ಸಿದ್ದು ಸಿಎಂ ಆದ ಮೇಲೆ ಲವ್ ಜಿಹಾದ್, ಗೋಹತ್ಯೆ ಹೆಚ್ಚಳ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

KannadaprabhaNewsNetwork | Updated : Apr 19 2025, 11:13 AM IST

ಸಾರಾಂಶ

ರಾಜ್ಯ ಸರ್ಕಾರದ ಬೆಲೆ ಏರಿಕೆ ಧೋರಣೆ ಸೇರಿದಂತೆ ಹಲವಾರು ಜನವಿರೋಧಿ ನೀತಿಗಳ ವಿರುದ್ಧ ಕಳೆದ 2 ವಾರದಿಂದ ಬಿಜೆಪಿ ಶುರು ಮಾಡಿರುವ ಜನಾಕ್ರೋಶಯಾತ್ರೆ ಕಲಬುರಗಿಯಲ್ಲಿ ಖರ್ಗೆ ಕುಟುಂಬದ ವಿರುದ್ಧದ ಬಿಜೆಪಿ ಘಟಾನುಘಟಿಗಳ ಆಕ್ರೋಶಯಾತ್ರೆಯಾಗಿ ಪರಿವರ್ತನವಾಗಿತ್ತು.

  ಕಲಬುರಗಿ : ರಾಜ್ಯ ಸರ್ಕಾರದ ಬೆಲೆ ಏರಿಕೆ ಧೋರಣೆ ಸೇರಿದಂತೆ ಹಲವಾರು ಜನವಿರೋಧಿ ನೀತಿಗಳ ವಿರುದ್ಧ ಕಳೆದ 2 ವಾರದಿಂದ ಬಿಜೆಪಿ ಶುರು ಮಾಡಿರುವ ಜನಾಕ್ರೋಶಯಾತ್ರೆ ಕಲಬುರಗಿಯಲ್ಲಿ ಖರ್ಗೆ ಕುಟುಂಬದ ವಿರುದ್ಧದ ಬಿಜೆಪಿ ಘಟಾನುಘಟಿಗಳ ಆಕ್ರೋಶಯಾತ್ರೆಯಾಗಿ ಪರಿವರ್ತನವಾಗಿತ್ತು.

ಯಾತ್ರೆಯ ಹಿನ್ನೆಲೆಯಲ್ಲಿ ಇಲ್ಲಿನ ಡಿಸಿ ಕಚೇರಿ ಮುಂಭಾಗದ ರಸ್ತೆಯಲ್ಲಿನ ಬಹಿರಂಗ ವೇದಿಕೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಲ್ಯಾಣ ಕರ್ನಾಟಕ ಹಿಂದುಳಿಯಲು ಖರ್ಗೆ ಕುಟುಂಬ ಕಾರಣವೆಂದು ದೂಷಿಸುತ್ತ ದಲಿತರ ಉದ್ದಾರಕ್ಕೆ ಏನ್‌ ಮಾಡಿದ್ದೀರಿ ಎಂದು ಪ್ರಶ್ನೆ ಹಾಕಿದರು. ಮಾಜಿ ಸಚಿವ ಶ್ರೀರಾಮುಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಏಕ ವಚನದಲ್ಲೇ ಖರ್ಗೆಯವರನ್ನ ಜರಿದರಲ್ಲದೆ ರಾಜ್ಯ ಸರ್ಕಾರ ಮೋದಿ- ಷಾ ಪತನ ಮಾಡೋದಿಲ್ಲ, ಬದಲಾಗಿ ಎಐಸಿಸಿ ಅಧ್ಯಕ್ಷ ಖರ್ಗೆಯವರೇ ಸಮಯ ನೋಡಿಕೊಂಡು ತಮ್ಮ ಪುತ್ರನಿಗೆ ಸಿಎಂ ಪಟ್ಟಾಭಿಷೇಕ ಮಾಡಲು ಸಂಚು ರೂಪಿಸುತ್ತಾರೆಂದು ಮಾತಲ್ಲಿ ತಿವಿದರು.

