ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪಘಾತ ಮಾಡಿ ಪರಾರಿಯಾಗುವ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಚಾಲಕರಿಗೆ ಮಾರಕವಾಗುವ ರೀತಿ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿ ಬುಧವಾರ ತಡರಾತ್ರಿಯಿಂದ ಲಾರಿ ಮುಷ್ಕರ ಆರಂಭವಾಗಿದ್ದು, ಸರಕು ಸಾಗಣಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಜನ ಸಾಮಾನ್ಯರಿಗೆ ಅಷ್ಟೊಂದು ಬಿಸಿ ತಟ್ಟಿಲ್ಲ.ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ಬೆಂಬಲಿಸಿ ಇಲ್ಲಿನ ಯಶವಂತಪುರದಲ್ಲಿರುವ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್, ಕಂಠೀರವ ನಗರದ ಟರ್ಮಿನಲ್ಗಳಲ್ಲಿ ಸಾವಿರಾರು ಲಾರಿಗಳು ನಿಂತಿವೆ. ಜೈ ಕರ್ನಾಟಕ ಲಾರಿ ಮಾಲೀಕರ ಸಂಘ, ಬೆಂಗಳೂರು ಲಾರಿ ಮಾಲೀಕರ ಸಂಘಗಳು ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿವೆ.
ನಗರಕ್ಕೆ ಹಾಲು, ಇಂಧನ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತರುವ ಲಾರಿಗಳನ್ನು ಹೊರತುಪಡಿಸಿ ಇನ್ನಾವುದೇ ಲಾರಿಗಳೂ ಬಂದಿಲ್ಲ. ನಗರದ ಹೊರವಲಯದಲ್ಲೂ ಲಾರಿಗಳು ನಿಂತ ಪರಿಣಾಮ ಸರಕುಗಳು ಒಳಗೆ ಬರುತ್ತಿಲ್ಲ, ಹೊರ ಊರುಗಳಿಗೂ ಹೋಗುತ್ತಿಲ್ಲ. ಮೊದಲ ದಿನ ಜನಸಾಮಾನ್ಯರಿಗೆ ಮುಷ್ಕರ ಅಷ್ಟೊಂದು ಬಿಸಿ ಮುಟ್ಟದಿದ್ದರೂ ಧರಣಿ ಮುಂದುವರಿದರೆ ತೊಂದರೆಯಾಗುವ ಸಾಧ್ಯತೆಯಿದೆ.ವೈಟ್ಫೀಲ್ಡ್ನಲ್ಲಿರುವ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ನಲ್ಲಿ ಮೂರು ರೈಲುಗಳು ಸರಕುಗಳನ್ನು ಅನ್ಲೋಡ್ ಮಾಡಲಾಗದೆ ಹಳಿಯಲ್ಲೇ ನಿಂತಿವೆ. ಅದರ ಜೊತೆಗೆ ಮಾಲೂರಿನ ಬಳಿಯೂ ಸರಕು ಸಾಗಣೆ ರೈಲು ನಿಂತಿದೆ. ಗೊಬ್ಬರ, ಗೋಧಿ, ಆಲೂಗಡ್ಡೆ ಸೇರಿ ಇತರ ಸರಕುಗಳು ಇದರಲ್ಲಿವೆ. ನೈಋತ್ಯ ರೈಲ್ವೆ ಬೆಂಗಳೂರು ವಲಯದಿಂದ ಲಾರಿ ಅಸೋಸಿಯೇಶನ್ ಜೊತೆ ಮಾತನಾಡಿ ಸರಕು ಅನ್ಲೋಡ್ ಮಾಡಲು ಮನವಿ ಮಾಡಲಾಗಿದ್ದು ಈ ಕುರಿತು ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ತಿಳಿಸಿದರು.
ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕನಿಷ್ಠ 300 ಲಾರಿಗಳು ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಸೇರಿ ಇನ್ನಿತರ ಕೃಷಿ ಉತ್ಪನ್ನ, ತರಕಾರಿ ಹೊತ್ತು ಬರುತ್ತವೆ. ಆದರೆ, ಗುರುವಾರ ಕೇವಲ 181 ಲಾರಿಗಳು ಬಂದಿವೆ. ಕಲಾಸಿಪಾಳ್ಯ, ಬಿನ್ನಿಮಿಲ್ ತರಕಾರಿ ಮಾರುಕಟ್ಟೆಗೆ ಲಘು ಸರಕು ವಾಹನಗಳಲ್ಲಿ ತರಕಾರಿ, ಹಣ್ಣುಗಳು ಬಂದಿವೆ. ದಾಸನಪುರ ಮಾರುಕಟ್ಟೆಗೂ ಹೆಚ್ಚಿನ ಲಾರಿಗಳು ಬಂದಿಲ್ಲ. ಆದರೆ, ಇಂದಿನ ವಹಿವಾಟು ಹಾಗೂ ಟೆಂಡರ್ನಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ಯಶವಂತಪುರ ಎಪಿಎಂಸಿ ಕಾರ್ಯದರ್ಶಿ ಕೆ.ಸಿ.ದೊರೆಸ್ವಾಮಿ ತಿಳಿಸಿದರು.‘ಕನ್ನಡಪ್ರಭ’ ಜೊತೆ ಮಾತನಾಡಿದ ಬೆಂಗಳೂರು ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಚೆನ್ನಾರೆಡ್ಡಿ, ಗುರುವಾರ ಶೇ.80ರಷ್ಟು ಲಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದವು. ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಲಾರಿ ಮಾಲೀಕರ ಸಂಘಗಳು ನಮಗೆ ಬೆಂಬಲ ನೀಡಿವೆ. ಶುಕ್ರವಾರದಿಂದ ಮುಷ್ಕರ ಇನ್ನಷ್ಟು ಜೋರಾಗಿ ನಡೆಯಲಿದ್ದು, ಹೆಚ್ಚಿನವರು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.