಟಕ್ಕೆ ತೆರಳಿದ್ದ ಬೆಳೆಗಾರ ಗಣಪತಿ ಬಲಿಯಾಗಿದ್ದರು. ಕಾಡಾನೆ ದಾಳಿಯಿಂದ ಸಾರ್ವಜನಿಕರು ಬೆಳೆಗಾರರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಶಾಶ್ವತ ಪರಿಹಾರಕ್ಕೆ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟಗೆ ತೆಗೆದುಕೊಂಡರು. ಶಾಸಕ ಎ ಎಸ್ ಪೊನ್ನಣ್ಣ ಕೂಡ ಕಾಡಾನೆ ಸೆರೆ ಹಿಡಿಯಲು ಸೂಚಿಸಿದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿಯಲು ತೀರ್ಮಾನಿಸಿತು.
ಶುಕ್ರವಾರ ಬೆಳಗಿನಿಂದಲೇ 6 ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಹುಡುಕಾಟ ನಡೆಸಿ ನಂತರ ಚೆನ್ನಯ್ಯನಕೋಟೆ ಬಾಡಗ ಬಾಣಂಗಾಲ ಸಮೀಪದ ಕಾಫಿ ತೋಟದಲ್ಲಿ ಪತ್ತೆಯಾದ ಒಂಟಿ ಸಲಗವನ್ನು ಅರವಳಿಕೆ ನೀಡಿ ಯಶಸ್ವಿಯಾಗಿ ಸೆರೆ ಹಿಡಿದರು. ಕಾಡಾನೆ ಸೆರೆಯಿಂದ ಸಾರ್ವಜನಿಕರು ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದು ತಾತ್ಕಾಲಿಕವಾಗಿ ಆತಂಕ ದೂರವಾಗಿದ್ದು ಇನ್ನು ಜಿಲ್ಲೆಯ ಹಲವು ಭಾಗಗಳ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಕಾರ್ಯಾಚರಣೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಕಂಜನ್, ಹರ್ಷ, ಅಯ್ಯಪ್ಪ, ಧನುಂಜಯ, ಸುಗ್ರೀವಾ, ಪ್ರಶಾಂತ್ ಸಾಕಾನೆಗಳೊಂದಿಗೆ ಡಿಸಿಎಫ್ ಜಗನ್ನಾಥ್, ಎಸಿಫ್ ಜಸೀನಾ ಭಾನು, ಆರ್ ಎಫ್ ಓ ಗೋಪಾಲ್ , ಡಿ ಆರ್ ಎಫ್ ಓ ಶಿವರಾಂ ಸೇರಿದಂತೆ ಅರಣ್ಯ ಇಲಾಖಾ ಅಧಿಕಾರಿಗಳು ಸಿಬ್ಬಂಧಿಗಳು , ವಿವಿಧ ವಲಯದ ಆರ್ ಆರ್ ಟಿ ಸಿಬ್ಬಂದಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.