ಜಗತ್ ಸರ್ಕಲ್‌ನಿಂದ ಹೊರಟ ಜನಾಕ್ರೋಶ ಯಾತ್ರೆ ಮುಖ್ಯ ಬಿದಿಯುದ್ದಕ್ಕೂ ನಡೆದು ಬಂದು ಡಿಸಿ ಕಚೇರಿ ಮುಂದಿರುವ ಖರ್ಗೆ ಮನೆಯ ರಸ್ತೆಯಲ್ಲೇ ಬಹಿರಂಗ ಸಭೆಯಾಗಿ ಪರಿವರ್ತಿತವಾಯ್ತು. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ದ ಗುಡುಗಿದ ಶ್ರೀರಾಮುಲು, ಛಲವಾದಿ ನಾರಾಯಣಸ್ವಾಮಿ ಖರ್ಗೆ ವಿರುದ್ಧ ಆಕ್ರೋಶ ಹೊರಹಾಕಿದರು.ಸಿದ್ದರಾಮಯ್ಯ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಹಣ ಇಡ್ತಾರೆ:ಸಿದ್ದರಾಮಯ್ಯ ಸಿಎಂ ಆದ ಮೇಲೆ ರಾಜ್ಯದಲ್ಲಿ ಲವ್ ಜಿಹಾದ್ - ಗೋಹತ್ಯೆ ಹೆಚ್ಚಾಗುತ್ತಿವೆ, ಆದ್ರೂ ಸಿದ್ರಾಮಯ್ಯ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಅಂತ ಹಣ ಇಡ್ತಾರೆ. ಲವ್ ಜಿಹಾದ್ ಮೂಲಕ ಸಾವಿರಾರು ಹಿಂದೂ ಮಹಿಳೆಯರ ಜೀವನ ಜೀವ ಹಾಳು ಮಾಡಲಾಗುತ್ತಿದೆ. ಇಂತವರ ರಕ್ಷಣೆಗೆ ಮುಂದಾಗುವ ಬದಲು ಸಿಎಂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದರು.

ರಾಜ್ಯದ ಜನರನ್ನ ಸಿಎಂ ಭಿಕ್ಷುಕರಂತೆ ಕಾಣ್ತಿದ್ದಾರೆ

ಜನಾಕ್ರೋಶ ಯಾತ್ರೆ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಸಿಎಂ ಕುರ್ಚಿ ಮೇಲೆ ಕೂತ ಮೇಲೆ ಸಿದ್ರಾಮಯ್ಯಗೆ ಏನಾಗ್ತಿದೆ ಅರ್ಥ ಆಗ್ತಿಲ್ಲ, ಅವರು ಕೊಟ್ಟ ಭರವಸೆಗಳನ್ನು ಸಂಪೂರ್ಣ ಮರೆತು ಹೋಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಘೋಷಣೆಗಳನ್ನು ನೋಡಿ ನಾವೇ ಆತಂಕಗೊಂಡಿದ್ವಿ. ಚುನಾವಣೆ ವೇಳೆ ಓಟ್ ಹಾಕುವ ಸಂದರ್ಭದಲ್ಲಿ ಗ್ಯಾರಂಟಿ ಹಣ ಜನರಿಗೆ ಹಾಕಿದ್ರು. ರಾಜ್ಯದ ಜನರನ್ನು ಸಿಎಂ ಬಿಕ್ಷುಕರಂತೆ ನೋಡ್ತಿದಾರೆಂದು ತಿವಿದರು.4 ಕೋಟಿ ವೆಚ್ಚ ಮಾಡಿ ಸಾವಿರ ಜನರಿಗೆ ಉದ್ಯೋಗ!:

ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ್‌ ಇಬ್ಬರೂ ಕಲಬುರಗಿ ವಿಭಾಗದ ನಿರುದ್ಯೋಗಿಗಳಿಗೆ ನೌಕರಿ ಕೊಡುವುದಾಗಿ ₹4 ಕೋಟಿ ಖರ್ಚು ಮಾಡಿ 1200 ಜನರಿಗೆ ಖಾಸಗಿಯಲ್ಲಿ ನೌಕರಿ ಕೊಡಿಸಿದ್ದಾರೆ. ಇದಕ್ಕೆ ಏನನ್ನಬೇಕೋ ಗೊತ್ತಾಗುತ್ತಿಲ್ಲವೆಂದು ಜರಿದರು. ಉದ್ಯಮಿಗಳು ಬಂಡವಾಳ ಹೂಡಿಕೆಗೆ ಮುಂದೆ ಬರ್ತಿಲ್ಲ ಕಾಂಗ್ರೆಸ್ ಸರ್ಕಾರದ ನೀತಿ ಪರಿಣಾಮ ಉದ್ಯಮಿಗಳು ಹೊರ ರಾಜ್ಯಕ್ಕೆ ಹೋಗ್ತಿದಾರೆ. ವಿದ್ಯುತ್‌, ಡಿಸೆಲ್ ದರ ಹೆಚ್ಚಳ ರೈತರು ಟ್ರ್ಯಾಕ್ಟರ್ ಟಿಲ್ಲರ್ ಬಳಕೆ ಕಷ್ಟವಾಗ್ತಿದೆ. ಇವರು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆಂದರು.

