ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕೆಂಗಾರ್ ಕೊಪ್ಪಲು ಗ್ರಾಮದ ಕಬ್ಬಿನ ಆಲೆ ಮನೆಗೆ ತಡರಾತ್ರಿ ಕೇರಳದಿಂದ ತ್ಯಾಜ್ಯದ ಕಸ ತುಂಬಿದ ಲಾರಿ ಬರುತ್ತಿದ್ದಂತೆ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೇರಳದ ಆಸ್ಪತ್ರೆಯಲ್ಲಿನ ತ್ಯಾಜ್ಯ, ಉಪಯೋಗಿಸಿ ಬೀಸಾಡುವಂತ ಪ್ಲಾಸ್ಟಿಕ್ ರಬ್ಬರ್ ಸೇರಿ ಮನೆ ಕಸಗಳನ್ನು ಲಾರಿ ಮೂಲಕ ತಂದು ಅದನ್ನು ವಿಂಗಡಣೆ ಮಾಡಿ, ಪ್ಲಾಸ್ಟಿಕ್ ದಪ್ಪ ಕಸವನ್ನು ಆಲೆಮನೆಗಳಿಗೆ ಬೆಲ್ಲ ಬೇಯಿಸುವ ಒಲೆಗಳಿಗೆ ಹಾಕಿ, ಬೆಲ್ಲ ಬೇಯಿಸಲು ಉಪಯೋಗಿಸುವ ಉದ್ದೇಶದಿಂದ ಜಿಲ್ಲೆಯ ಆಲೆಮನೆ ಜಾಗದಲ್ಲಿ ಅನಧಿಕೃತವಾಗಿ ಶೇಖರಣೆ ಮಾಡಲಾಗುತ್ತಿದೆ. ಇದರಿಂದ ಕಪ್ಪನೆ ಹೊಗೆ ಬಂದು ಪರಿಸರವನ್ನು ಹಾಳು ಮಾಡುತ್ತಿದೆ. ಜೊತೆಗೆ ಉಳಿದ ಉಡಿ ಕಸಗಳನ್ನು ಮೂಟೆ ಕಟ್ಟಿ ನಿರ್ಜನ ಪ್ರದೇಶದ ರಸ್ತೆ ಬದಿಯಲ್ಲಿ ತ್ಯಾಜ್ಯ ತುಂಬಿದ ಚೀಲಗಳನ್ನು ಎಸೆದು ಹೋಗುವುದು ಈ ಲಾರಿಯಲ್ಲಿ ಬರುವವರ ಕೆಲಸವಾಗಿದೆ.ಈ ಬಗ್ಗೆ ಕಳೆದ ಎರಡು ತಿಂಗಳ ಹಿಂದೆ ಕಿರಂಗೂರು ಗ್ರಾಮ ಪಂಚಾಯಿತಿ ಪಿಡಿಒ ರವರ ಗಮನಕ್ಕೆ ತಂದರೆ, ಇದು ಗ್ರಾಮ ಠಾಣೆ ವ್ಯಾಪ್ತಿ ಬರುವುದಿಲ್ಲ, ಇದಕ್ಕೂ ನಮಗೂ ಸಂಬಂಭವಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಕನಿಷ್ಠ ಸ್ಥಳ ಪರಿಶೀಲನೆ ಮಾಡದೆ ಪರಿಸರವನ್ನು ನಾಶ ಮಾಡಲು ಉಳ್ಳವರ ಜೊತೆ ಕೈಜೋಡಿಸಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದೂರಿದರು.
ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯದ ಚೀಲಗಳು ಬಿದ್ದಿವೆ. ಈ ಮೂಟೆಗಳಲ್ಲಿ ಏನಿದೆ ಎಂದು ನೋಡುವವರಿಲ್ಲ. ಕೇರಳದಿಂದ ಪ್ರತಿ ದಿನ ರಾತ್ರೋರಾತ್ರಿ ಲಾರಿಗಳ ಮೂಲಕ ಇಂತಹ ತ್ಯಾಜ್ಯಗಳನ್ನು ತಂದು ಹರಡುವುದನ್ನು ನಿಲ್ಲಿಸಬೇಕು. ಸಂಬಂಧಪಟ್ಟವರು ಕೂಡಲೇ ಲಾರಿಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದೂರು ನೀಡಿ ಮನವಿ ಮಾಡಿದ್ದಾರೆ.
ರವಿ ಕಿರಂಗೂರು, ಚಂದ್ರು, ಕಿರಂಗೂರು ಮಹೇಶ್, ಕೆಂಗಾಕೊಪ್ಪಲು ಗ್ರಾಮಸ್ಥರು ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರು ಇದ್ದರು.