ಕಲಬುರಗಿಯಲ್ಲಿ ಸ್ಯಾಂಡ್ ಮಾಫಿಯಾ ಜೋರಾಗಿದೆ. ಸಾವಿರಾರು ಕೋಟಿ ರುಪಾಯಿ ಮೌಲ್ಯದ ಸಾಂಡ್ ಲೂಟಿ ಆಗ್ತಿದೆ. ಇಲ್ಲಿನ ಮೂರ್ಖ ರಾಜಕಾರಣಿಗಳು ಒಂದು ಜೀವಕ್ಕೆ ಹತ್ತು ಲಕ್ಷ ರು. ಫಿಕ್ಸ್‌ ಮಾಡಿದ್ದಾರೆ. ಇವರ ಒತ್ತಡಕ್ಕೆ ಹೆದರಿ ಯಾರಾದ್ರೂ ಆತ್ಮಹತ್ಯೆ ಮಾಡಿಕೊಂಡ್ರೆ ಅವರಿಗೆ ಹತ್ತು ಲಕ್ಷ ರು. ಫಿಕ್ಸ್ ಮಾಡ್ತಾರೆ ಇಲ್ಲಿನ ರಾಜಕಾರಣಿಗಳು. ಇಂತಹ ನೀಚ ರಾಜಕಾರಣ ಮಾಡಬೇಕಾ ? ಎಂದು ಕಿಡಿ ಕಾರಿದರು.ಹೊಂದಾಣಿಕೆ ರಾಜಕಾರಣ ಬೇಡ

ಇಲ್ಲಿನ ಕಾಂಗ್ರೆಸ್‌ನ ಕೆಟ್ಟ ರಾಜಕಾರಣಕ್ಕೆ ಬಿಜೆಪಿ, ಹಿಂದೂ ಕಾರ್ಯಕರ್ತರು ಜೀವ ಬಿಟ್ಟಿದ್ದಾರೆ. ನಮ್ಮ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರ ಜೀವದ ಜೊತೆ ಚಲ್ಲಾಟ ಆಡುವ ಕೆಲಸ ನಮ್ಮ ಪಕ್ಷದ ಯಾರೊಬ್ಬ ಮುಖಂಡರೂ ಮಾಡಬಾರದು. ನಮ್ಮ ಕಾರ್ಯಕರ್ತರಿಗೆ ಅಪಮಾನ ಆಗದ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ವಿಜಯೇಂದ್ರ ತಮ್ಮ ಪಕ್ಷದ ಮುಖಂಡರಿಗೆ ಎಚ್ಚರಿಕೆ ಕೊಟ್ಟರು.

ಇನ್ನುಳಿದ ಮೂರು ವರ್ಷ ಹೋರಾಟದ ಪರ್ವ ನಡೆಯಲಿ ಎಂದು ಜಿಲ್ಲೆಯ ಮುಖಂಡರಿಗೆ ಆಗ್ರಹಿಸುವೆ. ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡುವ ಕೆಲಸ ಮಾಡಿ. ನಮ್ಮ ಕಾರ್ಯಕರ್ತರ ತಂಟೆಗೆ ಬರುವ ಯಾವ ಗಂಡಸಿದಾನೋ ಪಾಲಿಟಿಕ್ಸನಲ್ಲಿ ನಾನೂ ನೋಡ್ತೆನೆ. ಇಲ್ಲಿ ಅಡ್ಜಸ್ಟಮೆಂಟ್ ರಾಜಕಾರಣ ಮಾಡಲು ನಮ್ಮ ಕಾರ್ಯಕರ್ತರೆನೂ ಪುಕ್ಕಟ್ಟೆ ಬಂದಿಲ್ಲ. ಯಾವನೇ ಬರಲಿ ಅವನ ಶಕ್ತಿ ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ. ನೀವು ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಬಿಜೆಪಿ ಮುಖಂಡರಿಗೆ ವೇದಿಕೆಯಲ್ಲೇ ವಿಜಯೇಂದ್ರ ಖಡಕ್‌ ಸಂದೇಶ ರವಾನಿಸಿದರು.

ದಲಿತರ ಉದ್ದಾರಕ್ಕೆ ನೀವೇನು ಮಾಡಿದ್ದಿರಿ?:

ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ದಲಿತರ ಉದ್ದಾರಕ್ಕೆ ನೀವೇನು ಮಾಡಿದ್ದೀರಿ?. ಖರ್ಗೆ ಅವರೇ ಉತ್ತರ ಕೊಡಿ, ಈ ದೇಶದಲಿ ದಲಿತರನ್ನ ಬಿಜೆಪಿ ಗೌರವಿಸುತ್ತೆ. ಈ ಭಾಗದಲ್ಲಿ ದಲಿತರು ಯಾವುದೋ ಕಾರಣಕ್ಕೆ ಭಯಪಟ್ಟು ನಮ್ಮಿಂದ ದೂರ ನಿಂತಿದ್ದಾರೆ. ಸಾಮಾಜಿಕ ನ್ಯಾಯ ಅಂಬೇಡ್ಕರ್ ಚಿಂತನೆಯೇ ಹೊರತು ಕಾಂಗ್ರೆಸ್ ಚಿಂತನೆ ಅಲ್ಲ ಎಂದು ತಿವಿದರು.

ಮೋದಿ‌ ಅವರು ತ್ರೀವಳಿ ತಲಾಕ್ ಕಿತ್ತು ಬಿಸಾಕಿದ್ರು. ಆ ಮೂಲಕ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಕೊಟ್ಟಿದ್ದು ಮೋದಿಜಿ ಮುಸ್ಲಿಂರಿಗೆ ಶೇ .4ರಷ್ಟು ಮೀಸಲಾತಿ ಕೊಡಲಿಕ್ಕೆ ಬರೋದೆ ಇಲ್ಲ. ಈ ವಿಚಾರ ಕಾಂಗ್ರೆಸ್ ನವರಿಗೂ ಗೊತ್ತು. ಓಟ್ ಬ್ಯಾಂಕ್ ಆಗಿ ಅವರನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರಷ್ಟೆ ಎಂದರು.ವಕ್ಫ್‌ ಜಮೀನನ್ನು ಶ್ರೀಮಂತ ವರ್ಗದ ಮುಸ್ಲಿಂರು ಮೌಲ್ವಿಗಳು ಅದನ್ನೆಲ್ಲಾ ಹೊಡೆದುಕೊಂಡು ತಿಂತಿದಾರೆ. ಮಾನಪ್ಪಾಡಿ ರಿಪೋರ್ಟ್‌ನಲ್ಲಿ ಕಲಬುರಗಿ ಜಿಲ್ಲೆಯಲ್ಲಿನ ದೊಡ್ಡ ದೊಡ್ಡ ನಾಯಕರು ಲೂಟಿ ಮಾಡಿರುವ ಹೆಸರಿದೆ.

ಇದನ್ನು ತಪ್ಪಿಸಬೇಕು. ಮುಸ್ಲಿಂನಲ್ಲಿರುವ ಬಡವರಿಗೆ ಅನುಕೂಲ ಆಗಬೇಕು ಅನ್ನೋ ಕಾರಣಕ್ಕೆ ಮೋದಿ ಈ ಕ್ರಮ ಕೈಗೊಂಡಿದ್ದಾರೆ. ವಕ್ಫ್‌ನ ಜಮೀನು ನಾವು ಒಂದು ಇಂಚೂ ಕಿತ್ತುಕೊಳ್ಳಲ್ಲ. ಅದನ್ನು ಅದೇ ಕಮುನಿಟಿಯ ಬಡವರಿಗೆ ಮೋದಿ ಹಂಚಿ ಬಿಡ್ತಾರೆಂದರು.ಜಾತಿ ಗಣತಿಯಲ್ಲಿ ಮೊದಲು ಲಿಂಗಾಯತರೇ ನಂಬರ್ ಒನ್ ಅಂದ್ರಿ? ಎರಡನೇ ಪಟ್ಟಿಯಲ್ಲಿ ದಲಿತರು ಅತಿ ಹೆಚ್ಚು ಅಂದ್ರಿ, ಈಗ ಮುಸ್ಲಿಂ ಅತಿ ಹೆಚ್ಚು ಅಂತಿದಿರಿ ಅಂದ್ರೆ ಅತಿ ಹೆಚ್ಚು ಅಂದ ಮೇಲೆ ಅಲ್ಪಸಂಖ್ಯಾತು ಹೆಂಗೆ ಆಗ್ತಿರಿ?.

ಇದು ಕಾಂಗ್ರೆಸ್ ಕುತಂತ್ರ. ಅವರ ಉದ್ದೇಶ ನಿಮ್ಮ ಉದ್ದಾರ ಅಲ್ಲ, ಮುಸ್ಲಿಂ ಬಂಧುಗಳು ಅರ್ಥ ಮಾಡಿಕೊಳ್ಳಿ ಎಂದರು.

ಖರ್ಗೆಯವರೇ ಸರ್ಕಾರ ಬೀಳಿಸ್ತಾರೆ : ರಾಮುಲು ಬಾಂಬ್‌

ಮಾಜಿ ಸಚಿವ ಬಿ. ಶ್ರೀರಾಮಲು ಮಾತನಾಡಿ,ರಾಜ್ಯದಲ್ಲಿನ ವಿಫಲ ಸರ್ಕಾರ ಇನ್ನು ಬಹಳ ದಿನ ಇರಲ್ಲ. ನಾನು ಸಿಎಂ ಆಗಬೇಕು.. ನಾನು ಸಿಎಂ ಆಗಿ ಇರಬೇಕು ಅಂತ ಡಿಕೆಶಿ, ಸಿದ್ರಾಮಯ್ಯ ನಡುವೆ ಕಿತ್ತಾಟ ನಡೆದಿದೆ.

ಈಗ ಸಿದ್ರಾಮಯ್ಯ ಅವರ ಸಿಎಂ ಅವಧಿ ಕೇವಲ 220 ದಿನ ಮಾತ್ರ ಉಳಿದಿದೆ. ಆ ನಂತರ ಸಿಎಂ ಆಗಿ ಸಿದ್ರಾಮಯ್ಯ ಇರ್ತಾರಾ ? ಮಾಜಿ ಆಗ್ತಾರಾ ? ಡಿಕೆ ಶಿವಕುಮಾರ ಸಿಎಂ ಆಗ್ತಾರಾ? ಗೊತ್ತಿಲ್ಲ. ಗಂಡ ಹೆಂಡತಿ ಜಗಳದಲ್ಲಿ ಮೂರನವೇಯವರನ್ನು ನುಗ್ಗಿಸಲು ಮಲ್ಲಿಕಾರ್ಜುನ ಖರ್ಗೆ ಪ್ಲ್ಯಾನ್ ಮಾಡ್ತಿದ್ದಾರೆ. ಡಿಕೆಶಿ, ಸಿದ್ರಾಮಯ್ಯ ಜಗಳದಲ್ಲಿ ಅವರ ಮಗ ಪ್ರಿಯಾಂಕ್ ಖರ್ಗೆರನ್ನು ಮಧ್ಯದಲ್ಲಿ ತೂರಿಸಿ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ಸರ್ಕಾರ ಬೀಳಿಸ್ತಾರೆಂದು ರಾಮುಲು ಬಾಂಬ್‌ ಹಾಕಿದರು.

ಪ್ರಿಯಾಂಕ್‌ರಿಂದ ಕ.ಕ ಉದ್ಧಾರ ಆಗಲ್ಲ

ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರೇ ನೀವಿರೋವರೆಗೆ ಕಲ್ಯಾಣ ಕರ್ನಾಟಕ ಉದ್ದಾರ ಆಗಲ್ಲ, ನಿಮಗೆ ಆ ದೂರದೃಷ್ಟಿ ಇಲ್ಲ. ನೀವು ಬರೀ ದ್ವೇಷದ ರಾಜಕಾರಣ ಮಾಡುತ್ತಿದ್ದಿರಿ ಎಂದು ತಿವಿದರು.

ಹಾಲಿ ಬೆಲೆ 9 ರು. ಏರಿಕೆ ಆಗಿದ್ದು ಕರ್ನಾಟಕದಲ್ಲಿ ಮಾತ್ರ. ದೇಶದ ಯಾವ ರಾಜ್ಯದಲ್ಲೂ ಈ ರೀತಿ ಇಲ್ಲ

ಈ ಸರ್ಕಾರ 50 ವಸ್ತುಗಳ ಮೇಲೆ ಟಾಕ್ಸ್ ಹಾಕಿ ಬೆಲೆ ಹೆಚ್ಚಳ ಮಾಡಿದ್ದಾರೆ. ಖರ್ಗೆ, ಸೋನಿಯಾ, ರಾಹುಲ್ ಒಕ್ಕೂಟ ಇವರಿಗೆ ಎಷ್ಟು ಟ್ಯಾಕ್ಸ್ ಹಾಕ್ತಿರೋ ಹಾಕಿ ಅಂತ ಪರ್ಮಿಷನ್ ಕೊಟ್ಟಿದೆ ಅನ್ನಿಸುತ್ತೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಬಡ ಜನರ ಜೀವನ ವಿರೋಧಿ ಸರ್ಕಾರ ಎಂದರು.ಪರೀಕ್ಷೆಯಲ್ಲಿ ಎಲ್ಲರೂ ದಾರ ಹಾಕಿಕೊಂಡು ಹೋಗ್ತಿವಿ:

ಬೀದರನಲ್ಲಿ ವಿದ್ಯಾರ್ಥಿಯೊಬ್ಬ ಸಿಇಟಿ ಬರೆಯಲು ಹೋದ್ರೆ ಜನೀವಾರ ಹಾಕಿದ್ದಕ್ಕೆ ಅವಕಾಶ ಕೊಟ್ಟಿಲ್ಲ. ಮುಂದಿನ ಪರೀಕ್ಷೆಯಲ್ಲಿ ಎಲ್ಲರೂ ದಾರ ಹಾಕಿಕೊಂಡು ಹೋಗ್ತಿವಿ. ಅನುಮತಿ ಕೊಡ್ತಿರೋ ಕೊಡಲ್ವೋ ನೋಡ್ತಿವಿ. ಈ ಸರ್ಕಾರ ಈ ರೀತಿ ಮಾಡ್ತಿದೆ ಅಂದ್ರೆ ಇವರಿಗೆ ತಲೆ ಕೆಟ್ಟಿದೆ ಎಂದು ರವಿಕುಮಾರ ಆಕ್ರೋಶ ಹೊರಹಾಕಿದರು.ವಿಪಕ್ಷ ನಾಯಕ ಆರ್‌ ಅಶೋಕ, ಪಿ ರಾಜೀವ್‌ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಜನಾಕ್ರೋಶ ಯಾತ್ರೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಾಸಕರಾದ ಬಸವರಾಜ್ ಮತ್ತಿಮೂಡ, ಶಶಿಲ್‌ ನಮೋಶಿ, ಸುನೀಲ ವಲ್ಯಾಪೂರೆ, ಬಿಜಿ ಪಾಟೀಲ್‌, ಡಾ. ಅವಿನಾಶ ಜಾಧವ್‌, ಮಾಜಿ ಸಂಸದ ಉಮೇಶ ಜಾಧವ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಸುಭಾಸ ಗುತ್ತೇದಾರ್‌, ನಗರಾಧ್ಯಕ್ಷ ಚಂದು ಪಾಟೀಲ್‌, ಅವ್ವಣ್ಣ ಮ್ಯಾಕೇರಿ, ಸಚಿನ್ ಕಡಗಂಚಿ ಜಗದೇವ ಗುತ್ತೇದಾರ ಬಸವರಾಜ್ ಮುನ್ನಳಿ ಶಿವಾನಂದ್ ಪಿಸ್ತಿ ಮಲ್ಲು ಉದ್ನೂರ್ ರಾಜು ದೇವದುರ್ಗಾ ಹೊನ್ನಾಳಿ ಶ್ರೀನಿವಾಸ್ ದೇಸಾಯಿ ರಾಮು ಗುಮ್ಮಟ್ ಮಹೇಶ್ ಚವಾಣ್ ವಿರು ರಾಯ್ ಕೋಡ್, ಮಹಿಳಾ ಮೋರ್ಚಾ ಪದಾಧಿಕಾರಿಗಳು ಸವಿತಾ ಪಾಟೀಲ್ ರಾಜೇಶ್ವರಿ ಮೈತ್ರಿ ಸುವರ್ಣ ವಾಡೆ ಇದ್ದರು.

Share this article